ಮೇ 28ಕ್ಕೆ ತುಮಕೂರಿನ ಶಿರಾದಲ್ಲಿ ಬೃಹತ್ ಕುರುಬ ಸಮಾವೇಶ
ತುಮಕೂರು, ಮೇ 27: ತುಮಕೂರಿನ ಶಿರಾದಲ್ಲಿ ಕುರುಬರ ಬೃಹತ್ ಸಮಾವೇಶ ನಡೆಯಲಿದೆ. ಮೇ 28 ರಂದು ಬೆಳಗ್ಗೆ 11 ಗಂಟೆಗೆ ಶಿರಾ ಗೇಟ್ನ ಕಾಳಿದಾಸ ಪ್ರೌಢಶಾಲೆ ಮೈದಾನದಲ್ಲಿ ನಡೆಯಲಿರುವ ಕುರುಬರ ಬೃಹತ್ ಸಮಾವೇಶ ಜರುಗಲಿದೆ. ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಹಿಂದುಳಿದಿರುವ ಕುರುಬ ಸಮಾಜಕ್ಕೆ ಸರ್ಕಾರದಿಂದ ಸಿಗಬೇಕಾದ ಸವಲತ್ತನ್ನು ಪಡೆಯುವ ಬಗ್ಗೆ ಜಾಗೃತಿಯನ್ನು ಮೂಡಿಸುವ ಸಲುವಾಗಿ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಸಮಾವೇಶ ಕುರಿತು ಕರ್ನಾಟಕ ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ಕೆ.ಎಂ. ರಾಮಚಂದ್ರಪ್ಪ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಜಿಲ್ಲೆಯಲ್ಲಿ ಸುಮಾರು 3.5 ಲಕ್ಷ ಜನಸಂಖ್ಯೆಯನ್ನು ಹೊಂದಿದ್ದು ಕುರುಬರಿಗೆ ಸೂಕ್ತವಾದ ರಾಜಕೀಯ ಸ್ಥಾನಮಾಗಳು, ಪ್ರಾತಿನಿಧ್ಯ ಸಿಕ್ಕಿಲ್ಲ. ಇನ್ನು ಶೈಕ್ಷಣಿಕ , ಆರ್ಥಿಕ , ಮತ್ತು ಸಾಮಾಜಿಕ ಸ್ಥಾನಮಾನಗಳ ಕುರಿತು ಕುರುಬ ಜನಾಂಗ ಜಾಗೃತವಾಗಬೇಕಿದೆ. ಇದರಿಂದಾಗಿ ಸಂಘಟನೆಯನ್ನು ಬಲಪಡಿಸುವ ಸಲುವಾಗಿ ಕುರುಬರ ಸಮಾವೇಶವನ್ನು ನಡೆಸಲಾಗುತ್ತಿದೆ.
ಸಮಾವೇಶಕ್ಕೆ ಸಿದ್ದರಾಮಯ್ಯರನ್ನು ಮಾತ್ರವೇ ಆಹ್ವಾನ
"ಕುರುಬ ಸಮಾಜದ ಅಪ್ರತಿಮ ನಾಯಕ ಅಂದ್ರೆ ಸಿದ್ದರಾಮಯ್ಯ. ಸಿದ್ದರಾಮಯ್ಯ ಕುರುಬ ಸಮಾಜ ಮಾತ್ರವಲ್ಲದೇ ಹಿಂದುಳಿದ ವರ್ಗಗಳ ಅಭಿವೃದ್ದಿಗಾಗಿಯೂ ಶ್ರಮಿಸಿದ್ದಾರೆ. ಮುಖ್ಯಮಂತ್ರಿಯಾಗಿದ್ದ ವೇಳೆ ಹಿಂದುಳಿತ ಸಮಾಜದ ಶ್ರೇಯೋಭಿವೃದ್ದಿಗೆ ಯೋಜನೆಗಳನ್ನು ರೂಪಿಸಿದ್ದಾರೆ. ಹಿಂದುಳಿದ ಸಮಾಜದ ಬಗ್ಗೆ ಕಾಳಜಿಯನ್ನು ಹೊಂದಿರುವವರು ಮಾಜಿ ಸಿಎಂ , ಹಾಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರಿಗೆ ಮಾತ್ರವೇ ಆಹ್ವಾನ ನೀಡಲಾಗಿದೆ," ಎಂದು ಕರ್ನಾಟಕ ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ಕೆ.ಎಂ. ರಾಮಚಂದ್ರಪ್ಪ ತಿಳಿಸಿದ್ದಾರೆ.
