ಮನಮೋಹನ್ ಸಿಂಗ್ ಪ್ರಧಾನಿ ಆಗುತ್ತಾರೆ ಎಂದ ಬಿಜೆಪಿ ಅಭ್ಯರ್ಥಿ
ತುಮಕೂರು, ಮೇ 23: ಚುನಾವಣೋತ್ತರ ಸಮೀಕ್ಷೆಗಳಲ್ಲಿ ಮನಮೋಹನ್ ಸಿಂಗ್ ಪರವಾಗಿ ಮುನ್ನೂರು ಅಂತಾರೆ, ಮುನ್ನೂರಾ ನಲವತ್ತು ಅಂತಾರೆ. ಒಟ್ಟಿನಲ್ಲಿ ಮನಮೋಹನ್ ಸಿಂಗ್ ಪ್ರಧಾನಿ ಆಗುತ್ತಾರೆ. - ಇದ್ಯಾರು ಹೇಳಿದ್ದು, ಯಾವ ಸಮೀಕ್ಷೆ ಅಂತ ಗೊಂದಲ ಅಯಿತಾ? ಇದು ದೇವೇಗೌಡರ ವಿರುದ್ಧ ಬಿಜೆಪಿಯಿಂದ ಸ್ಪರ್ಧಿಸಿರುವ ತುಮಕೂರು ಕ್ಷೇತ್ರದ ಅಭ್ಯರ್ಥಿ ಜಿ.ಎಸ್.ಬಸವರಾಜು ಹೇಳಿದ ಮಾತು.
ಹಾಗಂತ ಅವರು ಗೊತ್ತಿದ್ದೂ ಹೇಳಿದ ಮಾತಲ್ಲ. ಬಾಯಿ ತಪ್ಪಿ ಹೇಳಿದ್ದು. ಈ ಹಿಂದೆ ಕಾಂಗ್ರೆಸ್ ನಿಂದ ಸಂಸದರಾಗಿ ಕಾರ್ಯ ನಿರ್ವಹಿಸಿದವರು ಜಿ.ಎಸ್.ಬಸವರಾಜು. ಪೂರ್ವಾಶ್ರಮದ ಸ್ಮರಣೆಯಿಂದಲೋ ಏನೋ ಹೀಗೆ ಮನಮೋಹನ್ ಸಿಂಗ್ ರಿಗೆ ಮುನ್ನಡೆ ಆಗಿ, ಪ್ರಧಾನಿ ಆಗುತ್ತಾರೆ ಎಂದು ಹೇಳಿದ್ದಾರೆ. ಅದರ ವಿಡಿಯೋ ಈಗ ಎಲ್ಲೆಡೆ ಷೇರ್ ಆಗುತ್ತಿದೆ.
ತುಮಕೂರು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲದೊಂದಿಗೆ ಜೆಡಿಎಸ್ ಅಭ್ಯರ್ಥಿಯಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಸ್ಪರ್ಧೆ ಮಾಡುತ್ತಾರೆ ಎಂದಾದಾಗ ಜಿ.ಎಸ್.ಬಸವರಾಜು ಅಖಾಡದಿಂದ ಹಿಂದಕ್ಕೆ ಸರಿಯುತ್ತಾರೆ ಎಂಬ ಸುದ್ದಿಯಿತ್ತು. ಆಗ, "ದೇವೇಗೌಡರ ವಿರುದ್ಧ ಸ್ಪರ್ಧೆ ಮಾಡುವುದಕ್ಕೆ ಹೆದರಲು ನಾನೇನೂ ಬಳೆ ತೊಟ್ಟಿಲ್ಲ" ಎಂದು ಅವರು ಹೇಳಿದ್ದರು.