ಮಾಜಿ ಪ್ರಧಾನಿ ದೇವೇಗೌಡರಿಗೆ ಭಾರಿ ಮುಖಭಂಗ: ತುಮಕೂರಿನಲ್ಲಿ ಹೀನಾಯ ಸೋಲು
ತುಮಕೂರು, ಮೇ 23: ತುಮಕೂರು ಲೋಕಸಭೆ ಕ್ಷೇತ್ರದಿಂದ ಸಂಸತ್ ಪ್ರವೇಶಿಸುವ ಬಯಕೆ ಹೊಂದಿದ್ದ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರಿಗೆ ತೀವ್ರ ಮುಖಭಂಗವಾಗಿದೆ. ಹಾಸನ ಲೋಕಸಭಾ ಕ್ಷೇತ್ರವನ್ನು ಮೊಮ್ಮಗ ಪ್ರಜ್ವಲ್ ರೇವಣ್ಣ ಅವರಿಗೆ ಬಿಟ್ಟುಕೊಟ್ಟು ತುಮಕೂರಿನಿಂದ ಮೈತ್ರಿ ಪಕ್ಷಗಳ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅವರಿಗೆ ಬಿಜೆಪಿ ಅಭ್ಯರ್ಥಿ ಬಸವರಾಜು ಸೋಲುಣಿಸಿದ್ದಾರೆ.
ಬಿಜೆಪಿ ಅಭ್ಯರ್ಥಿ ಬಸವರಾಜು ಅವರ ಎದುರು ದೇವೇಗೌಡ ಅವರು 15,433 ಮತಗಳ ಅಂತರದಿಂದ ಸೋಲು ಅನುಭವಿಸಿದ್ದಾರೆ.
ಆರಂಭದ ಕೆಲವು ಸುತ್ತುಗಳಲ್ಲಿ ಮಾತ್ರ ದೇವೇಗೌಡ ಅವರು ಮುನ್ನಡೆ ಪಡೆದಿದ್ದರು. ಬಳಿಕ ಪ್ರತಿ ಹಂತದಲ್ಲಿಯೂ ಜಿ.ಎಸ್. ಬಸವರಾಜು ಅವರು ಮುನ್ನಡೆ ಕಾಯ್ದುಕೊಂಡರು. ಈ ಸೋಲಿನಿಂದ ಮತ್ತೊಮ್ಮೆ ಸಂಸತ್ ಪ್ರವೇಶಿಸುವ ಕನಸು ಕಂಡಿದ್ದ ದೇವೇಗೌಡರಿಗೆ ದೊಡ್ಡ ಸೋಲಾಗಿದೆ.
ವಿಡಿಯೋ:ಕಾಂಗ್ರೆಸ್ಗೆ ಈ ಗತಿ ಬರುತ್ತೆಂದು ಯಡಿಯೂರಪ್ಪ ಅಂದೇ ಹೇಳಿದ್ರು
ಕಾಂಗ್ರೆಸ್ ವಿರೋಧಿ ಅಲೆ ದೇವೇಗೌಡ ಅವರ ಸೋಲಿಗೆ ಕಾರಣವಾಗಿದೆ ಎನ್ನಲಾಗಿದೆ. ಕಾಂಗ್ರೆಸ್ನ ಹಾಲಿ ಸಂಸದ ಮುದ್ದಹನುಮೇಗೌಡ ಅವರು ತುಮಕೂರು ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಮೈತ್ರಿದರ್ಮಕ್ಕೆ ಕಟ್ಟುಬಿದ್ದಿದ್ದ ಕಾಂಗ್ರೆಸ್, ಅನಿವಾರ್ಯವಾಗಿ ದೇವೇಗೌಡ ಅವರಿಗೆ ಬೆಂಬಲ ನೀಡಿತ್ತು.
ಮುದ್ದಹನುಮೇಗೌಡ ಆಕ್ರೋಶ
ದೇವೇಗೌಡರಿಗೆ ಮಣೆ ಹಾಕಿದ್ದು ಮುದ್ದಹನುಮೇಗೌಡ ಅವರ ಆಕ್ರೋಶಕ್ಕೆ ಕಾರಣವಾಗಿತ್ತು. ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಲು ಅವರು ಮುಂದಾಗಿದ್ದರು. ಅವರಿಗೆ ಸ್ಥಳೀಯ ಕಾಂಗ್ರೆಸ್ ಮುಖಂಡರಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿತ್ತು. ಕಾಂಗ್ರೆಸ್ ಶಾಸಕ ಕೆ.ಎನ್. ರಾಜಣ್ಣ ಕೂಡ ಪಕ್ಷದ ವಿರುದ್ಧ ಸಿಡಿದೆದ್ದು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಲು ಮುಂದಾಗಿದ್ದರು. ಬಳಿಕ ಇಬ್ಬರೂ ಮುಖಂಡರ ಮನವೊಲಿಸಿದ್ದ ಕಾಂಗ್ರೆಸ್, ಅವರ ನಾಮಪತ್ರ ಹಿಂದಕ್ಕೆ ಪಡೆದುಕೊಳ್ಳುವಂತೆ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದರು.
