ರಾಜ್ಯಸಭೆ ಚುನಾವಣೆ; ಮೌನ ಮುರಿದ ಮುದ್ದಹನುಮೇಗೌಡರು!
ತುಮಕೂರು, ಜೂನ್ 04 : 2019ರ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ತ್ಯಾಗ ಮಾಡಿದ ತುಮಕೂರು ಕ್ಷೇತ್ರದ ಮಾಜಿ ಸಂಸದ ಮುದ್ದಹನುಮೇಗೌಡ ರಾಜ್ಯಸಭೆ ಪ್ರವೇಶ ಮಾಡಲಿದ್ದಾರೆ. ಇಂತಹ ಸುದ್ದಿಗಳು ಕಳೆದ ಎರಡು ದಿನಗಳಿಂದ ಹರಿದಾಡುತ್ತಿವೆ.
ಜೂನ್ 19ರಂದು ಕರ್ನಾಟಕ ವಿಧಾನಸಭೆಯಿಂದ ನಾಲ್ವರು ರಾಜ್ಯಸಭಾ ಸದಸ್ಯರನ್ನು ಆಯ್ಕೆ ಮಾಡಲು ಚುನಾವಣೆ ನಡೆಯಲಿದೆ. ಕಾಂಗ್ರೆಸ್ ಪಕ್ಷ ಒಂದು ಸ್ಥಾನದಲ್ಲಿ ಗೆಲ್ಲಬಹುದು. ಆದರೆ, ಅಭ್ಯರ್ಥಿ ಯಾರು? ಎಂಬುದು ಚರ್ಚೆಗೆ ಕಾರಣವಾಗಿದೆ.
ರಾಜ್ಯಸಭೆಗೆ ಚುನಾವಣೆ; ಕರ್ನಾಟಕ ಕಾಂಗ್ರೆಸ್ನಿಂದ ಅಚ್ಚರಿಯ ಹೆಸರು!
2019ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಹಾಲಿ ಸಂಸದರಾಗಿದ್ದರೂ ಕಾಂಗ್ರೆಸ್-ಜೆಡಿಎಸ್ ಮೈತ್ರಿಯ ಕಾರಣ ಮುದ್ದಹನುಮೇಗೌಡರಿಗೆ ತುಮಕೂರಿನಲ್ಲಿ ಟಿಕೆಟ್ ಕೈತಪ್ಪಿತ್ತು. ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಎಚ್. ಡಿ. ದೇವೇಗೌಡರು ಸೋಲು ಕಂಡಿದ್ದರು.
ರಾಜ್ಯಸಭೆ ಚುನಾವಣೆ; ಜೂ.6ರಂದು ಬಿಜೆಪಿ ಕೋರ್ ಕಮಿಟಿ ಸಭೆ
ಸಂಸದರಾಗಿ ಉತ್ತಮವಾಗಿ ಕಾರ್ಯ ನಿರ್ವಹಣೆ ಮಾಡಿರುವ ಮುದ್ದಹನುಮೇಗೌಡರು ರಾಜ್ಯಸಭೆ ಪ್ರವೇಶಿಸಲು ಸೂಕ್ತ ಆಯ್ಕೆ. ಆದರೆ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರು ಸಹ ಕೇಳಿ ಬರುತ್ತಿದೆ. ಕಾಂಗ್ರೆಸ್ ಪಕ್ಷ ಯಾರಿಗೆ ಟಿಕೆಟ್ ನೀಡಲಿದೆ? ಎಂಬುದು ಕುತೂಹಲ ಮೂಡಿಸಿದೆ.
ರಾಜ್ಯಸಭೆ ಚುನಾವಣೆ; ಕರ್ನಾಟಕದಲ್ಲೊಂದು ಬ್ರೇಕಿಂಗ್ ನ್ಯೂಸ್!
