'ಪ್ರಧಾನಿ ಸಂಸತ್ ಗೂ ಬರಲ್ಲ, ಭೇಟಿಗೆ ಅವಕಾಶವೂ ನೀಡಲ್ಲ'
ಪ್ರಧಾನಿ ಮೋದಿ ಸಂಸತ್ ಗೂ ಬರಲ್ಲ, ಭೇಟಿಗೂ ಅವಕಾಶ ನೀಡಲ್ಲ. ಇನ್ನು ರಾಜ್ಯದ ಸಮಸ್ಯೆ ಯಾರ ಹತ್ತಿರ ಹೇಳೋದು? ಎಂದು ತುಮಕೂರಿನಲ್ಲಿ ಬರ ಅಧ್ಯಯನಕ್ಕೆ ತೆರಳಿದ್ದ ವೇಳೆ ಸಚಿವ ಜಯಚಂದ್ರ ಆರೋಪಿಸಿದ್ದಾರೆ
ಪಾವಗಡ, ಡಿಸೆಂಬರ್ 21: ತುಮಕೂರು ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಅಧ್ಯಯನಕ್ಕಾಗಿ ಬುಧವಾರ ಹಾಜರಿದ್ದದ್ದು ಸಚಿವ ಟಿ.ಬಿ.ಜಯಚಂದ್ರ ಮಾತ್ರ. ಕೃಷ್ಣ ಬೈರೇಗೌಡ, ಡಿ.ಕೆ.ಶಿವಕುಮಾರ್ ಇಬ್ಬರೂ ಗೈರಾಗಿದ್ದರು. ಈ ವೇಳೆ ಮಾತನಾಡಿದ ಜಯಚಂದ್ರ, ರಾಜ್ಯದಿಂದ ಅತಿ ಹೆಚ್ಚು ಬಿಜೆಪಿ ಸಂಸದರನ್ನು ಆರಿಸಿ ಕಳಿಸಲಾಗಿದೆ. ಆದರೂ ರಾಜ್ಯದ ಸಮಸ್ಯೆ ಬಗ್ಗೆ ತಿಳಿಸೋಣ ಅಂದರೆ ಪ್ರಧಾನಿ ಭೇಟಿಗೆ ಅವಕಾಶ ನೀಡಲ್ಲ ಎಂದು ಆರೋಪಿಸಿದರು.
ನಾವೇನೂ ಬರ ವಿಚಾರವಾಗಿ ರಾಜಕೀಯ ಮಾಡುವ ಅಗತ್ಯ ಇಲ್ಲ. ನಮಗೆ ಭೇಟಿಗೆ ಅವಕಾಶ ನೀಡೋದಿಲ್ಲ ಅನ್ನೋದು ಒಂದು ಕಡೆಯಾಯಿತು. ಸರಿ, ಸಂಸತ್ ಗೂ ಬರಲ್ವಲ್ಲ. ಇನ್ನು ನಮ್ಮ ಸಮಸ್ಯೆಯನ್ನು ಹೇಗೆ ಹೇಳಿಕೊಳ್ಳಬೇಕು ಎಂದು ಪ್ರಶ್ನಿಸಿದರು. ಮೂವರು ಸಚಿವರ ತಲೆದಂಡ ಆಗಲಿದೆ ಎಂದು ಯಡಿಯೂರಪ್ಪ ಹೇಳ್ತಿದ್ದಾರಲ್ಲ ಎಂದು ಮಾಧ್ಯಮದವರು ಪ್ರಶ್ನಿಸಿದರು.[ಪ್ರಧಾನಿ ಬಳಿ ನಿಯೋಗ: ಸಿದ್ದು, ಬಿಎಸ್ವೈ ಅದೇ ರಾಗ ಅದೇ ಹಾಡು]
ಅದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಬಿಜೆಪಿಯವರು ಅಧಿಕಾರಕ್ಕೆ ಬಂದಿದ್ದೇ ಜ್ಯೋತಿಷ್ಯವನ್ನು ನಂಬಿ. ಹಾಗಾಗಿ ಅವರು ಭವಿಷ್ಯ ನುಡಿಯುತ್ತಾರೆ. ನಾವು ಅದನ್ನೆಲ್ಲ ನಂಬಲ್ಲ ಎಂದು ಜಯಚಂದ್ರ ವ್ಯಂಗ್ಯವಾಡಿದರು. ಇನ್ನು ಮೇಟಿ ವಿಡಿಯೋ ಬಗ್ಗೆ ಕೇಳಿದ ಪ್ರಶ್ನೆಗೆ, ಅವರ ವಿಚಾರದಲ್ಲಿ ಷಡ್ಯಂತ್ರ ನಡೆದಿದೆ ಎಂದು ಈಗ ಗೊತ್ತಾಗುತ್ತಿದೆ. ಮಾದ್ಗ್ಯಮದವರು ಮುಂಚೆಯೇ ತೀರ್ಪು ಕೊಟ್ಟುಬಿಟ್ಟರು ಎಂದರು.