ಬಂದ್ ಗೆ ಬೆಂಡಾದ 'ಸ್ವಾಮಿ', ಕಾಗಿನೆಲೆ ಶ್ರೀ ಜೊತೆ ಸಂಧಾನ ಯತ್ನ
ತುಮಕೂರು, ನವೆಂಬರ್ 21: ಕನಕ ಸರ್ಕಲ್ ವಿವಾದಕ್ಕೆ ಸಂಬಂಧಿಸಿದಂತೆ ಕಾನೂನು ಸಚಿವ ಮಾಧುಸ್ವಾಮಿ ವಿರುದ್ಧ ಪ್ರತಿಭಟನೆಗಳು ಜೋರಾಗುತ್ತಿದ್ದಂತೆ, ಎಚ್ಚೆತ್ತ ಸಚಿವರು ಕಾಗಿನೆಲೆ ಶ್ರೀ ನಿರಂಜನಾನಂದಪುರಿ ಸ್ವಾಮೀಜಿಗಳ ಜೊತೆ ಸಂಧಾನಕ್ಕೆ ಯತ್ನಿಸುತ್ತಿದ್ದಾರೆ. ಮಧ್ಯಾಹ್ನ 2:30ಕ್ಕೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಜೊತೆ ಹರಿಹರದ ಬೆಳ್ಳೂಡಿ ಮಠಕ್ಕೆ ತೆರಳಿ ಸ್ವಾಮೀಜಿಗಳ ಕ್ಷಮೆ ಕೋರುವ ಸಾಧ್ಯತೆ ಇದೆ.
ಹುಳಿಯಾರು ಸರ್ಕಲ್ ಗೆ ಕನಕ ಸರ್ಕಲ್ ಎಂದು ಹೆಸರಿಡುವ ವಿಚಾರವಾಗಿ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಕುರುಬ ಸಮುದಾಯದ ಈಶ್ವರಾನಂದ ಸ್ವಾಮೀಜಿ ಬಗ್ಗೆ ಅನುಚಿತವಾಗಿ ಮಾತನಾಡಿದ್ದಾರೆನ್ನಲಾದ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯದ ಹಲವು ಕಡೆ ತೀವ್ರ ಪ್ರತಿಭಟನೆಗಳು ನಡೆಯುತ್ತಿವೆ. ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹುಳಿಯಾರು ಪಟ್ಟಣ ಸಂಪೂರ್ಣ ಬಂದ್ ಆಗಿದೆ.
ಸ್ವಾಮೀಜಿಗೆ ಏಕವಚನ ಬಳಕೆ; ಮಾಧುಸ್ವಾಮಿ ರಾಜೀನಾಮೆಗೆ ಆಗ್ರಹ
Recommended Video
ಸಚಿವರು ಕೂಡಲೇ ಹಾಲುಮತ ಸ್ವಾಮೀಜಿಗಳ ಕ್ಷಮೆ ಕೇಳುವಂತೆ ರಾಜ್ಯದ ನಾನಾ ಕಡೆಗಳಲ್ಲಿ ಕುರುಬ ಸಮುದಾಯ ತೀವ್ರ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸುತ್ತಿವೆ. ಮಾಧುಸ್ವಾಮಿ ವಿರುದ್ಧ ಧಿಕ್ಕಾರ ಕೂಗಿ, ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಕುರುಬ ಸಂಘಗಳು ಬಿಗಿಪಟ್ಟು ಹಿಡಿದಿವೆ. ಇದು ಗಂಭೀರ ಸ್ವರೂಪ ಪಡೆಯುತ್ತಿದ್ದಂತೆ ಎಚ್ಚೆತ್ತ ಕಾನೂನು ಸಚಿವರು ಈಗ ಸಂಧಾನಕ್ಕೆ ಮುಂದಾಗಿದ್ದಾರೆ.
ಉಪ ಚುನಾವಣೆ ಉಸ್ತುವಾರಿಯಿಂದ ಮಾಧುಸ್ವಾಮಿ ಔಟ್!
ಮಾಧುಸ್ವಾಮಿ ಭೇಟಿಗೆ ಒಪ್ಪಿರುವ ಕಾಗಿನೆಲೆ ಶ್ರೀಗಳು, ಪ್ರತಿಭಟನಾಕಾರರಿಗೆ ಸಾರ್ವಜನಿಕ ಆಸ್ತಿ-ಪಾಸ್ತಿಗೆ ಹಾನಿಯಾಗದಂತೆ ಶಾಂತಿಯುತವಾಗಿ ಪ್ರತಿಭಟಿಸುವಮತೆ ಕರೆ ನೀಡಿದ್ದಾರೆ. ಇಂದು ಮಧ್ಯಾಹ್ನ ಗೃಹ ಸಚಿವ ಬೊಮ್ಮಾಯಿ ಮಧ್ಯೆಸ್ಥಿಕೆಯಲ್ಲಿ ಸಂಧಾನ ಸಭೆ ನಡೆಯಲಿದೆ. ಸಚಿವ ಮಾಧುಸ್ವಾಮಿಯ ಮಾತುಗಳ ಆಧಾರದ ಮೇಲೆ ಪ್ರತಿಭಟನೆಯ ಸ್ವರೂಪ ನಿರ್ಧಾರವಾಗಲಿದೆ.