ತುಮಕೂರಿನಿಂದ ಕೆ.ಎನ್.ರಾಜಣ್ಣ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ?
ತುಮಕೂರು, ಮಾರ್ಚ್ 14 : 'ತುಮಕೂರು ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಗೆ ಟಿಕೆಟ್ ಕೊಟ್ಟರೆ ನಾನು ಪಕ್ಷೇತರ ಅಭ್ಯರ್ಥಿಯಾಗಿಯಾದರೂ ಕಣಕ್ಕಿಳಿಯುತ್ತೇನೆ. ಜೆಡಿಎಸ್ ವಿರುದ್ಧ ಸ್ಪರ್ಧೆ ಮಾಡುವುದಿಲ್ಲ. ಕಾಂಗ್ರೆಸ್ ಉಳಿವಿಗಾಗಿ ಸ್ಪರ್ಧಿಸುತ್ತೇನೆ' ಎಂದು ಮಧುಗಿರಿ ಕ್ಷೇತ್ರದ ಮಾಜಿ ಶಾಸಕ ಕೆ.ಎನ್.ರಾಜಣ್ಣ ಹೇಳಿದರು.
ತುಮಕೂರಿನಲ್ಲಿ ಮಾತನಾಡಿದ ಕೆ.ಎನ್.ರಾಜಣ್ಣ ಅವರು, 'ಜೆಡಿಎಸ್ ಪಕ್ಷಕ್ಕೆ ಎಷ್ಟು ಸೀಟುಗಳನ್ನು ಬಿಟ್ಟುಕೊಟ್ಟರೂ ಅವರು ಮೂರು ಕ್ಷೇತ್ರದಲ್ಲಿ ಮಾತ್ರ ಗೆಲುವು ಸಾಧಿಸುತ್ತಾರೆ. ಮೂರಕ್ಕಿಂತ ಹೆಚ್ಚು ಸ್ಥಾನ ಗೆದ್ದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ' ಎಂದರು.
ಮೈಸೂರು ಉಳಿಸಿಕೊಂಡು, ತುಮಕೂರು ಬಿಟ್ಟುಕೊಟ್ಟ ಕಾಂಗ್ರೆಸ್!
'ಹಾಲಿ ಸಂಸದರ ಸ್ಥಾನಗಳನ್ನು ಜೆಡಿಎಸ್ಗೆ ಬಿಟ್ಟುಕೊಡುವುದಿಲ್ಲ ಎಂಬ ನಂಬಿಕೆ ಇದೆ. ಮಾ.16ರಂದು ಅಂತಿಮ ಘೋಷಣೆಯಾಗಲಿದೆ. ಕಾರ್ಯಕರ್ತರು ಯಾವುದೇ ಉಹಾಪೋಹಗಳಿಗೆ ಕಿವಿಗೊಡಬಾರದು' ಎಂದು ರಾಜಣ್ಣ ಕರೆ ನೀಡಿದರು.
20 ಕ್ಷೇತ್ರಗಳಿಗೆ ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ
ಲೋಕಸಭಾ ಚುನಾವಣೆಗೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡಿವೆ. ಕಾಂಗ್ರೆಸ್ 20 ಸ್ಥಾನಗಳಲ್ಲಿ ಕಣಕ್ಕಿಳಿಯಲಿದ್ದು, ಜೆಡಿಎಸ್ಗೆ 8 ಸ್ಥಾನಗಳನ್ನು ಬಿಟ್ಟುಕೊಡಲಾಗಿದೆ. ಅದರಲ್ಲೂ ಹಾಲಿ ಕಾಂಗ್ರೆಸ್ ಸಂಸದರು ಇರುವ ತುಮಕೂರು ಕ್ಷೇತ್ರವನ್ನು ಬಿಟ್ಟುಕೊಟ್ಟಿರುವುದಕ್ಕೆ ಕೆ.ಎನ್.ರಾಜಣ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶಾಮನೂರು ಕುಟುಂಬಕ್ಕಿಲ್ಲ ದಾವಣಗೆರೆ ಟಿಕೆಟ್, 'ಕೈ' ಅಭ್ಯರ್ಥಿ ಯಾರು?
