ತುಮಕೂರಿಗೂ ಹಬ್ಬಿದ ಸಾವರ್ಕರ್ ಪೋಟೋ ವಿವಾದ
ತುಮಕೂರು, ಆಗಸ್ಟ್ 16: ತುಮಕೂರು ನಗರದಲ್ಲಿ ವಿನಾಯಕ ದಾಮೋದರ ಸಾವರ್ಕರ್ ಅವರ ಭಾವಚಿತ್ರವಿರುವ ಬ್ಯಾನರ್ ಅನ್ನು ಜನರ ಗುಂಪೊಂದು ಹರಿದಿದ್ದು, ಶಿವಮೊಗ್ಗ, ಬೆಂಗಳೂರು ಮೆಟ್ರೋ ನಂತರ ಈಗ ತುಮಕೂರಿಗೂ ಫೊಟೋ ವಿವಾದ ಹಬ್ಬಿದೆ.
ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ತುಮಕೂರಿನ ಬಿಜಿಎಸ್ ವೃತ್ತದಿಂದ ಬಸ್ ನಿಲ್ದಾಣದ ಕಡೆ ಹೋಗುವಾಗ ಎಂಪ್ರೆಸ್ ಕಾಲೇಜಿನ ಮುಂಭಾಗದಲ್ಲಿ ಹಾಕಿದ್ದ ಸಾವರ್ಕರ್ ಬ್ಯಾನರ್ ಅನ್ನು ಹರಿದು ಹಾಕಲಾಗಿದ್ದು ವಿವಾದ ಈಗ ತುಮಕೂರಿಗೂ ಹಬ್ಬಿದಂತೆ ಆಗಿದೆ.
ಸೋಮವಾರ ಸ್ವಾತಂತ್ರ್ಯ ದಿನಾಚರಣೆ ಮುಗಿದ ಬಳಿಕ ರಾತ್ರಿ ಬ್ಯಾನರ್ ಅನ್ನು ಹರಿದು ಹಾಕಿರುವ ಘಟನೆ ನಡೆದಿದೆ. ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಬಿಜೆಪಿ ಶಾಸಕ ಜ್ಯೋತಿ ಗಣೇಶ ಅವರು ನಗರದ ವಿವಿಧೆಡೆ ಬ್ಯಾನರ್ ಹಾಕಲಾಗಿತ್ತು. ಆದರೆ ಸಾವರ್ಕರ್ ಅವರು ಇರುವ ಬ್ಯಾನರ್ಗಳನ್ನು ಮಾತ್ರ ಹರಿದು ಹಾಕಲಾಗಿದೆ. ಮೂರು ದಿನಗಳ ಹಿಂದೆ ಹಾಕಿದ್ದ ಬ್ಯಾನರ್ಗಳನ್ನು ಮಂಗಳವಾರ ನಗರದ ಪಾಲಿಕೆ ಅಧಿಕಾರಿಗಳು ತೆರವು ಮಾಡಿದ್ದಾರೆ.
ಇನ್ನೂ ಸಾವರ್ಕರ್ ಬ್ಯಾನರ್ ಹರಿದು ಹಾಕಿರುವ ಕಿಡಿಗೇಡಿಗಳನ್ನು ಕಂಡಲ್ಲಿ ಗುಂಡು ಹೊಡೆದು ಸಾಯಿಸಬೇಕು ಎಂದು ಬಿಜೆಪಿ ಮುಖಂಡ ಸೊಗಡು ಶಿವಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ ಜನ ಶಾಂತಿ ನೆಮ್ಮದಿಯಿಂದ ಇದ್ದಾರೆ. ನಮ್ಮ ಜಿಲ್ಲೆ ಮತ್ತೊಂದು ಶಿವಮೊಗ್ಗ, ಕೆಜಿ ಹಳ್ಳಿ, ಡಿಜೆ ಹಳ್ಳಿಯಾಗುವುದು ಬೇಡ. ಈ ಬಗ್ಗೆ ಪೊಲೀಸ್ ಅಧಿಕಾರಿಗಳು ಕ್ರಮವಹಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ನಗರದಲ್ಲಿ ಹಾಕಲಾಗಿದ್ದ ಬ್ಯಾನರ್ ಹಾರಿದು ಹಾಕಿರುವುದು ತಪ್ಪು. ಸಾವರ್ಕರ್ ಕಂಡರೆ ಕೆಲವರಿಗೆ ಭಯ, ಅದಕ್ಕೆ ಬ್ಯಾನರ್ ಹರಿದು ಹಾಕಲಾಗಿದೆ. ಮಂಗಳವಾರ ಬ್ಯಾನರ್ ಅನ್ನು ತೆರವು ಮಾಡಿದ ಪಾಲಿಕೆ ಅಧಿಕಾರಿಯನ್ನು ಅಮಾನತು ಮಾಡಬೇಕು. ದೇಶದ ಏಕತೆ, ಶಾಂತಿ,ನೆಮ್ಮದಿಗೆ ಧಕ್ಕೆ ತರುವವರನ್ನು ಬಂಧಿಸಿ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
Recommended Video