ಒಕ್ಕಲಿಗರ ಪ್ರತಿಭಟನಾ ರ್ಯಾಲಿಗೆ ಕುಮಾರಸ್ವಾಮಿ ಗೈರು: ಕಾರಣ ಬಿಚ್ಚಿಟ್ಟ ಜೆಡಿಎಸ್ ಶಾಸಕ
Recommended Video
ತುಮಕೂರು, ಸೆ 12: ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಬಂಧನ ವಿರೋಧಿಸಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭಾಗವಹಿಸಿರಲಿಲ್ಲ. ಇದು, ಹಲವು ಚರ್ಚೆಗಳಿಗೆ ನಾಂದಿ ಹಾಡಿತ್ತು.
ಈ ಬಗ್ಗೆ, ಜೆಡಿಎಸ್ ಪಕ್ಷದ ಶಾಸಕರೊಬ್ಬರು ಕುಮಾರಸ್ವಾಮಿಯವರು ಯಾಕೆ ಪ್ರತಿಭಟನಾ ರ್ಯಾಲಿಗೆ ಬರಲಿಲ್ಲ ಎನ್ನುವ ಕಾರಣವನ್ನು ಬಿಚ್ಚಿಟ್ಟಿದ್ದಾರೆ. " ಕುಮಾರಸ್ವಾಮಿಯವರಿಗೆ, ಡಿಕೆಶಿ ಮೇಲೆ ಪ್ರೀತಿಯಿಲ್ಲ. ಇದ್ದರೆ ಪ್ರತಿಭಟನೆಗೆ ಬರುತ್ತಿದ್ದರು" ಎಂದು ಗುಬ್ಬಿ ಕ್ಷೇತ್ರದ ಜೆಡಿಎಸ್ ಶಾಸಕ ಎಸ್.ಆರ್.ಶ್ರೀನಿವಾಸ್ ಹೇಳಿದ್ದಾರೆ.
ಇಂದು ಒಕ್ಕಲಿಗರು, ಅಂದು ಲಿಂಗಾಯತರು: ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರಾರು?
" ನಮಗೆ ಆಮಂತ್ರಣವಿರಲಿಲ್ಲ ಎಂದು ಕುಮಾರಸ್ವಾಮಿಯವರು ಹೇಳುತ್ತಾರೆ. ಪ್ರತಿಭಟನಾ ಸಭೆಯಲ್ಲಿ ಸುಮಾರು ಮೂವತ್ತು ಸಾವಿರಕ್ಕೂ ಹೆಚ್ಚು ಜನ ಸೇರಿದ್ದರು. ಅವರೆಲ್ಲಾ, ಆಮಂತ್ರಣ ಪತ್ರ ತೆಗೆದುಕೊಂಡು ಪ್ರತಿಭಟನೆಗೆ ಬಂದಿದ್ದರೇ" ಎಂದು ಶ್ರೀನಿವಾಸ್ ಪ್ರಶ್ನಿಸಿದ್ದಾರೆ.
" ನಮಗೆಲ್ಲಾ ಡಿಕೆಶಿ ಮೇಲೆ ಪ್ರೀತಿ, ಅಭಿಮಾನವಿತ್ತು. ಹಾಗಾಗಿ ನೋವು ಪ್ರತಿಭಟನೆಗೆ ಹೋಗಿದ್ದೆವು. ಕುಮಾರಸ್ವಾಮಿಯವರಿಗೆ ಆ ಭಾವನೆಯಿಲ್ಲ. ನಮ್ಮ ಸಮುದಾಯದ ನಾಯಕನಿಗೆ ತೊಂದರೆಯಾದಾಗ ನಾವೆಲ್ಲಾ ಒಂದಾಗಬೇಕು" ಎಂದು ಶ್ರೀನಿವಾಸ್, ಕುಮಾರಸ್ವಾಮಿಗೆ ಕಿವಿಮಾತನ್ನು ಹೇಳಿದ್ದಾರೆ.
" ನಮ್ಮವರಿಗೆ (ಒಕ್ಕಲಿಗ) ಇತ್ತೀಚೆಗೆ ಸ್ವಯಂಪ್ರತಿಷ್ಠೆ ಜಾಸ್ತಿಯಾಗಿದೆ. ಇದು ರಾಜಕೀಯದಲ್ಲಿ ಮಾತ್ರವಲ್ಲ, ಗ್ರಾಮೀಣ ಪ್ರದೇಶದಲ್ಲೂ ಹೀಗೆ" ಎಂದು ಶ್ರೀನಿವಾಸ್ ಹೇಳಿದ್ದಾರೆ.
ವರ್ಚಸ್ವೀ ನಾಯಕ 'ಡಿಕೆಶಿ'ಯನ್ನು ಕೆಲವೇ ಜಿಲ್ಲೆಗಳಿಗೆ ಸೀಮಿತಗೊಳಿಸಿದ ಒಕ್ಕಲಿಗರ ಪ್ರತಿಭಟನೆ!
ಪಕ್ಕದ ಚನ್ನಪಟ್ಟಣದಲ್ಲೇ ಇದ್ದ ಮಾಜಿ ಮುಖ್ಯಮಂತ್ರಿಗಳು ಪ್ರತಿಭಟನಾ ಸಭೆಗೆ "ನನಗೆ ಆಮಂತ್ರಣವಿರಲಿಲ್ಲ ಎಂದು ಹೇಳಿದ್ದರು. "ಆದರೆ, ನಮ್ಮ ಪಕ್ಷದ ಕಾರ್ಯಕರ್ತರು, ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ" ಎಂದು ಕುಮಾರಸ್ವಾಮಿ ಸ್ಪಷ್ಟನೆಯನ್ನು ನೀಡಿದ್ದರು.