ಡಿಸಿಎಂ ಸಾಗುವ ಮಾರ್ಗದಲ್ಲಿ ಬಿಜೆಪಿ ಬಾವುಟ: ನೊಟೀಸ್ ಜಾರಿ
ತುಮಕೂರು, ಜೂನ್ 23: ಜಿಲ್ಲಾ ಉಸ್ತುವಾರಿ ಮತ್ತು ಉಪಮುಖ್ಯಮಂತ್ರಿ ಡಾ. ಪರಮೇಶ್ವರ್ ಸಾಗುವ ದಾರಿಯಲ್ಲಿ ಔಷಧ ಮಳಿಗೆಯ ಮುಂದೆ ಬಿಜೆಪಿ ಬಾವುಟ ಹಾಕಿದ್ದಕ್ಕಾಗಿ ಅಂಗಡಿ ಮಾಲೀಕನಿಗೆ ತಿಳವಳಿಕೆ ನೊಟೀಸ್ ಜಾರಿ ಮಾಡಲಾಗಿದೆ.
ಕೊರಟಗೆರೆ, ಕೆಸ್ತೂರು ರಸ್ತೆಯಲ್ಲಿರುವ ಪ್ರಧಾನಮಂತ್ರಿ ಜನರಿಕ್ ಔಷಧ ಮಳಿಗೆಯ ಮುಂದೆ ಬಿಜೆಪಿ ಬಾವುಟ ಹಾಕಲಾಗಿತ್ತು. ಇದನ್ನು ಗಮನಿಸಿದ ಪಿಡಿಓ, ಬಾವುಟ ತೆರವುಗೊಳಿಸಿ, ಇಲ್ಲದಿದ್ದರೆ ಕ್ರಮ ಎದುರಿಸಿ ಎಂದು ಮೌಕಿಕ ಎಚ್ಚರಿಕೆಯನ್ನು ನೀಡಿದ್ದಾರೆಂದು ವರದಿಯಾಗಿದೆ.
ಅಧಿಕಾರಿಗಳ ಸಭೆಯಲ್ಲಿ ಪರಮೇಶ್ವರ್-ರೇವಣ್ಣ ಡಿಶುಂ ಡಿಶುಂ
ಮೇ 23ರಂದು ಲೋಕಸಭಾ ಚುನಾವಣಾ ಫಲಿತಾಂಶದ ದಿನದಂದು, ಬಿಜೆಪಿ ವಿಜಯೋತ್ಸವ ಆಚರಿಸುವ ವೇಳೆ, ಪಕ್ಷದ ಬಾವುಟವನ್ನು ಹಾಕಲಾಗಿತ್ತು. ಬಿಜೆಪಿಯ ಜಿ ಎಸ್ ಬಸವರಾಜ್, ಜೆಡಿಎಸ್ ವರಿಷ್ಠ ದೇವೇಗೌಡ್ರನ್ನು ಸೋಲಿಸಿದ್ದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್ ಮುಖಂಡ ಮತ್ತು ಸಚಿವ ಯು ಟಿ ಖಾದರ್, ಉಪಮುಖ್ಯಮಂತ್ರಿಗಳು ವಿಶಾಲ ಹೃದಯದ ಮನುಷ್ಯರು. ಬಾವುಟ ತೆರವುಗೊಳಿಸಲು ಅವರು ಸೂಚಿಸಿರಲು ಸಾಧ್ಯವಿರಲಿಕ್ಕಿಲ್ಲ ಎಂದು ಹೇಳಿದ್ದಾರೆ.
ಈ ವಿಚಾರದ ಬಗ್ಗೆ ಹೆಚ್ಚಿನ ಮಾಹಿತಿ ನನಗೆ ಲಭ್ಯವಿಲ್ಲ, ಆದರೆ ಪರಮೇಶ್ವರ್ ಅವರನ್ನು ನಾನು ಬಲ್ಲೆ. ಅಧಿಕಾರಿಗಳು ನೊಟೀಸ್ ನೀಡಿರಬಹುದು, ಅದು ಪರಮೇಶ್ವರ್ ಅವರಿಗೆ ತಿಳಿದಿರಲಿಕ್ಕಿಲ್ಲ ಎಂದು ಖಾದರ್ ಹೇಳಿದ್ದಾರೆ.