ಸಂಜನಾ, ರಾಗಿಣಿ ನಟಿಯರಲ್ಲ, ಮಜಾ ಮಾಡುವುದಕ್ಕೆ ಬಂದವರು: ಮುತಾಲಿಕ್
ತುಮಕೂರು, ಸೆಪ್ಟೆಂಬರ್ 4: ಸಿಸಿಬಿ ಪೊಲೀಸರು ಕೇವಲ ವಿಚಾರಣೆ ಮಾಡುವುದು, ನೋಟೀಸ್ ನೀಡುವುದು ಎಂದು ಕಾಲಹರಣದ ನಾಟಕ ಮಾಡಬೇಡಿ. ದಾಖಲೆಗಳಿದ್ದರೆ ಮುಲಾಜಿಲ್ಲದೆ ಡ್ರಗ್ಸ್ ನಂಟು ಹೊಂದಿರುವ ನಟಿಯರನ್ನು ಬಂಧಿಸಿ ಎಂದು ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ವಾಗ್ದಾಳಿ ನಡೆಸಿದರು.
ತುಮಕೂರು ನಗರದಲ್ಲಿ ಈ ಕುರಿತು ಮಾತನಾಡಿದ ಪ್ರಮೋದ್ ಮುತಾಲಿಕ್, ವಿಚಾರಣೆ ಮಾಡುತ್ತೇವೆಂದು ನಾಟಕ ಆಡುವುದು ಬೇಡ. ಬೆಂಕಿ ಇದ್ದಾಗಲೇ ಹೊಗೆ ಬರೋದು. ನಿಮ್ಮ ಬಳಿ ದಾಖಲೆಗಳಿರುವುದರಿಂದಲೇ ಅವರ ಮನೆ ಮೇಲೆ ದಾಳಿ ಮಾಡಿದ್ದೀರಿ. ವಶಕ್ಕೆ ಪಡೆದರೂ ಆ ನಟಿಗೆ ಭಯ ಇಲ್ಲ, ಅವರನ್ನು ಕೂಡಲೇ ಬಂಧಿಸಿ ಎಂದು ಆಗ್ರಹಿಸಿದರು.
ರಾಕೇಶ್ ಸಿದ್ದರಾಮಯ್ಯ ಮೃತಪಟ್ಟಿದ್ದು ಡ್ರಗ್ ಸೇವನೆಯಿಂದ: ಮುತಾಲಿಕ್ ನೇರ ಆರೋಪ
ಸಂಜನಾ, ರಾಗಿಣಿ ಇವರು ಚಿತ್ರ ನಟಿಯರಾ, ಇವರ ಬಳಿ ನಟನೆ ಇದೆಯೇ? ಇವರೆಲ್ಲಾ ಮಜಾ ಮಾಡುವುದಕ್ಕೆ, ಚಿತ್ರರಂಗವನ್ನು ಹಾಳು ಮಾಡುವುದಕ್ಕೆ ಬಂದಿದ್ದಾರೆ. ಇವರನ್ನು ಒಳಗೆ ಹಾಕಬೇಕು, ಆಗ ಅವರಿಗೆ ಭಯ ಬರುತ್ತದೆ. ಇಂತಹವರಿಂದಲೇ ಚಿಕ್ಕ ಮಕ್ಕಳಿಗೂ ಈ ಚಟ ಹಬ್ಬಿದೆ ಎಂದು ಕಿಡಿಕಾರಿದರು.
ಇದು ಡ್ರಗ್ ಜಿಹಾದ್, ಒಂದು ನಿರ್ದಿಷ್ಟ ಸಮುದಾಯ ನಡೆಸುತ್ತಿರುವ ದಂಧೆ ಇದು. ಪೊಲೀಸರಿಗೆ ಡ್ರಗ್ ದಂಧೆ ಬಗ್ಗೆ ಇಂಚಿಂಚೂ ಮಾಹಿತಿ ಇರುತ್ತದೆ. ಆದರೆ ಪೊಲೀಸರನ್ನು ರಾಜಕಾರಣಿಗಳು ಕಟ್ಟಿಹಾಕಿದ್ದಾರೆ ಎಂದು ಆರೋಪಿಸಿದರು.
ಬೆಂಗಳೂರಿನ ಸೆಂಟ್ ಜೋಸೆಫ್ ಕಾಲೇಜಿನಲ್ಲಿ ಅತಿ ಹೆಚ್ಚು ಡ್ರಗ್ಸ್ ಮಾಫಿಯಾ ನಡೆಯುತ್ತಿದೆ. ಶಾಸಕ ಹ್ಯಾರಿಸ್ ಕ್ಷೇತ್ರದ ಎಲ್ಲ ಕ್ರಿಶ್ಚಿಯನ್ ಕಾಲೇಜು, ಹೈಸ್ಕೂಲುಗಳ ವಿದ್ಯಾರ್ಥಿಗಳ ಬ್ಯಾಗ್ ನಲ್ಲಿ ಗಾಂಜಾ ಸಿಗುತ್ತೆ, ಕೋಕೆನ್ ಸಿಗುತ್ತದೆ, ಡ್ರಗ್ಸ್ ಚಾಕ್ಲೆಟ್ ಸಿಗುತ್ತವೆ. ಅನಿಕಾ ಒಬ್ಬಳೆ ಕಿಂಗ್ ಪಿನ್ ಅಲ್ಲ. ಅವಳ ಹಿಂದೆ ದೊಡ್ಡ ಕಿಂಗ್ ಪಿನ್ ಗಳಿದ್ದಾರೆ ಎಂದು ಪ್ರಮೋದ್ ಮುತಾಲಿಕ್ ಆರೋಪಿಸಿದರು.
ನಿನ್ನೆ ದಾವಣಗೆರೆಯಲ್ಲಿ ಮಾತನಾಡಿ, ಮಾಜಿ ಸಿಎಂ ಸಿದ್ದರಾಮಯ್ಯ ಅವರ ಮಗ ಮೃತಪಟ್ಟಿದ್ದು ಡ್ರಗ್ ಸೇವನೆಯಿಂದ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ನೇರ ಆರೋಪ ಮಾಡಿದ್ದರು.
ಡ್ರಗ್ಸ್ ನ ಹಣ ಕಾಂಗ್ರೆಸ್ ಹಾಗೂ ಬಿಜೆಪಿಗೆ ಹೋಗಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಆರೋಪ ಮಾಡಿದ್ದರು. ಇಂದ್ರಜಿತ್ ಹೇಗೆ ವಿಚಾರಣೆ ಮಾಡುತ್ತಿದ್ದಿರೋ ಅದೇ ರೀತಿ ಕುಮಾರಸ್ವಾಮಿ ಅವರನ್ನು ಕೂಡಾ ವಿಚಾರಣೆ ಮಾಡಿ ಎಂದು ಒತ್ತಾಯಿಸಿದ್ದರು