ಬೆಂಗಳೂರು ಉತ್ತರ ಕ್ಷೇತ್ರದ ಆಫರ್ ತಿರಸ್ಕರಿಸಿದ ಮುದ್ದಹನುಮೇಗೌಡ
ತುಮಕೂರು, ಮಾರ್ಚ್ 25: ತುಮಕೂರಿನ ಬದಲು ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧಿಸುವಂತೆ ಕಾಂಗ್ರೆಸ್ ನೀಡಿದ್ದ ಆಫರ್ ಅನ್ನು ಸಂಸದ ಮುದ್ದಹನುಮೇಗೌಡ ತಿರಸ್ಕರಿಸಿದ್ದಾರೆ. ಅಲ್ಲದೆ, ತಾವು ತುಮಕೂರು ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸುವುದು ನಿಶ್ಚಿತ ಎಂದು ಸ್ಪಷ್ಟಪಡಿಸಿದ್ದಾರೆ.
ಪಕ್ಷದ ಆಹ್ವಾನ ತಿರಸ್ಕರಿಸುತ್ತಲೇ ಅವರು ಸೋಮವಾರ ಮಧ್ಯಾಹ್ನ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಕಾಂಗ್ರೆಸ್ ಬೆಂಬಲದೊಂದಿಗೆ ಜೆಡಿಎಸ್ ಅಭ್ಯರ್ಥಿ ಎಚ್ ಡಿ ದೇವೇಗೌಡ ತುಮಕೂರು ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಆದರೆ, ಕಾಂಗ್ರೆಸ್ನಿಂದ ಸಂಸದರಾಗಿ ಆಯ್ಕೆಯಾಗಿದ್ದ ಮುದ್ದಹನುಮೇಗೌಡ ತಮಗೆ ಟಿಕೆಟ್ ನೀಡದೆ ಇರುವುದಕ್ಕೆ ಅಸಮಾಧಾನಗೊಂಡು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆಗೆ ಇಳಿದಿದ್ದಾರೆ. ಇದರಿಂದ ಮೈತ್ರಿ ಮುಖಂಡರು ಇಕ್ಕಟ್ಟಿಗೆ ಸಿಲುಕಿದ್ದಾರೆ.
ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಸ್ಪರ್ಧೆ: ಮುದ್ದಹನುಮೇಗೌಡ ಮನವೊಲಿಕೆಗೆ ಕಸರತ್ತು
ಈ ಕಾರಣದಿಂದ ಅಸಮಾಧಾನದ ಹೊಗೆಯನ್ನು ತಣಿಸಲು ಕಾಂಗ್ರೆಸ್ ಮುಖಂಡರು ಮುದ್ದಹನುಮೇಗೌಡ ಅವರಿಗೆ ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಸ್ಪರ್ಧಿಸುವ ಆಫರ್ ನೀಡಿದ್ದರು. ಆದರೆ, ಅವರನ್ನು ಅದನ್ನು ತಿರಸ್ಕರಿಸಿದ್ದಾರೆ.
ನಾನು ತುಮಕೂರಿನ ಸಂಸದ
'ನಾನು ತುಮಕೂರಿನ ಲೋಕಸಭೆ ಸದಸ್ಯ. ಎಲ್ಲಿ ಬೇಕಾದರೂ ನಿಲ್ಲುವ ಅಧಿಕಾರ ನನಗಿಲ್ಲ. ನಾನು ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಹೋಗಬಾರದು. ಬೇರೆ ಕ್ಷೇತ್ರದಲ್ಲಿ ನಿಲ್ಲಲು ನಾನೇನು ದೊಡ್ಡ ಲೀಡರ್ ಅಲ್ಲ. ತುಮಕೂರು ಕ್ಷೇತ್ರದಲ್ಲಿ 5 ವರ್ಷದಿಂದ ಕೆಲಸ ಮಾಡಿದ್ದೇನೆ. ಪುನಃ ಸ್ಪರ್ಧಿಸಿ ಮತದಾರರ ಮುಂದೆ ಹೋಗಲು ಹಕ್ಕಿದೆ. ಬೆಂಗಳೂರು ಉತ್ತರಕ್ಕೆ ಹೋಗಿ ನಾನೇನು ಮಾಡಲಿ?' ಎಂದು ಖಾರವಾಗಿ ಪ್ರತಿಕ್ರಿಯೆ ನೀಡಿದರು.
