ಪಂಚರತ್ನ ಯಾತ್ರೆಗೆ ಎದುರಾದ ಮಗುವಿನ ಮೃತದೇಹ ಹೊತ್ತಿದ್ದ ಪೋಷಕರು: ಕಣ್ಣೀರಿಟ್ಟ ಎಚ್ಡಿಕೆ
ತುಮಕೂರು, ಡಿಸೆಂಬರ್2: ನೀರಿನ ಸಂಪ್ನಲ್ಲಿ ಬಿದ್ದ ಮಗು ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೆ ಸಾವನ್ನಪ್ಪಿರುವ ಘಟನೆ ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿಯಲ್ಲಿ ನಡೆದಿದೆ.
ಕೊಡಿಗೇನಹಳ್ಳಿ ಗ್ರಾಮದ ಶೌಖತ್ ಹಾಗೂ ಮಲ್ಲಿಕಾ ದಂಪತಿಯ ಪುತ್ರ ನಾಲ್ಕು ವರ್ಷದ ಅಬ್ಬಾಸ್ ಸಂಪ್ನಲ್ಲಿ ಬಿದ್ದು ಸಾವನ್ನಪ್ಪಿರುವ ಬಾಲಕ ಎಂದು ಗುರುತಿಸಲಾಗಿದೆ.
Breaking: ತುಮಕೂರು ಗ್ರಾ. ಶಾಸಕ ಗೌರಿಶಂಕರ್ ವಿರುದ್ಧ ಪ್ರಕರಣ
ನೀರಿನಲ್ಲಿ ಬಿದ್ದ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಆಂಬ್ಯುಲೆನ್ಸ್ ಇಲ್ಲದೆ ಪೋಷಕರು ಪರದಾಡಿದ್ದಾರೆ. ಕೊಡಿಗೇಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಸಿಗದೆ ಮಗು ಸಾವನ್ನಪ್ಪಿದೆ ಎನ್ನಲಾಗಿದೆ. ಮಗುವಿನ ಮೃತದೇಹವನ್ನು ಕೈಯಲ್ಲಿ ಎತ್ತಿಕೊಂಡು ಗೋಳಾಡುತ್ತಾ ಬರುತ್ತಿದ್ದ ಪೋಷಕರಿಗೆ ಜೆಡಿಎಸ್ ಪಂಚರತ್ನ ಯಾತ್ರೆಯ ರಥ ಎದುರಾಗಿದೆ.
ಪೋಷಕರ ಕೈಯಲ್ಲಿದ್ದ ಮಗುವಿನ ಮೃತದೇಹ ಕಂಡು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಆಘಾತಕ್ಕೊಳಗಾಗಿದ್ದು, ತಕ್ಷಣವೇ ಮಗುವನ್ನು ಪಂಚರತ್ನ ವಾಹನದ ಮೇಲೆಕ್ಕೆ ಎತ್ತಿಕೊಂಡಿದ್ದಾರೆ. ಮಗುವಿನ ಮೃತದೇಹ ಕಂಡು ಕುಮಾರಸ್ವಾಮಿ ಕಣ್ಣೀರಿಟ್ಟಿದ್ದು, ಮಗು ಸಾವಿನ ಬಗ್ಗೆ ಪೋಷಕರ ಬಳಿ ಮಾಹಿತಿ ಪಡೆದುಕೊಂಡಿದ್ದಾರೆ.
'ಸಂಪ್ನಲ್ಲಿ ಬಿದ್ದ ಮಗುವನ್ನು ಕೊಡಿಗೇಹಳ್ಳಿ ಸರ್ಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದು, ಆಸ್ಪತ್ರೆಯಲ್ಲಿ ವೈದ್ಯರಿಲ್ಲದೆ ಮಗು ಸಾವನ್ನಪ್ಪಿದೆ ಎಂದು ಪೋಷಕರು ಗೋಳಾಡಿದ್ದಾರೆ'. ಘಟನೆಯ ವಿವರ ಪಡೆದ ಕುಮಾರಸ್ವಾಮಿ, ರಾಜ್ಯ ಸರ್ಕಾರ ಮತ್ತು ಆರೋಗ್ಯ ಸಚಿವರ ವಿರುದ್ಧ ಕಿಡಿಕಾರಿದ್ದಾರೆ.
ಸ್ಥಳದಿಂದಲೇ ಆರೋಗ್ಯ ಮತ್ತು ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್ ಹಾಗೂ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್ ಹಾಗೂ ತುಮಕೂರು ಡಿಎಚ್ಓಗೆ ಕರೆ ಮಾಡಿ ಘಟನೆಯನ್ನು ವಿವರಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಕೂಡಲೇ ಕೊಡಿಗೇನಹಳ್ಳಿ ಆಸ್ಪತ್ರೆಗೆ ವೈದ್ಯರ ನೇಮಕಕ್ಕೆ ಆಗ್ರಹಿಸಿದ್ದು, ಕರ್ತವ್ಯಲೋಪ ಎಸಗಿದ ಸಿಬ್ಬಂದಿಯನ್ನು ಅಮಾನತು ಮಾಡುವಂತೆ ಹಾಗೂ ಪ್ರಕರಣ ದಾಖಲು ಮಾಡುವಂತೆ ಪೊಲೀಸರಿಗೆ ಸೂಚನೆ ನೀಡಿದ್ದಾರೆ. ಈ ವೇಳೆ ತುಮಕೂರು ಡಿಎಚ್ಓ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಮೃತ ಬಾಲಕನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದ್ದು, ಪರಿಹಾರ ನೀಡುವುದಾಗಿ ಕುಮಾರಸ್ವಾಮಿ ಭರವಸೆ ನೀಡಿದ್ದಾರೆ. ಘಟನಾ ಸ್ಥಳದಲ್ಲಿದ್ದ ಸ್ಥಳೀಯ ಶಾಸಕ ವಿರಭದ್ರಯ್ಯ ಮೃತ ಬಾಲಕನ ಪೋಷಕರಿಗೆ ಒಂದು ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ತಿಳಿಸಿದ್ದಾರೆ.
ಈ ವಾರದಲ್ಲಿ ಇಂತಹ ಎರಡನೇ ಘಟನೆ ನಡೆದಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳುವ ಬಗ್ಗೆ ಸರ್ಕಾರವನ್ನು ಎಚ್ಚರಿಸುವುದಾಗಿ ಕುಮಾರಸ್ವಾಮಿ ಭರವಸೆ ನೀಡಿ ಸ್ಥಳೀಯರನ್ನು ಸಮಾಧಾನ ಪಡಿಸಿದ್ದಾರೆ.