ಶಿವ-ಬಸವ ಕಾಂಬಿನೇಷನ್ ನಲ್ಲಿ ಬಿಜೆಪಿ ಬಲ ಪ್ರದರ್ಶನ, ಭಿನ್ನಮತ ಶಮನ
ತುಮಕೂರು, ಮಾರ್ಚ್ 26: ತುಮಕೂರು ಜಿಲ್ಲಾ ಬಿಜೆಪಿ ಘಟಕದಲ್ಲಿನ ಅಸಮಾಧಾನ ಬಗೆಹರಿದಂತೆ ಕಾಣುತ್ತಿದೆ. ಸ್ವತಃ ಬಿ.ಎಸ್.ಯಡಿಯೂರಪ್ಪ ಅವರು ಮಧ್ಯ ಪ್ರವೇಶಿಸಿ, ಸೊಗಡು ಶಿವಣ್ಣ ಹಾಗೂ ಮಾಜಿ ಸಂಸದ ಜಿ.ಎಸ್.ಬಸವರಾಜು ಮಧ್ಯದ ಅಸಮಾಧಾನವನ್ನು ಈಚೆಗೆ ಬಗೆಹರಿಸಿದ್ದರು. ಇದೀಗ ಶಿವ (ಶಿವಣ್ಣ) -ಬಸವ (ಬಸವರಾಜು) ಕಾಂಬಿನೇಷನ್ ತುಮಕೂರಿನಲ್ಲಿ ಹೊಸ ಸಂಚಲನ ಮೂಡಿಸಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
"ನಾನೊಂದು ತೀರ ನೀನೊಂದು ತೀರ" ಎಂಬಂತಿದ್ದ ಸೊಗಡು ಶಿವಣ್ಣ ಹಾಗೂ ಜಿ.ಎಸ್. ಬಸವರಾಜು ಮಧ್ಯೆ ಭಿನ್ನಮತ ಶಮನವಾದ ಮೇಲೆ ಉಭಯ ನಾಯಕರು ನಾಮಪತ್ರ ಸಲ್ಲಿಸುವ ವೇಳೆ ಒಗ್ಗಟ್ಟು ಪ್ರದರ್ಶಿಸಿದ್ದಾರೆ. ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜು ಅಪಾರ ಸಂಖ್ಯೆಯಲ್ಲಿದ್ದ ಕೇಸರಿ ಪಡೆಯೊಂದಿಗೆ ಮೆರವಣಿಗೆ ಮೂಲಕ ಬಂದು ನಾಮಪತ್ರ ಸಲ್ಲಿಸಿದ್ದಾರೆ.
ಬಸವರಾಜು ಹಾಗೂ ಸೊಗಡು ಶಿವಣ್ಣ ಮಧ್ಯೆ ಸಂಧಾನ ಮಾಡಿದರು ಬಿಎಸ್ ವೈ
ಜಿ.ಎಸ್.ಬಸವರಾಜು ಅವರು ಗಣೇಶ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು. ಮಾಜಿ ಸಚಿವ ವಿ.ಸೋಮಣ್ಣ, ಸೊಗಡುಶಿವಣ್ಣ, ಶಾಸಕ ಮಾಧುಸ್ವಾಮಿ, ಮಾಜಿ ಶಾಸಕ ಸುರೇಶ್ ಗೌಡ ಜೊತೆಗೂಡಿ ನಾಮಪತ್ರ ಸಲ್ಲಿಸಿದರು.
ಮೆರವಣಿಗೆಯಲ್ಲಿ ಕೇಸರಿ ಬಾವುಟಗಳು ರಾರಾಜಿಸಿದವು. ಉರಿಬಿಸಿಲನ್ನೂ ಲೆಕ್ಕಿಸದೆ ಬಿಜೆಪಿ ಕಾರ್ಯಕರ್ತರು ಬಿಜೆಪಿಗೆ ಹಾಗೂ ಮೋದಿಗೆ ಜೈಕಾರ ಹಾಕಿದರು. ಶಾಸಕರಾದ ಜಿ.ಬಿ.ಜ್ಯೋತಿ ಗಣೇಶ್, ಮಸಾಲೆ ಜಯರಾಂ, ಬಿ.ಸಿ.ನಾಗೇಶ್ ಮೆರವಣಿಗೆಯ ನಾಯಕತ್ವ ವಹಿಸಿದ್ದರು.