ಚುನಾವಣಾ ಭವಿಷ್ಯ: ಸಿಎಂ ಪುತ್ರ ವಿಜಯೇಂದ್ರ ಹೋದಲ್ಲಿ ಸೋಲೇ ಇಲ್ಲ
ತುಮಕೂರು, ನ 3: ಇತ್ತೀಚೆಗೆ ನಡೆದಿದ್ದ ಉಪಚುನಾವಣಾ ಪ್ರಚಾರ ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಉಪಚುನಾವಣೆಯನ್ನು ಧರ್ಮಯುದ್ದಕ್ಕೂ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪನವರ ಪುತ್ರ ಬಿ.ವೈ.ವಿಜಯೇಂದ್ರ ಅವರನ್ನು ಭೀಮಸೇನನಿಗೆ ಹೋಲಿಸಿದ್ದರು.
ಕೆ.ಆರ್.ಪೇಟೆಯ ಒಂದೇ ಒಂದು ಜಯ ವಿಜಯೇಂದ್ರ ಅವರನ್ನು ಪಕ್ಷದಲ್ಲಿ ಮೇಲ್ದರ್ಜೇಗಿರಿಸಿತ್ತು. ಈಗ, ಜೆಡಿಎಸ್ ಶಾಸಕರಾಗಿದ್ದ ಸತ್ಯನಾರಾಯಣ ಅವರ ನಿಧನದಿಂದ ತೆರವಾಗಿರುವ ಶಿರಾ ಚುನಾವಣೆಯ ಜವಾಬ್ದಾರಿಯನ್ನು ವಿಜಯೇಂದ್ರ ಅವರಿಗೆ ವಹಿಸಿದೆ.
ನಾನು ಕಾಟಾಚಾರಕ್ಕೆ ಶಿರಾಕ್ಕೆ ಬಂದಿಲ್ಲ: ಬಿ.ವೈ. ವಿಜಯೇಂದ್ರ!
ಇವರ ಎಂಟ್ರಿಯಿಂದ ಕ್ಷೇತ್ರದ ಚಿತ್ರಣ ಬದಲಾವಣೆಯಾಗಿರುವುದಂತೂ ಹೌದು. ಯುವಕರನ್ನು ತಮ್ಮತ್ತ ಸೆಳೆಯುತ್ತಿರುವ ವಿಜಯೇಂದ್ರ ಅವರ ತಂತ್ರಗಾರಿಕೆ ಎಷ್ಟರ ಮಟ್ಟಿಗೆ ಫಲ ನೀಡಲಿದೆ ಎನ್ನುವುದಕ್ಕೆ ನವೆಂಬರ್ ಹತ್ತರ ವರೆಗೆ ಕಾದರೆ ಸಾಕು.
ಡಿಕೆಶಿ ಮುಖ್ಯಮಂತ್ರಿಯಾಗೋ ಭ್ರಮೆಯಲ್ಲಿದ್ದಾರೆ: ಶ್ರೀರಾಮುಲು ವ್ಯಂಗ್ಯ
ಈಗ, ವಿಜಯೇಂದ್ರ ಅವರ ಮೇಲೆ ವಿಶ್ವಾಸದ ಮಾತನ್ನಾಡಿರುವ ಸಚಿವ ಶ್ರೀರಾಮುಲು, ವಿಜಯೇಂದ್ರ ಹೋದಲ್ಲಿ ಪಕ್ಷಕ್ಕೆ ಸೋಲೇ ಇಲ್ಲ ಎನ್ನುವ ಭವಿಷ್ಯವನ್ನು ನುಡಿದಿದ್ದಾರೆ. ಜೊತೆಗೆ, ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರನ್ನು ಸಚಿವರು ಲೇವಡಿಯೂ ಮಾಡಿದ್ದಾರೆ.
ಶಿರಾ ಚುನಾವಣೆಯನ್ನು ಸಿದ್ದರಾಮಯ್ಯ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ
"ಶಿರಾ ಅಸೆಂಬ್ಲಿ ಕ್ಷೇತ್ರದ ಉಪಚುನಾವಣೆಯನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಅವರಿಗೆ ಒಳ್ಲೆಯದಾಗಲಿ. ಇನ್ನು ಇನ್ನುಳಿದ ಅವಧಿಗೆ ಯಡಿಯೂರಪ್ಪನವರೇ ಮುಖ್ಯಮಂತ್ರಿಗಳು, ಹಾಗಾಗಿ ಸಿಎಂ ಸ್ಥಾನ ಖಾಲಿಯಿಲ್ಲ" ಎಂದು ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.
