ತುಮಕೂರಿನಲ್ಲಿ ನಗುತ್ತಾ ಪರಸ್ಪರ ಕೈ ಕುಲುಕಿದ ಕುಮಾರಸ್ವಾಮಿ- ಸಿದ್ದರಾಮಯ್ಯ
ತುಮಕೂರು, ಜನವರಿ 31: ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಅವರ ಮಧ್ಯೆ ಹಸಿ ಹುಲ್ಲು ಹಾಕಿದರೂ ಧಗ್ಗೆಂದು ಹೊತ್ತಿ ಉರಿಯುವ ಸಿಟ್ಟಿದೆ ಎಂಬಂತೆ ಭಾವನೆ ಇದೆ. ಆದರೆ ಅಂಥದ್ದೇನೂ ನಡೆದೇ ಇಲ್ಲ ಎಂಬಂತೆ ಗುರುವಾರ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮಿ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಇದ್ದರು.
ಜೆಡಿಎಸ್ ಕಾರ್ಯಕಾರಿಣಿ ಸಭೆಯಲ್ಲೂ ದೇವೇಗೌಡರು ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿದ್ದರು. ಆದರೆ ಇವರಿಬ್ಬರು ಸಿದ್ದಗಂಗಾ ಮಠದಲ್ಲಿ ಪರಸ್ಪರ ಕೈ ಕುಲುಕಿದರು. ನಗುನಗುತ್ತಾ ಮಾತನಾಡಿದರು. ಡಾ. ಶಿವಕುಮಾರ ಸ್ವಾಮೀಜಿ ಪುಣ್ಯಸ್ಮರಣೆ ವೇದಿಕೆಯಲ್ಲಿ ನಮ್ಮ ಮಧ್ಯೆ ಏನೂ ನಡೆದಿಲ್ಲ ಎಂಬಂತೆ ಪೋಸ್ ಕೊಟ್ಟಿದ್ದಾರೆ. ಜತೆಗೆ ಇಬ್ಬರ ನಡುವಣ ಮಾತುಕತೆ ಏನಿರಬಹುದು ಎಂಬ ಕುತೂಹಲ ಮೂಡಿಸಿತು.
ಸಿದ್ದರಾಮಯ್ಯ ಅವರಿಂದಲೇ ಸಮ್ಮಿಶ್ರ ಸರ್ಕಾರ ಬೀಳುತ್ತೆ ಎಂದ ಶೆಟ್ಟರ್
ಮಂಗಳವಾರವಷ್ಟೇ ದೇವೇಗೌಡರು, ಕುಮಾರಸ್ವಾಮಿ ಮತ್ತು ಜೆಡಿಎಸ್ ನ ಇತರ ನಾಯಕರು ಬಹಿರಂಗವಾಗಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ಆದರೆ ಅವ್ಯಾವುದಕ್ಕೂ ಪ್ರತಿಕ್ರಿಯಿಸುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದರು.
ಇನ್ನು ಇದೆ ವಿಷಯವಾಗಿ ಹೈಕಮಾಂಡ್ ಕರೆಯ ಮೇರೆಗೆ ಸಿದ್ದರಾಮಯ್ಯ ದೆಹಲಿಗೆ ಹೊಗಿದ್ದರು. ಅಲ್ಲಿಂದ ಬುಧವಾರ ರಾತ್ರಿ ವಾಪಸ್ಸಾಗುತ್ತಿದ್ದಂತೆ ಸಿದ್ದರಾಮಯ್ಯ ಸುಮನಾಗಿದ್ದಾರೆ. ಹೈಕಮಾಂಡ್ ಎಚ್ಚರಿಕೆ ನೀಡಿದ್ದರಿಂದಲೇ ಮೆತ್ತಗಾದರಾ ಎಂಬ ಪ್ರಶ್ನೆಯೂ ಸದ್ಯಕ್ಕೆ ಮೂಡಿದೆ.