ತುಮಕೂರಿನಲ್ಲಿ ಕುದಿಸಿದರೂ ಕರಗದ ಪ್ಲಾಸ್ಟಿಕ್ ಸಕ್ಕರೆ ಪತ್ತೆ
ತುಮಕೂರು ನಗರದಲ್ಲಿ ಮಾರ್ಚ್ 20ರಂದು ಚಿಲ್ಲರೆ ದಿನಸಿ ವ್ಯಾಪಾರಿಯೊಬ್ಬರಿಗೆ ಪ್ಲಾಸ್ಟಿಕ್ ಸಕ್ಕರೆ ಸಿಕ್ಕಿದೆ. ಮಂಡಿಪೇಟೆಯ ಸಗಟು ವ್ಯಾಪಾರಿಯೊಬ್ಬರಿಂದ ಖರೀದಿಸಿದ ಸಕ್ಕರೆ ಅದಾಗಿತ್ತು. ಸದ್ಯಕ್ಕೆ ನಗರದಾದ್ಯಂತ ಈ ಬಗ್ಗೆ ಚರ್ಚೆಯಾಗುತ್ತಿದೆ
ತುಮಕೂರು, ಮಾರ್ಚ್ 21: ತುಮಕೂರು ನಗರದಲ್ಲಿ ಸೋಮವಾರ (ಮಾರ್ಚ್ 20) ಪ್ಲಾಸ್ಟಿಕ್ ಸಕ್ಕರೆ ಪತ್ತೆಯಾಗಿದ್ದು, ಈ ಸಂಬಂಧ ಮಂಡಿಪೇಟೆಯಲ್ಲಿನ ಅಂಗಡಿಯೊಂದರ ಬಗ್ಗೆ ಜನ ನಾನಾ ರೀತಿಯಲ್ಲಿ ಮಾತನಾಡಿಕೊಳ್ಳುವಂತಾಗಿದೆ. ಚಿಲ್ಲರೆ ವ್ಯಾಪಾರಿಯಾದ ಸಿದ್ದೇಶ್ ಎಂಬುವವರು ಮಂಡಿಪೇಟೆಯಲ್ಲಿರುವ ಸಗಟು ವ್ಯಾಪಾರಿಗಳಿಂದ ಸಕ್ಕರೆ ಖರೀದಿಸಿ ತಂದಿದ್ದಾರೆ.
ಆ ನಂತರ ಅದನ್ನು ಮಾರಿದಾಗ, ಗ್ರಾಹಕರೊಬ್ಬರು ವಾಪಸ್ ತಂದಿದ್ದಾರೆ. ಈ ಸಕ್ಕರೆ ಬರೀ ಮೂವತ್ತರಷ್ಟು ಮಾತ್ರ ಕರಗುತ್ತಿದೆ. ಇನ್ನು ಎಪ್ಪತ್ತರಷ್ಟು ಕರಗುತ್ತಿಲ್ಲ ಎಂದು ದೂರಿದ್ದಾರೆ. ಆಗ ಅನುಮಾನಗೊಂಡ ಸಿದ್ದೇಶ್, ಪರಿಶೀಲಿಸಿದಾಗ ರಬ್ಬರ್ ನಂತೆ ನಾಲಗೆಗೆ ಅನುಭವಕ್ಕೆ ಬಂದಿದೆ. ಆಗ ಸಗಟು ವ್ಯಾಪಾರಿ ಬಳಿಗೆ ಹೋಗಿ ವಿಚಾರಿಸಿದ್ದಾರೆ.[ತುಮಕೂರಿನಲ್ಲಿ ಕುಡಿಯುವ ನೀರು ಯೋಜನೆಗೆ ಮುತ್ತಪ್ಪ ರೈ ಚಾಲನೆ]
ಮೂಲ ಬೆಳಗಾವಿಯಿಂದ ಬಂದಿರುವ ಈ ಸಕ್ಕರೆ ಮೂಟೆ, ಅಲ್ಲಿಂದ ಬೆಂಗಳೂರಿಗೆ ತಲುಪಿ, ಆ ನಂತರ ತುಮಕೂರಿಗೆ ಬಂದಿದೆ. ಈಗ ಬೆಳಗಾವಿ ಮೂಲದ ಸಕ್ಕರೆ ತಯಾರಕರು-ವ್ಯಾಪಾರಿಗಳಿಗೆ ಈ ಬಗ್ಗೆ ಸುದ್ದಿ ಮುಟ್ಟಿಸಿ, ತುಮಕೂರಿನ ಇತರೆ ಯಾವ ಅಂಗಡಿಗಳಿಗೆ ಮಾರಾಟ ಮಾಡಿದ್ದಾರೋ ಅಲ್ಲೆಲ್ಲ ಪರಿಶೀಲಿಸಬೇಕು ಎಂದು ಒತ್ತಾಯಿಸಿದ ಮೇಲೆ, ಆ ಮಾರಾಟಗಾರರು ಬೆಳಗಾವಿಯಿಂದ ತುಮಕೂರಿಗೆ ಬಂದು ಪರಿಶೀಲಿಸಲು ಒಪ್ಪಿದ್ದಾರೆ.
ಆದರೆ, ಸಿದ್ದೇಶ್ ಬಳಿಯಲ್ಲಿ ಸಕ್ಕರೆ ಮೂಟೆ ಖರೀದಿಸಿರುವುದಕ್ಕೆ ರಸೀದಿ ಇಲ್ಲ. ಅವರೇ ತಿಳಿಸಿರುವಂತೆ ಸಗಟು ಮಾರಾಟಗಾರ, ತಾವೇ ಆ ಸಕ್ಕರೆ ಮೂಟೆ ಮಾರಾಟ ಮಾಡಿರುವುದಾಗಿ ತಿಳಿಸಿರುವ ವಿಡಿಯೋ ಮಾಡಿಕೊಳ್ಳಲಾಗಿದೆ. ಈ ಬಗ್ಗೆ ಬುಧವಾರ ದೂರು ದಾಖಲಿಸುವುದಾಗಿ ಸಿದ್ದೇಶ್ 'ಒನ್ಇಂಡಿಯಾ ಕನ್ನಡ'ಕ್ಕೆ ಮಾಹಿತಿ ನೀಡಿದರು.[ಮಧುಗಿರಿಯ ಜಯಮಂಗಲಿಯಲ್ಲಿ ಕೃಷ್ಣಮೃಗ ನೋಡುವುದೇ ಚಂದ]
ನಾವು ಯಾವಾಗಲೂ ಅದೇ ಅಂಗಡಿಯಲ್ಲೇ ಖರೀದಿ ಮಾಡೋದು. ಈ ಹಿಂದೆ ಯಾವಾಗಲೂ ಅಂಥ ಅನುಭವ ಆಗಿರಲಿಲ್ಲ. ಆದರೆ ಇದೇ ಮೊದಲ ಸಲ ತುಮಕೂರಿನಲ್ಲಿ ಪ್ಲಾಸ್ಟಿಕ್ ಸಕ್ಕರೆ ಕಂಡುಬಂದಿದೆ ಎಂದು ಅವರು ಹೇಳಿದರು.