ಕೊರೊನಾ ನಮ್ಮ ಕೈ ಮೀರುತ್ತಿದೆ, ನಿಗ್ರಹ ಕಷ್ಟ: ಸಚಿವ ಮಾಧುಸ್ವಾಮಿ
ತುಮಕೂರು, ಜುಲೈ 7: ರಾಜ್ಯದಲ್ಲಿ ಕೊರೊನಾ ವೈರಸ್ ನಿಯಂತ್ರಣ ಸರ್ಕಾರದ ಕೈ ತಪ್ಪುತ್ತಿದೆಯೇ ಎಂಬ ಪ್ರಶ್ನೆ ಕಾಡುತ್ತಿದೆ. ದಿನವೊಂದಕ್ಕೆ ಸುಮಾರು 2 ಸಾವಿರದವರೆಗೂ ಸೋಂಕು ವರದಿಯಾಗುತ್ತಿದೆ. ಇಂತಹ ಆಘಾತಕಾರಿ ಬೆಳವಣಿಗೆಯ ನಡುವೆ ಸಚಿವ ಮಾಧುಸ್ವಾಮಿ ಅವರ ಹೇಳಿಕೆ ಆತಂಕ ಹುಟ್ಟಿಸಿದೆ.
ನಿನ್ನೆ ತುಮಕೂರಿನಲ್ಲಿ ಮಾತನಾಡಿದ ಮಾಧುಸ್ವಾಮಿ ''ಜಿಲ್ಲೆಯಲ್ಲಿ ಕೊವಿಡ್ ಪ್ರಕರಣಗಳು ಕ್ಷಿಪ್ರವಾಗಿ ಬೆಳೆಯುತ್ತಿದೆ. ಜಿಲ್ಲಾಡಳಿತ ಎಷ್ಟೇ ಶ್ರಮಪಟ್ಟರು ನಿಯಂತ್ರಣ ಮಾಡುವುದು ಕಷ್ಟ ಎನಿಸುವ ಸ್ಥಿತಿಗೆ ಬಂದು ತಲುಪಿದ್ದೀವಿ. ಕೊರೊನಾ ಸಮುದಾಯ ಹಂತಕ್ಕೆ ತಲುಪುತ್ತಿರುವುದು ಆಘಾತ ತಂದಿದೆ'' ಎಂದಿದ್ದಾರೆ.
ಕೊವಿಡ್ 19 ರೋಗಿಗಳ ಸಾವಿಗೆ ರಕ್ತ ಹೆಪ್ಪುಗಟ್ಟುವಿಕೆಯೇ ಪ್ರಮುಖ ಕಾರಣವೇ?
''ಇಷ್ಟು ದಿನ ಏನು ಆಗಬಾರದು ಅಂತ ಪ್ರಯತ್ನ ಮಾಡುತ್ತಿದ್ದೆವೋ. ಅದು, ಎಲ್ಲೋ ಒಂದು ಕಡೆ ನಮ್ಮ ಕೈ ಮೀರಿದೆಯೇ ಎಂಬ ಸ್ಥಿತಿ ನಿರ್ಮಾಣವಾಗಿದೆ'' ಎಂದು ಮಾಧುಸ್ವಾಮಿ ಮಾತನಾಡಿದ್ದಾರೆ.
''ತುಮಕೂರು ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಎಂಟು ಜನ ಸೋಂಕಿತರ ಸ್ಥಿತಿ ಗಂಭೀರವಾಗಿದೆ. ಬಹುಶಃ ಅವರ ಚೇತರಿಕೆ ಬಗ್ಗೆಯೂ ಸ್ಪಷ್ಟವಾಗಿ ಹೇಳಲು ಸಾಧ್ಯವಾಗಲ್ಲ. ಜೀವದ ಬಗ್ಗೆ ಯಾವುದೇ ಗ್ಯಾರಂಟಿ ಇಲ್ಲ'' ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ ಮಾಧುಸ್ವಾಮಿ ಮಾಹಿತಿ ನೀಡಿದ್ದರು.
ಇನ್ನು ತುಮಕೂರಿನಲ್ಲಿ ಜುಲೈ 6 ರಂದು 31 ಹೊಸ ಕೊವಿಡ್ ಕೇಸ್ ಪತ್ತೆಯಾಗಿತ್ತು. ಈ ಮೂಲಕ ಜಿಲ್ಲೆಯಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 252ಕ್ಕೆ ಏರಿಕೆಯಾಗಿದೆ. 61 ಜನರು ಗುಣಮುಖರಾಗಿದ್ದು, 183 ಪ್ರಕರಣಗಳು ಇನ್ನು ಸಕ್ರಿಯವಾಗಿದೆ. ಈವರೆಗೂ 8 ಜನರು ಮೃತಪಟ್ಟಿದ್ದಾರೆ.