ಧ್ವಜಾರೋಹಣ ಸಂದರ್ಭದಲ್ಲಿ ದುರಂತ; ವಿದ್ಯಾರ್ಥಿ ಸಾವಿನ ಸುದ್ದಿ ಆಘಾತಕಾರಿ: ಸಚಿವ ನಾಗೇಶ್ ಪ್ರತಿಕ್ರಿಯೆ
ಬೆಂಗಳೂರು, ಆ. 15: ಸಂಭ್ರಮದ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆ ಸಂದರ್ಭದಲ್ಲಿ ದುರ್ಘಟನೆಯೊಂದು ಸಂಭವಿಸಿದೆ. ತುಮಕೂರು ಜಿಲ್ಲೆ ಕರೀಕೆರೆ ಎಂಬಲ್ಲಿ ಶಾಲೆಯಲ್ಲಿ ಧ್ವಜಾರೋಹಣ ಮಾಡಲು ಕಂಬ ನೆಡುವಾಗ ವಿದ್ಯುತ್ ಸ್ಪರ್ಶದಿಂದ ಚಂದನ್ ಎಂಬ ವಿದ್ಯಾರ್ಥಿ ಸಾವಿಗೀಡಾಗಿದ್ದಾನೆ. ಈ ದುರ್ಘಟನೆಗೆ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತೀವ್ರ ಸಂತಾಪ ಹಾಗೂ ದಿಗ್ಬ್ರಮೆಯನ್ನು ವ್ಯಕ್ತಪಡಿಸಿದ್ದಾರೆ.
ವಿದ್ಯಾರ್ಥಿ ಸಾವಿನ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಿಕ್ಷಣ ಸಚಿವ ನಾಗೇಶ್, "ಈ ಸುದ್ದಿ ಅತ್ಯಂತ ಆಘಾತಕಾರಿ. ಜೊತೆಗೆ ಪವನ್ ಮತ್ತು ಶಶಾಂಕ್ ಎಂಬ ಇನ್ನೂ ಇಬ್ಬರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿಯಿತು. ಇದು ಅತ್ಯಂತ ದುರದೃಷ್ಟಕರ ಘಟನೆ. ಮೃತ ವಿದ್ಯಾರ್ಥಿಯ ಕುಟುಂಬಕ್ಕೆ ನನ್ನ ತೀವ್ರ ಸಂತಾಪ ಗಳನ್ನು ತಿಳಿಸಲು ಬಯಸುತ್ತೇನೆ. ಅವರ ದುಃಖ ಶಬ್ದಗಳಿಂದ ಶಮನ ಮಾಡಲು ಸಾಧ್ಯವಿಲ್ಲ. ಗಾಯಗೊಂಡ ವಿದ್ಯಾರ್ಥಿಗಳ ಚಿಕಿತ್ಸೆಗೆ ಕೂಡಲೇ ಬೇಕಾದ ಎಲ್ಲ ಸೌಲಭ್ಯ ಒದಗಿಸುವಂತೆ ತಿಳಿಸಿದ್ದೇನೆ. ಈ ಘಟನೆಯ ಬಗ್ಗೆ ಜಿಲ್ಲಾಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಪಡೆದು ತನಿಖೆ ನಡೆಸಲು ಸೂಚಿಸುತ್ತೇನೆ" ಎಂದು ತಿಳಿಸಿದ್ದಾರೆ.
ಸ್ವಾತಂತ್ರ್ಯ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಧ್ವಜಸ್ತಂಭ ನಿಲ್ಲಿಸಲು ಹೋಗಿದ್ದ ಮೂವರಿಗೆ ವಿದ್ಯುತ್ ತಗುಲಿತ್ತು. ತುಮಕೂರು ತಾಲ್ಲೂಕಿನ ಕರೀಕೆರೆ ಗ್ರಾಮದಲ್ಲಿ ಘಟನೆ ನಡೆದಿದ್ದು, ಶಶಂಕ್ (16) ಹಾಗೂ ಪವನ್ (22) ಎಂಬುವರು ತೀವ್ರವಾಗಿ ಗಾಯಗೊಂಡಿದ್ದಾರೆ. ದುರದೃಷ್ಟವಶಾತ್ ಚಂದನ್ (16) ಎಂಬ ವಿದ್ಯಾರ್ಥಿ ವಿದ್ಯತ್ ಅವಘಡಕ್ಕೆ ಬಲಿಯಾಗಿದ್ದಾನೆ ಎಂದು ವರದಿಯಾಗಿದೆ.
ಕರೀತೆರೆ ಸರ್ಕಾರಿ ಶಾಲೆಯಲ್ಲಿ ಧ್ವಜಸ್ತಂಭ ಇರಲಿಲ್ಲ, ಹೀಗಾಗಿ ಶ್ವಜಾರೋಹಣ ಮಾಡಲು ಅನುಕೂಲವಾಗುವಂತೆ ಕಟ್ಟಿಗೆಯ ಧ್ವಜಸ್ತಂಭ ನಿಲ್ಲಿಸುವಾಗ ದುರ್ಘಟನೆ ಸಂಭವಿಸಿದೆ. ಧ್ವಜಸ್ತಂಭ ವಿದ್ಯುತ್ ತಂತಿಗೆ ತಗುಲಿ ಮೂವರಿಗೆ ವಿದ್ಯುತ್ ಪ್ರವಾಹವಾಗಿದೆ. ಚಂದನ್ ಎಂಬ ವಿದ್ಯಾರ್ಥಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಶಶಂಕ್ 6) ಹಾಗೂ ಪವನ್ ಚೇತರಿಸಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿಯಿದೆ. ಕೋರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.