ಮುಖಂಡರ ಅಸಮಾಧಾನ ಕಾರಣ
ಆದರೆ, ತಣ್ಣಗಾಗಿದ್ದ ನಾಯಕರ ಆಕ್ರೋಶ ಬೂದಿ ಮುಚ್ಚಿದ ಕೆಂಡದಂತೆ ಇತ್ತು. ಅದು ದೇವೇಗೌಡರ ಬಯಕೆಯನ್ನು ಮೆಲ್ಲನೆ ಸುಟ್ಟುಹಾಕಲು ಕಾರಣವಾಗಿದೆ. ದೇವೇಗೌಡ ಅವರು ಕೂಡ ಕಾಂಗ್ರೆಸ್ ಮುಖಂಡರ ಅಸಮಾಧಾನಕ್ಕೆ ಮಣೆಹಾಕದೆ ತುಮಕೂರಿನಲ್ಲಿ ಸ್ಪರ್ಧಿಸಲು ಪಟ್ಟುಹಿಡಿದಿದ್ದರು. ದೇವೇಗೌಡರ ಹಠ ಮತ್ತು ಕಾಂಗ್ರೆಸ್ ಮುಖಂಡರ ಅಸಮಾಧಾನ ಅವರ ಸೋಲಿಗೆ ನೇರ ಕಾರಣವಾಗಿದೆ.
ಮರಳಿ ಬಿಜೆಪಿ ತೆಕ್ಕೆಗೆ
ಸುಮಾರು ಹತ್ತು ವರ್ಷಗಳ ಕಾಲ ಬಿಜೆಪಿ ತೆಕ್ಕೆಯಲ್ಲಿದ್ದ ತುಮಕೂರು ಲೋಕಸಭಾ ಕ್ಷೇತ್ರವನ್ನು ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ನ ಮುದ್ದಹನುಮೇಗೌಡ 'ಕೈ'ವಶ ಮಾಡಿಕೊಂಡಿದ್ದರು. ಮಾಜಿ ಸಂಸದರಾಗಿದ್ದ ಜಿ.ಎಸ್. ಬಸವರಾಜು ಅವರ ವರ್ಚಸ್ಸು ಕುಂದಿದೆ ಎಂದೇ ಭಾವಿಸಲಾಗಿತ್ತು. ಆದರೆ, ಕಾಂಗ್ರೆಸ್ನ ಒಳಜಗಳ, ನಾಯಕರ ಅಸಮಾಧಾನ ಅವರಿಗೆ ಈ ಬಾರಿ ನೆರವಾಗಿದೆ. ಮುದ್ದಹನುಮೇಗೌಡ ಅವರಿಗೇ ಕಾಂಗ್ರೆಸ್ ಟಿಕೆಟ್ ನೀಡಿದ್ದರೆ ಜಿ.ಎಸ್. ಬಸವರಾಜು ಅವರ ಗೆಲುವು ಸುಲಭವಾಗುತ್ತಿರಲಿಲ್ಲ
ಎರಡು ಬಾರಿ ಸೋತಿದ್ದರು
ದೇವೇಗೌಡ ಅವರಿಗೆ ಸೋಲು ಎದುರಾಗಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಲೋಕಸಭೆಯಲ್ಲಿ ಹಾಸನ ಮತ್ತು ಕನಕಪುರ ಕ್ಷೇತ್ರಗಳಲ್ಲಿ ಸೋಲು ಕಂಡಿದ್ದರು. 1999ರ ಲೋಕಸಭೆ ಚುನಾವಣೆಯಲ್ಲಿ ಅವರು ಹಾಸನದಲ್ಲಿ ಸೋಲು ಕಂಡಿದ್ದರು. 2004ರಲ್ಲಿ ಕನಕಪುರ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಅವರನ್ನು ತೇಜಸ್ವಿನಿ ಶ್ರೀರಮೇಶ್ ಸೋಲಿಸಿದ್ದರು.