ಅಕ್ಕಿ, ಗೋಧಿ ನಿಲ್ಲಿಸಿದ ವಿವಾದ; ಸಿದ್ದಗಂಗಾ ಮಠಕ್ಕೆ ಸಚಿವರ ಭೇಟಿ
ತುಮಕೂರು, ಫೆಬ್ರವರಿ 06 : ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವೆ ಶಶಿಕಲಾ ಜೊಲ್ಲೆ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಸ್ವಾಮೀಜಿಗಳನ್ನು ಭೇಟಿ ಮಾಡಿದರು. ಅಕ್ಕಿ, ಗೋಧಿ ಸ್ಥಗಿತಗೊಳಿಸಿದ ವಿವಾದದ ಬಳಿಕ ಸಚಿವರು ಮಠಕ್ಕೆ ಭೇಟಿ ಕೊಟ್ಟರು.
ತುಮಕೂರಿನ ಸಿದ್ದಗಂಗಾ ಮಠಕ್ಕೆ ಬುಧವಾರ ಭೇಟಿ ನೀಡಿದ್ದ ಸಚಿವೆ ಶಶಿಕಲಾ ಜೊಲ್ಲೆ ಸಿದ್ದಲಿಂಗ ಸ್ವಾಮೀಜಿಗಳ ಆಶೀರ್ವಾದ ಪಡೆದರು. ಸ್ವಾಮೀಜಿಗಳ ಜೊತೆ ಮಾತುಕತೆ ನಡೆಸಿದರು. ಮಂಗಳವಾರ ಅಕ್ಕಿ, ಗೋಧಿ ಪೂರೈಕೆ ವಿವಾದ ಭಾರಿ ಚರ್ಚೆಗೆ ಕಾರಣವಾಗಿತ್ತು.
ಸಿದ್ದಗಂಗಾ ಮಠದ ಆಹಾರಕ್ಕೆ ಕತ್ತರಿ; ದಾಖಲೆಗಳು ಬಿಚ್ಚಿಟ್ಟ ಲೆಕ್ಕ
ಭೇಟಿ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು, "ಕೇಂದ್ರ ಸರ್ಕಾರ ಸಬ್ಸಿಡಿ ದರದಲ್ಲಿ ಅಕ್ಕಿ ಮತ್ತು ಗೋಧಿ ನೀಡುವುದನ್ನು ನಿಲ್ಲಿಸಿತು. ಹೀಗಾಗಿ ಮಠಕ್ಕೆ ನೀಡುವುದರಲ್ಲಿ ವ್ಯತ್ಯಯ ಉಂಟಾಗಿದೆ. ನವೆಂಬರ್ನಲ್ಲಿಯೇ ಸ್ವಾಮೀಜಿ ಹಾಗೂ ಸಂಘ ಸಂಸ್ಥೆಗಳವರು ನನಗೆ ಪತ್ರ ಬರೆದಿದ್ದರು" ಎಂದರು.
ಮನುಷ್ಯತ್ವ ಬೇರೆ ಎಂದು ತೋರಿಸಿದ ಜೊಲ್ಲೆ-ಖಾದರ್ ಮುಖಾಮುಖಿ
"ಸರ್ಕಾರದ ಮುಖ್ಯ ಕಾರ್ಯದರ್ಶಿ ಜೊತೆ ಮಾತನಾಡಿ ಧಾನ್ಯಗಳ ಪೂರೈಕೆಗೆ ಕ್ರಮ ಕೈಗೊಳ್ಳಲಾಗಿತ್ತು. ಅಷ್ಟರಲ್ಲಿ ಯು. ಟಿ. ಖಾದರ್ ಈ ಬಗ್ಗೆ ಮಾತನಾಡಿದರು. ಈ ವಿಚಾರದಲ್ಲಿ ಮುಖ್ಯಮಂತ್ರಿಗಳು ನನ್ನ ಮೇಲೆ ಗರಂ ಆಗಿಲ್ಲ. ಮಾಹಿತಿ ಮಾತ್ರ ಕೇಳಿದರು" ಎಂದು ಶಶಿಕಲಾ ಜೊಲ್ಲೆ ವಿವರಣೆ ನೀಡಿದರು.
ಮಠಗಳಿಗೆ ಅಕ್ಕಿ-ಗೋಧಿ ಸರಬರಾಜು: ಯಡಿಯೂರಪ್ಪ
ಸಿದ್ದಗಂಗಾ ಮಠಕ್ಕೆ ಭೇಟಿ
ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವೆ ಶಶಿಕಲಾ ಜೊಲ್ಲೆ ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದರು. "ಮಠ ಇಷ್ಟೊಂದು ಕೆಲಸ ಮಾಡಬೇಕಾದರೆ ಮಠಕ್ಕೆ ಅಕ್ಕಿ, ಗೋಧಿ ಕೊಡುವುದಿಲ್ಲ ಎನ್ನಲು ಹೇಗೆ ಸಾಧ್ಯ ಎಂದು ಸ್ವಾಮೀಜಿ ಜೊತೆ ಮಾತುಕತೆ ನಡೆಸಿದೆ. ಆಗ ಸರ್ಕಾರ ತಪ್ಪಿಸುವುದಿಲ್ಲ ಎನ್ನುವ ನಂಬಿಕೆ ಇತ್ತು ಎಂದು ಸ್ವಾಮೀಜಿ ನುಡಿದರು" ಎಂದು ಶಶಿಕಲಾ ಜೊಲ್ಲೆ ಹೇಳಿದರು.
ಅಕ್ಕಿ, ಗೋಧಿ ಪೂರೈಕೆ
ಸಿದ್ದಗಂಗಾಮಠಕ್ಕೆ ಅಕ್ಕಿ ಪೂರೈಕೆ ಸ್ಥಗಿತಗೊಂಡಿದ್ದು ಗಮನಕ್ಕೆ ಬಂದ ತಕ್ಷಣ ಅಕ್ಕಿಯ ಜೊತೆಗೆ ಗೋಧಿಯನ್ನೂ ಮಠಗಳಿಗೆ ಪೂರೈಕೆ ಮಾಡಲು ಸೂಚಿಸಿದ್ದೆ ಎಂದು ಸಚಿವರು ಟ್ವೀಟ್ ಮಾಡಿದ್ದಾರೆ.
ತಡೆ ಹಾಕುವುದಿಲ್ಲ
ಶಶಿಕಲಾ ಜೊಲ್ಲೆ ಅವರು, "ನಮ್ಮ ಸರ್ಕಾರ ಮಠಗಳು ಮಾಡುವ ಒಳ್ಳೆಯ ಕೆಲಸಗಳಿಗೆ ತಡೆಹಾಕಲು ಹೋಗುವುದಿಲ್ಲ ಎಂಬ ಭರವಸೆ ನೀಡಲು ಬಯಸುತ್ತೇನೆ" ಎಂದು ಟ್ವೀಟ್ ಮಾಡಿದ್ದಾರೆ.
ಸರ್ಕಾರ ಜೊತೆ ಇರುತ್ತದೆ
ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ಕುರಿತು ಶಶಿಕಲಾ ಜೊಲ್ಲೆ ಟ್ವೀಟ್ ಮಾಡಿದ್ದಾರೆ. ನಡೆದಾಡುವ ದೇವರ ನಿತ್ಯ ದಾಸೋಹ ಕಾರ್ಯಕ್ಕೆ ನಮ್ಮ ಸರ್ಕಾರ ಯಾವತ್ತೂ ಜೊತೆಯಾಗಿರುತ್ತದೆ ಎಂದು ಹೇಳಿದ್ದಾರೆ.