ಸಿದ್ದಗಂಗಾಶ್ರೀಗಳ ಆಶೀರ್ವಾದ ಬೇಡಿದ ನಂದನ್
ತುಮಕೂರು, ಮಾ.27: ನಂದನ್ ನಿಲೇಕಣಿಯವರು ತುಮಕೂರಿನ ಸಿದ್ಧಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿಯವರನ್ನು ಭೇಟಿಯಾಗಿ ಗೌರವ ಸಮರ್ಪಿಸಿ ಅವರ ಆಶೀರ್ವಾದ ಬೇಡಿದರು. ರಾಜ್ಯದ ಲಕ್ಷಾಂತರ ಬಡ ಮಕ್ಕಳಿಗೆ ನಿತ್ಯ 'ಅನ್ನ ಮತ್ತು ಅಕ್ಷರ ದಾಸೋಹ' ನಡೆಸುವ, ನಡೆದಾಡುವ ದೇವರೆಂದೇ ಖ್ಯಾತರಾದ, ಈ ಇಳಿವಯಸ್ಸಿನಲ್ಲಿಯೂ ದಣಿವಿಲ್ಲದೇ ಸಮಾಜಸೇವೆಯಲ್ಲಿ ತೊಡಗಿಕೊಂಡು, ಮಕ್ಕಳಲ್ಲಿಯೇ ದೇವರನ್ನು ಕಾಣುವ ಪೂಜ್ಯರಾದ 'ಕರ್ಮಯೋಗಿ'ಯನ್ನು ಕಂಡು ನಂದನ್ ಪುಳಕಿತರಾದರು.
'ರಾಜಕೀಯವನ್ನು ಸರಿಪಡಿಸದ ಹೊರತು ಅಭಿವೃದ್ಧಿ ಸಾಧ್ಯವಿಲ್ಲ' ಎಂಬ ಅಭಿಪ್ರಾಯವನ್ನು ಹಲವು ಸಲ ವ್ಯಕ್ತ ಪಡಿಸಿರುವ ಪೂಜ್ಯ ಸ್ವಾಮೀಜೀಯವರು ಶುದ್ಧ ರಾಜಕೀಯದ ಉದ್ದೇಶವುಳ್ಳ ನಂದನ್ ಅವರನ್ನು ತುಂಬು ಮನಸ್ಸಿನಿಂದ ಆಶೀರ್ವದಿಸಿದರು.
'ಶಿಕ್ಷಣ ಒಂದು ವ್ಯಾಪಾರವಲ್ಲ, ಅದು ದಾಸೋಹದ ರೀತಿಯಲ್ಲಿ ಪಸರಿಸಬೇಕು. ಉತ್ತಮ ಸಮಾಜಕ್ಕಾಗಿ ಜ್ಞಾನದ ಬೀಜ ಬಿತ್ತಬೇಕು.' ಎಂಬ ಕಳಕಳಿಯ ಸ್ವಾಮೀಜೀಯವರು ನಂದನ್ ಮತ್ತು ರೋಹಿಣಿಯವರು ಶಿಕ್ಷಣ ಕ್ಷೇತ್ರಕ್ಕೆ ನೀಡಿರುವ ಕೊಡುಗೆಗಳ ಬಗ್ಗೆ ಮೆಚ್ಚಿಕೆ ವ್ಯಕ್ತಪಡಿಸಿದರು. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]
'ನನಗೆ ದೊರೆತ ಶೈಕ್ಷಣಿಕ ಅವಕಾಶಗಳು ಎಲ್ಲರಿಗೂ ದೊರೆಯಬೇಕು, ಮುಖ್ಯವಾಗಿ ಆರ್ಥಿಕ ದುರ್ಬಲ ಹಾಗೂ ಅವಕಾಶವಂಚಿತ ಸಮುದಾಯದ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ದೊರಕಿಸುವ ನಿಟ್ಟಿನಲ್ಲಿ ಕೆಲಸ ಮಾಡುವೆ' ಎನ್ನುವ ನಂದನ್ ಅವರ ಚಿಂತನೆಗಳನ್ನು ಸ್ವಾಮೀಜಿಯವರು ಶ್ಲಾಘಿಸಿ, ಶುಭಹಾರೈಸಿದರು.