ನಾಮಪತ್ರ ಸಲ್ಲಿಕೆ
ಕಾಂಗ್ರೆಸ್ ಮುಖಂಡರ ಒತ್ತಡಕ್ಕೆ ಮಣಿಯದ ಮುದ್ದಹನುಮೇಗೌಡ ಅವರು ಈ ಹಿಂದೆ ಹೇಳಿದಂತೆಯೇ ತುಮಕೂರು ಕ್ಷೇತ್ರದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಬೆಂಬಲಿಗರೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ಅವರು ನಾಮಪತ್ರ ಸಲ್ಲಿಸಿದರು. ಮುದ್ದಹನುಮೇಗೌಡ ಅವರ ಸ್ಪರ್ಧೆಯಿಂದ ತುಮಕೂರಿನಲ್ಲಿ ತ್ರಿಕೋನ ಸ್ಪರ್ಧೆ ಉಂಟಾಗಲಿದೆ. ಮೈತ್ರಿ ಪಕ್ಷದ ಅಭ್ಯರ್ಥಿ ಎಚ್ ಡಿ ದೇವೇಗೌಡ ಮತ್ತು ಬಿಜೆಪಿಯ ಜಿ.ಎಸ್. ಬಸವರಾಜು ಕಣಕ್ಕಿಳಿದಿದ್ದಾರೆ.
ಬೆಂಗಳೂರು ಉತ್ತರವನ್ನು ಜೆಡಿಎಸ್ ಕಾಂಗ್ರೆಸ್ಸಿಗೆ ನೀಡಿದಕ್ಕೆ ಅಸಲಿ ಕಾರಣವೇನು?
ನಾನು ಕಾಂಗ್ರೆಸ್ ಅಭ್ಯರ್ಥಿ
ತುಮಕೂರಿನಲ್ಲಿ ಮೈತ್ರಿ ಬಗ್ಗೆ ನನಗೆ ಗೊತ್ತಿಲ್ಲ. ಮೈತ್ರಿ ಅಭ್ಯರ್ಥಿ ಯಾರು ಎಂಬುದು ಸಹ ತಿಳಿದಿಲ್ಲ. ನಾನು ಪಕ್ಷೇತರ ಅಭ್ಯರ್ಥಿಯಾಗಿ ಮಾಡಿಲ್ಲ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದೇನೆ. ನಾನು ಕಾಂಗ್ರಸ್ ಪಕ್ಷದ ಸಂಸದ ಮತ್ತು ಪಕ್ಷದ ಸದಸ್ಯ. ಚುನಾವಣಾ ಕಣದಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದು ಅವರು ತಿಳಿಸಿದರು.
ಬಿ ಫಾರಂ ಸಿಕ್ಕಿಲ್ಲ
ಮುದ್ದಹನುಮೇಗೌಡ ಅವರು ಕಾಂಗ್ರೆಸ್ ಬಿ ಫಾರಂ ನೀಡದೆ ಇದ್ದರೂ ಪಕ್ಷದ ಅಭ್ಯರ್ಥಿಯಾಗಿಯೇ ನಾಮಪತ್ರ ಸಲ್ಲಿಸಿದ್ದಾರೆ. ಬಿ ಫಾರಂ ನೀಡಲು ಸಮಯಾವಕಾಶವಿದೆ. ಒಂದು ವೇಳೆ ಬಿ ಫಾರಂ ಕೊಡದೆ ಇದ್ದರೆ ಅವರು ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲುವ ಸಾಧ್ಯತೆ ಇದೆ.
ನಾಮಪತ್ರ ಸಲ್ಲಿಕೆಗೆ ತೆರಳುವ ಮುನ್ನ ತುಮಕೂರಿನ ಹೊರವಲಯದ ಶೆಟ್ಟಿಹಳ್ಳಿ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಮಾತನಾಡಿದ ಅವರ, ಕಾಂಗ್ರೆಸ್ ಹೈಕಮಾಂಡ್ ಬಿಫಾರಂ ನೀಡಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ತುಮಕೂರು ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟುಕೊಡುವ ಮುನ್ನ ಹಾಲಿ ಸಂಸದನಾದ ನನ್ನಜೊತೆ ಚರ್ಚಿಸಿಲ್ಲ ಎಂಬ ನೋವು ಇದೆ ಎಂದು ಬೇಸರ ವ್ಯಕ್ತಪಡಿಸಿದರು.