ವಿಜಯೇಂದ್ರ ಅವರು ಎಲ್ಲೆಲ್ಲಿ ಕೈಹಾಕುತ್ತಿದ್ದಾರೋ ಅಲ್ಲಿ ಪಕ್ಷಕ್ಕೆ ಜಯ ನಿಶ್ಚಿತ
"ವಿಜಯೇಂದ್ರ ಅವರು ಎಲ್ಲೆಲ್ಲಿ ಕೈಹಾಕುತ್ತಿದ್ದಾರೋ, ಉದಾಹರಣೆಯಾಗಿ ಕೆ.ಆರ್.ಪೇಟೆಯಲ್ಲಿ ಪಕ್ಷಕ್ಕೆ ಗೆಲುವು ತಂದುಕೊಟ್ಟರು. ಕೆಲವು ದಿನಗಳ ಹಿಂದೆಯೂ ನಾನು ಉಲ್ಲೇಖ ಮಾಡಿದ್ದೆ. ವಿಜಯೇಂದ್ರ ಎಲ್ಲೆಲ್ಲಿ ಚುನಾವಣಾ ಉಸ್ತುವಾರಿಯನ್ನು ನೋಡಿಕೊಳ್ಳುತ್ತಾರೋ ಅಲ್ಲಿ ಪಕ್ಷಕ್ಕೆ ಜಯ ನಿಶ್ಚಿತ"ಎಂದು ಶ್ರೀರಾಮುಲು ವಿಶ್ವಾಸದ ಮಾತನ್ನಾಡಿದ್ದಾರೆ.
ವಿಜಯೇಂದ್ರ ಬಗ್ಗೆ ವಿಶ್ವಾಸದ ಮಾತನ್ನಾಡಿದ ಶ್ರೀರಾಮುಲು
"ವಿಜಯೇಂದ್ರ ಯುವ ನಾಯಕರಿದ್ದಾರೆ, ಪಕ್ಷವನ್ನು ಚೆನ್ನಾಗಿ ಸಂಘಟಿಸುತ್ತಿದ್ದಾರೆ. ಶಿರಾ ಕ್ಷೇತ್ರದಲ್ಲೂ ಪಕ್ಷಕ್ಕೆ ಜಯ ತಂದುಕೊಡಲಿದ್ದಾರೆ ಎನ್ನುವ ವಿಶ್ವಾಸ ನಮಗೆಲ್ಲರಿಗೂ ಇದೆ. ಶಿರಾದಲ್ಲಿ ಬಿಜೆಪಿಗೆ ಮತದಾರ ಆಶೀರ್ವಾದ ಮಾಡಲಿದ್ದಾರೆ, ಗೆಲುವು ನಮ್ಮದೇ" ಎಂದು ಶ್ರೀರಾಮುಲು ಹೇಳಿದ್ದಾರೆ.
ವಿಜಯೇಂದ್ರ ಅವರು ಭೀಮ
"ನಾವು ಈ ಯುದ್ದದಲ್ಲಿ ಗೆಲ್ಲುತ್ತೇವೆ. ಧರ್ಮಕ್ಕೆ ಯಾವತ್ತೂ ಜಯ ಸಿಗುತ್ತದೆ. ಈ ಧರ್ಮಯುದ್ದವನ್ನು ನಾವು ಪಂಚ ಪಾಂಡವರಿಗೆ ವಹಿಸಿದ್ದೇವೆ. ಯುದಿಷ್ಠಿರನಾಗಿ ಸುರೇಶ್ ಗೌಡ್ರು, ವಿಜಯೇಂದ್ರ ಅವರು ಭೀಮನಾಗಿ, ಪ್ರತಾಪ್ ಸಿಂಹ ಅವರು ಅರ್ಜುನನಾಗಿ, ರವಿಕುಮಾರ್ ಅವರು ನಕುಲನಾಗಿ ಮತ್ತು ನಾರಾಯಣಸ್ವಾಮಿಯವರು ಸಹದೇವರಂತೆ" ಎಂದು ನಳಿನ್ ಕಟೀಲ್ ಚುನಾವಣಾ ಪ್ರಚಾರದಲ್ಲಿ ಹೇಳಿದ್ದರು.