ಹೈಕಮಾಂಡ್ ಜೊತೆ ಸಂಪರ್ಕ
ರಾಜ್ಯಸಭೆ ಚುನಾವಣೆ ಬಗ್ಗೆ ಹೈಕಮಾಂಡ್ ನಾಯಕರ ಜೊತೆ ಈಗಾಗಲೇ ಮುದ್ದಹನುಮೇಗೌಡರು ಮಾತುಕತೆ ನಡೆಸಿದ್ದಾರೆ. ರಾಜ್ಯಸಭೆ ಚುನಾವಣೆ ಟಿಕೆಟ್ಗಾಗಿ ಅವರು ಬೇಡಿಕೆ ಇಟ್ಟಿದ್ದು, ಇದನ್ನು ಪರಿಗಣಿಸುತ್ತೇವೆ ಎಂದು ನಾಯಕರು ಸಹ ಭರವಸೆ ಕೊಟ್ಟಿದ್ದಾರೆ.
ಮತ್ತೆ ನೆನಪಿಸುವ ಅಗತ್ಯವಿಲ್ಲ
"ಕೊರೊನಾ ಲಾಕ್ ಡೌನ್ ಪರಿಣಾಮ ದೆಹಲಿಗೆ ಹೋಗಿಲ್ಲ. ದೂರವಾಣಿ ಮೂಲಕ ಮಾತುಕತೆ ನಡೆಸಿದ್ದೇನೆ. ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ಕಳೆದುಕೊಂಡ ನನಗೆ ರಾಜ್ಯಸಭೆ ಟಿಕೆಟ್ ಕೊಡಬೇಕು. ಈ ಭರವಸೆ ನನಗೆ ಸಿಕ್ಕಿದೆ. ಆಗ ಪಕ್ಷಕ್ಕಾಗಿ ಮಾಡಿದ ತ್ಯಾಗವನ್ನು ನಾನು ಪುನಃ ನಾಯಕರಿಗೆ ನೆನಪಿಸುವ ಅಗತ್ಯವಿಲ್ಲ" ಎಂದು ಮುದ್ದಹನುಮೇಗೌಡರು ಹೇಳಿದ್ದಾರೆ.
ನನಗೆ ಅನ್ಯಾಯವಾಗಿದೆ
"ಪಕ್ಷಕ್ಕಾಗಿ ತ್ಯಾಗ ಮಾಡಿದ ನನಗೆ ಅನ್ಯಾಯವಾಗಿದೆ ಎಂಬ ಅಭಿಪ್ರಾಯ ಜನರಲ್ಲಿಯೂ ಇದೆ. ಈ ನಿಟ್ಟಿನಲ್ಲಿ ಸೂಕ್ತ ಸ್ಥಾನಮಾನ ನೀಡಬೇಕು. ಆಗ ನಾಯಕರು ನೀಡಿದ್ದ ಭರವಸೆಯನ್ನು ಈಡೇರಿಸಲಿದ್ದಾರೆ ಎಂಬ ವಿಶ್ವಾಸವಿದೆ" ಎಂದು ಮುದ್ದಹನುಮೇಗೌಡರು ಹೇಳಿದ್ದಾರೆ.
ಶುಕ್ರವಾರ ಸಭೆ
ರಾಜ್ಯಸಭೆ ಚುನಾವಣೆ ಕುರಿತು ಚರ್ಚಿಸಲು ಶುಕ್ರವಾರ ಕರ್ನಾಟಕ ಕಾಂಗ್ರೆಸ್ ನಾಯಕರು ಸಭೆ ನಡೆಸಲಿದ್ದಾರೆ. ಒಂದು ಸ್ಥಾನ ಗೆದ್ದ ಬಳಿಕ ಉಳಿಯುವ ಹೆಚ್ಚುವರಿ ಮತಗಳನ್ನು ಜೆಡಿಎಸ್ಗೆ ನೀಡುವ ಕುರಿತು ಸಭೆಯಲ್ಲಿ ಚರ್ಚೆ ನಡೆಯುವ ನೀರಿಕ್ಷೆ ಇದೆ.