ಮೋದಿ ತುಮಕೂರು ರ್ಯಾಲಿ ಜವಾಬ್ದಾರಿಯಿಂದ ಬಿಎಸ್ವೈ ಪರಮಾಪ್ತ ದೂರ..ದೂರ..
ಪ್ರಧಾನಮಂತ್ರಿ ನರೇಂದ್ರ ಮೋದಿ ಗುರುವಾರ ಮತ್ತು ಶುಕ್ರವಾರ (ಜ 2, 3) ಕರ್ನಾಟಕ ಪ್ರವಾಸದಲ್ಲಿ ಇರಲಿದ್ದಾರೆ. ತುಮಕೂರು ಮತ್ತು ಬೆಂಗಳೂರಿನಲ್ಲಿನ ಕಾರ್ಯಕ್ರಮದಲ್ಲಿ ಪ್ರಧಾನಿ ಭಾಗವಹಿಸಲಿದ್ದಾರೆ.
ಬೆಂಗಳೂರಿಗೆ ಆಗಮಿಸುವ ನರೇಂದ್ರ ಮೋದಿ ನಂತರ ವಿಶೇಷ ಹೆಲಿಕಾಪ್ಟರ್ ಮೂಲಕ ತುಮಕೂರಿಗೆ ಪ್ರಯಾಣ ಬೆಳೆಸಲಿದ್ದಾರೆ. ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ, ನಂತರ ರೈತರ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.
ಸರಣಿ ಟ್ವೀಟ್ಗಳ ಮೂಲಕ ಮೋದಿ ಕೆಣಕಿದ ಕರ್ನಾಟಕ ಕಾಂಗ್ರೆಸ್
ತುಮಕೂರಿನಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಕ್ಕೆ ವಸತಿ ಸಚಿವ ವಿ.ಸೋಮಣ್ಣ ಅವರನ್ನು ಉಸ್ತುವಾರಿಯನ್ನಾಗಿ ಮಾಡಿರುವುದು, ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
6 ಕೋಟಿ ರೈತರಿಗೆ 12,000 ಕೋಟಿ ರೂ ಹಂಚಿಕೆ ಮಾಡಲಿದ್ದಾರೆ ಮೋದಿ
ತುಮಕೂರು ಜಿಲ್ಲಾ ಉಸ್ತುವಾರಿ ಇರುವಾಗ, ಸೋಮಣ್ಣ ಅವರಿಗೆ ಏಕೆ ಈ ಜವಾಬ್ದಾರಿಯನ್ನು ನೀಡಲಾಯಿತು ಎನ್ನುವುದು ಈಗ ಚರ್ಚೆಯ ವಿಷಯವಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪನವರ ಪರಮಾಪ್ತ ಯಾಕೆ ಈ ಜವಾಬ್ದಾರಿಯಿಂದ ದೂರವಿದ್ದಾರೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.
ಜವಾಬ್ದಾರಿ ಜಿಲ್ಲಾ ಉಸ್ತುವಾರಿಗೆ ನೀಡಲಾಗುತ್ತದೆ
ಹೆಚ್ಚಾಗಿ, ಜಿಲ್ಲೆಯನ್ನು ಏನಾದರೂ ದೊಡ್ಡ ಮಟ್ಟದ ಸರಕಾರೀ ಕಾರ್ಯಕ್ರಮ ನಡೆದರೆ, ಅದರ ಜವಾಬ್ದಾರಿ ಜಿಲ್ಲಾ ಉಸ್ತುವಾರಿಗೆ ನೀಡಲಾಗುತ್ತದೆ. ಆದರೆ, ಪ್ರಧಾನಿ ಮೋದಿ ಭಾಗವಹಿಸುವ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿಯನ್ನು ಬಿಟ್ಟು, ಬೆಂಗಳೂರು, ಗೋವಿಂದರಾಜ ನಗರದ ಶಾಸಕ, ವಿ.ಸೋಮಣ್ಣ ಅವರಿಗೆ ಈ ಜವಾಬ್ದಾರಿಯನ್ನು ನೀಡಲಾಗಿದೆ.
