ಉಜ್ಜನಿ ಚೌಡೇಶ್ವರಿ ಅಗ್ನಿಕುಂಡ ವೇಳೆ ಅನಾಹುತ; 30 ಮಂದಿಗೆ ಗಾಯ
ಕುಣಿಗಲ್ (ತುಮಕೂರು), ಏಪ್ರಿಲ್ 24: ಅಗ್ನಿಕುಂಡ ನೋಡಲು ಬಂದ 30 ಮಂದಿಗೆ ಗಾಯವಾದ ಘಟನೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಉಜ್ಜನಿ ಗ್ರಾಮದಲ್ಲಿ ನಡೆದಿದೆ. ಕುಣಿಗಲ್ ತಾಲೂಕಿನ ಉಜ್ಜನಿ ಚೌಡೇಶ್ವರಿ ದೇವಿ ಅಗ್ನಿಕುಂಡ ವೀಕ್ಷಿಸಲು ಭಕ್ತರು ನಿಂತಿದ್ದ ವೇಳೆ ಸಜ್ಜೆ ಕಳಚಿ ಬಿದ್ದು, 30 ಮಂದಿ ಬುಧವಾರ ಬೆಳಗ್ಗೆ ಗಾಯಗೊಂಡಿದ್ದಾರೆ.
ಅಂದಹಾಗೆ, ದೇಶದಲ್ಲೇ ಅತೀ ದೊಡ್ಡ ಅಗ್ನಿ ಕುಂಡ ಎಂಬ ಅಗ್ಗಳಿಕೆ ಉಜ್ಜನಿ ಚೌಡೇಶ್ವರಿ ದೇವಿ ಅಗ್ನಿಕುಂಡಕ್ಕೆ ಇದೆ. ಇದರಲ್ಲಿ ಸಾವಿರಾರು ಮಂದಿ ಭಕ್ತರು ಸೇರಿದ್ದರು. ದೇವಸ್ಥಾನದ ಅಕ್ಕಪಕ್ಕದ ಕಟ್ಟಡಗಳ ಮೇಲೆ ಸಹ ಭಕ್ತರು ನಿಂತುಕೊಂಡಿದ್ದರು. ಹಳೆಯ ಕಟ್ಟಡ ಅಗಿದ್ದರಿಂದ ಜನರ ಭಾರ ಹೆಚ್ಚಾಗಿ, ಸಜ್ಜೆ ಕಳಚಿ ಬಿದ್ದಿದೆ.
ಸಜ್ಜೆ ಮೇಲೆ ನಿಂತಿದ್ದವರೂ ಸೇರಿ ಕೆಳಗೆ ಇದ್ದವರ ಮೇಲೆ ಬಿದ್ದು, ಗಾಯಗಳಾಗಿವೆ. ಈ ದುರ್ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಆಗಿಲ್ಲ. ತೀವ್ರವಾಗಿ ಗಾಯಗೊಂಡವರನ್ನು ಮಂಡ್ಯ ಹಾಗೂ ಬೆಂಗಳೂರು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸಣ್ಣ ಪುಟ್ಟ ಗಾಯಗಳಾದ ರಕ್ಷಿತಾ, ರಂಜಿತಾ, ದಾಸಪ್ಪ, ನಾಗೇಶ್ ಕುಮಾರ್, ನಿಖಿಲ್, ಬೋರಯ್ಯ ಹಾಗೂ ಲಕ್ಷ್ಮಮ್ಮ ಅವರಿಗೆ ಕುಣಿಗಲ್ ನ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.