ಅಂದು ಸಂಸದರ ಅವಮಾನಿಸಿದ ಜನರೇ ಇಂದು ಹಾರ ಹಾಕಿ ಸ್ವಾಗತಿಸಿದರು
Recommended Video
ಪಾವಗಡ, ಸೆಪ್ಟೆಂಬರ್ 23: ಕೆಲವೇ ದಿನಗಳ ಹಿಂದೆ ಬಿಜೆಪಿ ಸಂಸದ ಎ.ನಾರಾಯಣಸ್ವಾಮಿ ಅವರು ತಮ್ಮ ಹಟ್ಟಿ ಪ್ರವೇಶಿಸಬಾರದೆಂದು ಅಡ್ಡಗಟ್ಟಿದ್ದ ಗೊಲ್ಲರಹಟ್ಟಿಯ ಜನ ಇಂದು ಅದೇ ಸಂಸದರನ್ನು ಹಾರ ಹಾಕಿ ಅದ್ಧೂರಿಯಾಗಿ ಸ್ವಾಗತ ಮಾಡಿದ್ದಾರೆ.
ಕಳೆದ ಸೋಮವಾರ (ಸೆಪ್ಟೆಂಬರ್ 16) ರಂದು ಸಂಸದ ಎ.ನಾರಾಯಣಸ್ವಾಮಿ ಅವರು ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕಿನ ಪೆಮ್ಮನಹಳ್ಳಿ ಗೊಲ್ಲರ ಹಟ್ಟಿಗೆ ತೆರಳಿದ್ದರು. ಆದರೆ ಅವರನ್ನು ಹಟ್ಟಿಯ ಬಾಗಿಲಲ್ಲೇ ತಡೆದ ಜನ, ನಾರಾಯಣಸ್ವಾಮಿ ದಲಿತರಾಗಿದ್ದು ಅವರು ಊರ ಒಳಕ್ಕೆ ಬರಬಾರದು ಎಂದು ತಡೆದಿದ್ದರು. ಈ ಪ್ರಕರಣ ರಾಜ್ಯದ ಗಮನ ಸೆಳೆದಿತ್ತು.
ಗೊಲ್ಲರಹಟ್ಟಿಯೊಳಗೆ ಬರದಂತೆ ದಲಿತ ಸಂಸದನ ತಡೆದ ಗ್ರಾಮಸ್ಥರು
ಆದರೆ ಇಂದು ಅದೇ ಗೊಲ್ಲರಹಟ್ಟಿಯ ಜನ ಅದೇ ದಲಿತ ಸಂಸದ ನಾರಾಯಣಸ್ವಾಮಿ ಅವರನ್ನು ಹಾರ ಹಾಕಿ, ಪೂರ್ಣ ಕುಂಭ ಸ್ವಾಗತವನ್ನು ನೀಡಿ ಹಟ್ಟಿಯ ಒಳಕ್ಕೆ ಕರೆತಂದಿದ್ದಾರೆ.
ಭಾರಿ ಫ್ಲೆಕ್ಸ್, ಬ್ಯಾನರ್ಗಳನ್ನು ಹಾಕಿ, ರಸ್ತೆಗೆ ರಂಗೋಲಿ ಬಿಡಿಸಿ, ರಸ್ತೆಗೆ ಹೂವಿನ ತೋರಣಗಳನ್ನು ಕಟ್ಟಿ ಸಂಸದ ಎ.ನಾರಾಯಣಸ್ವಾಮಿ ಅವರನ್ನು ಗೊಲ್ಲರ ಹಟ್ಟಿಯ ಜನ ಇಂದು ಸ್ವಾಗತಿಸಿದ್ದಾರೆ.
ದಲಿತ ಸಂಸದನ ತಡೆದ ಗ್ರಾಮಸ್ಥರು; ಕ್ಷಮೆ ಕೋರಿದ ಶಾಸಕಿ ಪೂರ್ಣಿಮಾ ಶ್ರೀನಿವಾಸ್
ಸಂಸದ ನಾರಾಯಣಸ್ವಾಮಿ ಅವರು ಇನ್ನೂ ಕೆಲವು ಸ್ವಾಮೀಜಿಗಳ ಜೊತೆ ಇಂದು ಬೆಳಿಗ್ಗೆ ಗೊಲ್ಲರಹಟ್ಟಿಗೆ ಬಂದರು. ಈ ಸಮಯದಲ್ಲಿ ಅವರ ಮೇಲೆ ಹೂಗಳನ್ನು ಚೆಲ್ಲಿ, ಜಯಘೋಷಣೆಗಳನ್ನು ಕೂಗುವ ಮೂಲಕ ಅವರನ್ನು ಸ್ವಾಗತಿಸಲಾಯಿತು.
ಯುವತಿ ವಿಚಾರಕ್ಕೆ ದಲಿತ ಯುವಕನಿಗೆ ಬೆಂಕಿ ಹೊತ್ತಿಸಿ ಹತ್ಯೆ
ಕಳೆದ ಸೋಮವಾರ ಸಂಸದರನ್ನು ಹಟ್ಟಿಗೆ ಪ್ರವೇಶಿಸದಂತೆ ತಡೆದ ಘಟನೆ ಭಾರಿ ಆಕ್ರೋಶಕ್ಕೆ ಗುರಿಯಾಗಿತ್ತು, ಘಟನೆ ನಡೆದ ನಂತರ ಹಟ್ಟಿ ಜನರಿಗೆ ಬುದ್ಧಿವಾದ ಹೇಳುವ ಕಾರ್ಯ ಮಾಡಲಾಗಿತ್ತು. ಅದರ ಪರಿಣಾಮವಾಗಿಯೇ ಇಂದು ಸಂಸದ ನಾರಾಯಣಸ್ವಾಮಿ ಅವರಿಗೆ ಅದ್ಧೂರಿ ಸ್ವಾಗತ ನೀಡಲಾಗಿದೆ.