ತುಮಕೂರು ಜಿಲ್ಲಾ ಉಸ್ತುವಾರಿ, ಶಾಸಕ ಜೆ.ಸಿ.ಮಾಧುಸ್ವಾಮಿ
ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾಗಿರುವ, ಚಿಕ್ಕನಾಯಕನಹಳ್ಳಿ ಶಾಸಕ ಜೆ.ಸಿ.ಮಾಧುಸ್ವಾಮಿ, ಮಹತ್ವದ ಈ ಕಾರ್ಯಕ್ರಮದಿಂದ ದೂರ ಉಳಿದಿರುವುದು ಚರ್ಚೆಗೆ ಗ್ರಾಸವಾಗಿದೆ. ಮೋದಿ, ತುಮಕೂರಿಗೆ ಬರುವುದು ನಿಗದಿಯಾದ ನಂತರ ಒಂದೆರಡು ಬಾರಿ, ಮಾತ್ರ ಮಾಧುಸ್ವಾಮಿ ಕಾಣಿಸಿಕೊಂಡಿದ್ದಾರೆ.
ಗೃಹಸಚಿವ ಬಸವರಾಜ ಬೊಮ್ಮಾಯಿ
ರಾಜ್ಯ ಗೃಹಸಚಿವ ಬಸವರಾಜ ಬೊಮ್ಮಾಯಿ, ಪ್ರಧಾನಿ ರಾಜ್ಯಕ್ಕೆ ಬರುವುದನ್ನು ಡಿಸೆಂಬರ್ 22ರಂದು ಪ್ರಕಟಿಸಿದ್ದರು. ಇದಾದ ನಂತರ, ಒಮ್ಮೆ, ಸಿದ್ದತೆಗಳನ್ನು ಪರಿಶೀಲಿಸಲು ಸಿಎಂ ಯಡಿಯೂರಪ್ಪ ತುಮಕೂರಿಗೆ ಬಂದಿದ್ದರು. ಈ ಎರಡು ಸಂದರ್ಭದಲ್ಲಿ ಮಾತ್ರ, ಮಾಧುಸ್ವಾಮಿ ಹಾಜರಿದ್ದರು.
ಸೋಮಣ್ಣಗೆ ಸಂಪೂರ್ಣ ಜವಾಬ್ದಾರಿ
ಮೋದಿ ಕಾರ್ಯಕ್ರಮದ ಸಂಪೂರ್ಣ ಜವಾಬ್ದಾರಿ ನೋಡಿಕೊಳ್ಳುವಂತೆ ಸಿಎಂ, ಸೋಮಣ್ಣ ಅವರಿಗೆ ಸೂಚಿಸಿದ್ದರು. ಪ್ರತೀದಿನ ಬೆಂಗಳೂರಿನಿಂದ ತುಮಕೂರಿಗೆ ಬರುವ ಸೋಮಣ್ಣ, ಎಲ್ಲಾ ಕೆಲಸಗಳನ್ನು ನೋಡಿಕೊಳ್ಳುತ್ತಿದ್ದಾರೆ. ಬಿಎಸ್ವೈ ಅವರ ಪರಮಾಪ್ತರಾಗಿರುವ ಮಾಧುಸ್ವಾಮಿ ಯಾವ ಕಾರಣಕ್ಕಾಗಿ ದೂರು ಉಳಿದಿದ್ದಾರೆ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.
ದಸರಾದ ಜವಾಬ್ದಾರಿಯನ್ನೂ ಮುಖ್ಯಮಂತ್ರಿಗಳು ಸೋಮಣ್ಣಗೆ ವಹಿಸಿದ್ದರು
ಕಳೆದ ಮೈಸೂರು ದಸರಾದ ಜವಾಬ್ದಾರಿಯನ್ನೂ ಮುಖ್ಯಮಂತ್ರಿಗಳು ಸೋಮಣ್ಣಗೆ ವಹಿಸಿದ್ದರು. ಕೊಟ್ಟ ಕೆಲಸವನ್ನು ಅಚ್ಚುಕಟ್ಟಾಗಿ ಸೋಮಣ್ಣ ನಿರ್ವಹಿಸಿದ್ದರು. ಆ ಕಾರಣಕ್ಕಾಗಿ, ಮುಖ್ಯಮಂತ್ರಿಗಳು, ಈ ಪ್ರಮುಖ ಕಾರ್ಯಕ್ರಮದ ಜವಾಬ್ದಾರಿಯನ್ನು ಮಾಧುಸ್ವಾಮಿ ಬದಲು, ಸೋಮಣ್ಣಗೆ ವಹಿಸಿರಬಹುದು ಎನ್ನುವ ಮಾತೂ ಕೇಳಿಬರುತ್ತಿದೆ.