ಹಾಸನ ಜಿಲ್ಲೆಯನ್ನು ಮಾರಾಟ ಮಾಡಿಲ್ಲ ಎಂದ ಸಚಿವ ಮಾಧುಸ್ವಾಮಿ
ತುಮಕೂರು, ಸೆಪ್ಟೆಂಬರ್ 19: ಹಾಸನ ಜಿಲ್ಲೆಯನ್ನು ಯಾರೂ ಮಾರಾಟ ಮಾಡಿಲ್ಲ ಅದು ಕರ್ನಾಟಕದಲ್ಲಿಯೇ ಇದೆ ಎಂದು ಸಚಿವ ಮಾಧುಸ್ವಾಮಿ ರೇವಣ್ಣಗೆ ಟಾಂಗ್ ಕೊಟ್ಟಿದ್ದಾರೆ.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೇವಣ್ಣ ಹಾಸನದ ವಿಚಾರಕ್ಕೆ ಮೂಗುತೂರಿಸುತ್ತಿದ್ದಾರೆ. ಅವರಿಗೇ ಯಾರೂ ಹಾಸನವನ್ನು ಬರೆದುಕೊಟ್ಟಿಲ್ಲ ಎಂದು ಗುಡುಗಿದರು.
ತಮಗೆ ನೀಡಿರುವ ಖಾತೆ ಬಗ್ಗೆ ಸಚಿವ ಮಾಧುಸ್ವಾಮಿ ಏನು ಹೇಳಿದ್ರು?
ಹಾಸನದಲ್ಲಿ ರೇವಣ್ಣ ಅವರು ಆಡಳಿತ ದಲ್ಲಿ ಹಸ್ತಕ್ಷೇಪ ಮಾಡುತ್ತಾರೆ, ಅವರ ವಿಚಾರದಲ್ಲಿ ನಾನು ಹಸ್ತಕ್ಷೇಪ ಮಾಡುವ ಪ್ರಶ್ನೆಯಿಲ್ಲ, ಆ ಜಿಲ್ಲೆಯ ಉಸ್ತುವಾರಿ ಸಚಿವನಾಗಿ ಕೆಲಸ ಮಾಡುತ್ತೇನೆ ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ.
ಆಡಳಿತ ವ್ಯವಸ್ಥೆ ಹಳಿ ಮೇಲೆ ಸರಿಯಾಗಿ ಸಾಗಲಿ, ಅಧಿಕಾರಿಗಳು ಕಾನೂನು ಬದ್ಧವಾಗಿ ಕೆಲಸ ಮಾಡಬೇಕು.ನಿಯಮಬಾಹಿರವಾಗಿ ಕೆಲಸ ಮಾಡಬಾರದು ಎಂಬುದು ನನ್ನ ನಿರೀಕ್ಷೆಯಾಗಿದ್ದು ಅದಕ್ಕೆ ತಕ್ಕಂತೆ ಅವರು ಕೆಲಸ ಮಾಡುವ ಭರವಸೆ ಇದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವಿದ್ದಾಗಲೂ ಇದೇ ವಿಚಾರಕ್ಕೆ ಕಿತ್ತಾಟವಾಗುತ್ತಿತ್ತು, ಎಚ್ಡಿ ರೇವಣ್ಣ ಹಾಸನ ಜಿಲ್ಲೆಯ ಎಲ್ಲಾ ವಿಚಾರದಲ್ಲೂ ಮೂಗು ತೂರಿಸುತ್ತಾರೆ ಎನ್ನುವ ಆರೋಪ ಕೇಳಿಬಂದಿತ್ತು.
ಎ ಮಂಜು ಕಾಂಗ್ರೆಸ್ ತೊರೆಯಲು ಕೂಡ ಇದೇ ಪ್ರಮುಖ ಕಾರಣವಾಗಿತ್ತು. ಇದೀಗ ಸಮ್ಮಿಶ್ರ ಸರ್ಕಾರ ಆಡಳಿತದಲ್ಲಿಲ್ಲದೇ ಇದ್ದರೂ ಕೂಡ ರೇವಣ್ಣ ಹಾಸನ ಜಿಲ್ಲೆಗೆ ಸಂಬಂಧಿಸಿರುವ ಅವರದಲ್ಲದ ವಿಚಾರದಲ್ಲಿ ತಲೆ ಹಾಕುತ್ತಿದ್ದಾರೆ ಎನ್ನುವ ಆರೋಪ ಬಂದಿದೆ.