ಕುರುಬ ಸಮಾಜ ಸಾಕಷ್ಟು ಪ್ರಗತಿ ಸಾಧಿಸಿಲ್ಲ
ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದರೂ ಕುರುಬ ಸಮಾಜ ಸಾಕಷ್ಟು ಪ್ರಗತಿ ಸಾಧಿಸಿಲ್ಲ, ಸಮಾಜದ ಒಳಗೆ ಯಾವುದೇ ಒಡಕು, ಭಿನ್ನಾಭಿಪ್ರಾಯ ಪಕ್ಷಭೇದಕ್ಕೆ ಅವಕಾಶ ಕೊಡದೆ ಒಂದಾಗಬೇಕಾದ ಅನಿವಾರ್ಯತೆ ಬಂದಿದೆ. ಇಂದು ಅನೇಕ ಬಲಿಷ್ಠ ಸಮುದಾಯಗಳ ಮುಖಂಡರು ತಮ್ಮ ಸಮುದಾಯಗಳಿಗೆ 2A ಮೀಸಲಾತಿಗಾಗಿ ಆಗ್ರಹಿಸುತ್ತಿದ್ದಾರೆ. ಹಿಂಬಾಗಿಲಿನಿಂದ ಮೀಸಲಾತಿ ಪಡೆದುಕೊಳ್ಳಲು ಹೊರಟಿದ್ದಾರೆ. ಇದರ ವಿರುದ್ಧ ಅನೇಕ ಹಿಂದುಳಿದ ವರ್ಗಗಳ ಪರವಾಗಿ ಧ್ವನಿ ಎತ್ತುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಹೇಳಿದರು.
ಹಿಂದುಳಿದ ವರ್ಗಗಳ ಡಿ. ದೇವರಾಜು ಅರಸು ಅಭಿವೃದ್ಧಿ ನಿಗಮಕ್ಕೆ 205 ಜಾತಿಗಳು ಸೇರುತ್ತವೆ. ಈ ನಿಗಮಕ್ಕೆ ಈ ಹಿಂದೆ 100 ಕೋಟಿ ಅನುದಾನ ಬಿಡುಗಡೆ ಯಾಗಿತ್ತು. ಆದರೆ ಈಗ 80 ಕೋಟಿ ರು. ಮಾತ್ರ ಮೀಸಲಿಟ್ಟಿದ್ದಾರೆ. ನಿಗಮಕ್ಕೆ ಸರ್ಕಾರ ಸರಿಯಾಗಿ ಅನುದಾನ ಕಲ್ಪಿಸುವಲ್ಲಿ ವಿಫಲವಾಗಿದೆ ಎಂದರು.
ಜಿಲ್ಲೆಯ ಪ್ರತಿ ತಾಲ್ಲೂಕುಗಳಿಂದ 25 ರಿಂದ 30 ಸಾವಿರ ಜನ ಸೇರುವ ನಿರೀಕ್ಷೆ
ಈ ಎಲ್ಲಾ ಅನ್ಯಾಯಗಳ ವಿರುದ್ಧ ಜಾಗೃತಿ ಮೂಡಿಸಲು ಮತ್ತು ಧ್ವನಿ ಎತ್ತಲು ಅತಿ ಹಿಂದುಳಿದ ವರ್ಗಗಳಿಗೆ ದೊರೆಯುವ ಸರ್ಕಾರಿ ಸವಲತ್ತುಗಳ ಬಗ್ಗೆ ಜಾಗೃತಿ ಮೂಡಿಸುವ ಹಾಗೂ ಅವುಗಳನ್ನು ದೊರಕಿಸಿಕೊಡುವ ಜವಾಬ್ದಾರಿ ಹಿಂದುಳಿದ ಸಮುದಾಯಗಳ ಹಿರಿಯಣ್ಣನಂತಿರುವ ನಮ್ಮ ಕುರುಬ ಸಮಾಜದ ಮೇಲಿದೆ. ಹಿಂದುಳಿದ ವರ್ಗಗಳ ರಾಜಕೀಯ ಮೀಸಲಾತಿಗಾಗಿ ಮುಂದೆ ನಿಂತು ನಮ್ಮೆಲ್ಲರ ಹಕ್ಕಿಗಾಗಿ ಸಂಘಟಿತರಾಗಿ ಹೋರಾಡಬೇಕಿದೆ. ಹೋರಾಟದ ಮುಖಾಂತರ ನಮ್ಮ ಹಿಂದುಳಿದ ಸಮುದಾಯಗಳಿಗೆ ದೊರೆಯಬೇಕಿರುವ ಹಕ್ಕು ಮತ್ತು ಸವಲತ್ತುಗಳನ್ನು ಪಡೆಯಬೇಕಿರುವ ಹಿನ್ನಲೆಯಲ್ಲಿ ಜಿಲ್ಲಾ ಕುರುಬರ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಈ ಸಮಾವೇಶದಲ್ಲಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಂದ ಸುಮಾರು 25 ರಿಂದ 30 ಸಾವಿರ ಮಂದಿ ಸೇರುವ ನಿರೀಕ್ಷೆ ಇದೆ ಎಂದು ತಿಳಿಸಿದರು.
ತುಮಕೂರಿನ ಶಿರಾಗೇಟ್ನಲ್ಲಿ ಕುರುಬರ ಬೃಹತ್ ಸಮಾವೇಶದಲ್ಲಿ ಲಕ್ಷಾಂತರ ಜನ ಸೇರುವ ನಿರೀಕ್ಷೆಗಳಿದ್ದು. ಕುರುಬರು ತಮಗೆ ಸಿಗಬೇಕಾದ ಸ್ಥಾನ ಮಾನಗಳಿಗಾಗಿ ದನಿಯನ್ನು ಎತ್ತಲಿದ್ದಾರೆ.