ನಂದನ್ ರಿಂದ ವಿಶೇಷ ಪೂಜೆ ಸಲ್ಲಿಕೆ
ಪ್ರಜಾಪ್ರಭುತ್ವ ತತ್ತ್ವಗಳಿಗೆ ಬದ್ಧರಾಗಿರಿ. ಪ್ರಗತಿ ಮತ್ತು ಜನಸೇವೆಯೇ ನಿಮ್ಮ ಮೂಲ ಮಂತ್ರವಾಗಿರಲಿ ಎಂದು ಸಿದ್ದಗಂಗಾ ಸ್ವಾಮೀಜಿಯವರು ನಂದನ್ ಅವರನ್ನು ಆಶೀರ್ವದಿಸಿದರು.
ಪ್ರಥಮವಾಗಿ ಅಧಾರ್ ಪಡೆದಿದ್ದ ಸ್ವಾಮೀಜಿ
2010ರ ಅಕ್ಟೋಬರ್ ನಲ್ಲಿ ಮೊದಲ ಬಾರಿ ರಾಜ್ಯದಲ್ಲಿ ಆಧಾರ್ ಶುರು ಮಾಡಿದ್ದು ತುಮಕೂರಿನಲ್ಲಿ, ಆಗ ಪೂಜ್ಯರಾದ ಸ್ವಾಮೀಜಿಯವರೇ ಆಧಾರ್ ಯೋಜನೆಯನ್ನು ಉದ್ಘಾಟಿಸಿ, ಯೋಜನೆ ಯಶಸ್ವಿಯಾಗಲಿ ಎಂದು ಹಾರೈಸಿ, ಆಶೀರ್ವದಿಸಿದ್ದರು.
ಶೃಂಗೇರಿ ಮಠಕ್ಕೂ ಭೇಟಿ ನೀಡಿ
ನಂದನ್ ನಿಲೇಕಣಿಯವರು ಶೃಂಗೇರಿ ಮಠಕ್ಕೂ ಭೇಟಿ ನೀಡಿ, ಡಾ. ವಿ. ಆರ್. ಗೌರಿ ಶಂಕರ್ ಅವರ ಆಶೀರ್ವಾದವನ್ನು ಕೋರಿದರು. ಉನ್ನತ ಸಂಸ್ಥೆಗಳನ್ನು ಮುನ್ನೆಡೆಸುವ ವ್ಯಕ್ತಿಗಳು ಯಾವಾಗಲೂ ಪ್ರಾಮಾಣಿಕ, ಸತ್ಯವಂತಿಕೆ, ಕಾರ್ಯಕ್ಷಮತೆಯ ಮಾರ್ಗವನ್ನು ಎತ್ತಿಹಿಡಿಯುತ್ತಾರೆ.
ನಂದನ್ ಅವರು ಹಲವಾರು ಶೈಕ್ಷಣಿಕ ಮತ್ತು ಧಾರ್ಮಿಕ ಸಂಸ್ಥೆಗಳಿಗೆ ಭೇಟಿ ನೀಡಿದಾಗ ಅವರ ಈ ನಂಬಿಕೆಗೆ ಪೂರ್ಣ ಬೆಂಬಲವೂ ದೊರೆತಿದೆ. ನಾಡಿನ ಹಲವಾರು ಪೂಜನೀಯ, ಗೌರವಾರ್ಹ ವ್ಯಕ್ತಿಗಳು ನಂದನ್ ಅವರನ್ನು ಬೆಂಬಲಿಸುತ್ತಿದ್ದು, ನಂದನ್ ಅವರಿಗೆ ಭರವಸೆಯನ್ನು ತುಂಬಿದೆ.
|
ತುಮಕೂರು ಭೇಟಿ ಬಗ್ಗೆ ನಂದನ್ ಟ್ವೀಟ್
ತುಮಕೂರು ಭೇಟಿ ಬಗ್ಗೆ ನಂದನ್ ಟ್ವೀಟ್(@NandanNilekani) ಮಾಡುತ್ತಾ ಜಿಲ್ಲೆಯ ಶಿಕ್ಷಣ ಪ್ರಗತಿ, ಸಿದ್ದಗಂಗಾ, ಶೃಂಗೇರಿ ಮಠ ಭೇಟಿ ಚಿತ್ರಗಳನ್ನು ಹಾಕಿದ್ದಾರೆ