ಕಾಂಗ್ರೆಸ್ ಉಳಿಸಬೇಕು
'ಜೆಡಿಎಸ್ ಅವರನ್ನು ಹೀಗೆ ಬಿಟ್ಟರೆ ರಾಜ್ಯದಲ್ಲಿ ಕಾಂಗ್ರೆಸ್ ಪೂರ್ಣ ನಿರ್ಣಾಮ ಆಗಲಿದೆ. ಹಾಗಾಗಿ ಕಾಂಗ್ರೆಸ್ ಉಳಿಸಲು ಏನು ಮಾಡಬೇಕೋ ಅದನ್ನು ಮಾಡಲು ಸಿದ್ಧನಿದ್ದೇನೆ. ತುಮಕೂರಿನಲ್ಲಿ ಜೆಡಿಎಸ್ಗೆ ಟಿಕೆಟ್ ಕೊಟ್ಟರೆ ನಾನು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತೇನೆ' ಎಂದು ಕೆ.ಎನ್.ರಾಜಣ್ಣ ಹೇಳಿದರು.
ಒಕ್ಕಲಿಗರಿಗೆ ಮಾಡುವ ಮೋಸ
'ಮುದ್ದಹನುಮೇಗೌಡ ಒಕ್ಕಲಿಗರ ಚಾಂಪಿಯನ್ ಎಂದು ಕರೆಸಿಕೊಳ್ಳುತ್ತಾರೆ. ಮುದ್ದಹನುಮೇಗೌಡ ಒಕ್ಕಲಿಗರಲ್ಲವೇ? ಎಲ್ಲ ಗೊತ್ತಿದ್ದು ತುಮಕೂರು ಟಿಕೆಟ್ ಅನ್ನು ಜೆಡಿಎಸ್ ಕೇಳುತ್ತಿದೆ ಎಂದರೆ ಇದು ಒಕ್ಕಲಿಗರಿಗೆ ಮಾಡುವ ಮೋಸವಾಗಿದೆ' ಎಂದು ರಾಜಣ್ಣ ಆರೋಪಿಸಿದರು.
ದೇವೇಗೌಡರಿಗೆ ಒಳ್ಳೆಯ ಹೆಸರಿತ್ತು
'ಈ ಮೊದಲು ರಾಜಕೀಯದಲ್ಲಿ ದೇವೇಗೌಡರಿಗೆ ಒಳ್ಳೆಯ ಹೆಸರಿತ್ತು. ಮೊಮ್ಮಕ್ಕಳ ರಾಜಕೀಯ ಜೀವನಕ್ಕಾಗಿ ತಮ್ಮ ಹೆಸರು ಹಾಳು ಮಾಡಿಕೊಳ್ಳುತ್ತಿದ್ದಾರೆ. ಕಣ್ಣೀರು ಹಾಕಲು ದೇವೇಗೌಡರ ಕುಟುಂಬ ಹೆಸರುವಾಸಿಯಾಗಿದ್ದು, ಈ ಬಾರಿಯೂ ಚುನಾವಣೆಯಲ್ಲಿ ಅದನ್ನು ಬಂಡವಾಳ ಮಾಡಿಕೊಳ್ಳುತ್ತಿದ್ದಾರೆ' ಎಂದು ದೂರಿದರು.
ಜೆಡಿಎಸ್ ಗೆಲುವು ಸುಲಭವಲ್ಲ
'ಮಂಡ್ಯ ಮತ್ತು ಹಾಸನದಲ್ಲಿ ಜೆಡಿಎಸ್ ಗೆಲುವು ಸುಲಭವಲ್ಲ. ನಾವೇನು ಸನ್ಯಾಸಿಗಳಲ್ಲ. ನಮ್ಮ ಅನಿಸಿಕೆಗಳನ್ನು ಕಾರ್ಯಗತ ಮಾಡಲು ಏನೆಲ್ಲಾ ಮಾಡಬೇಕು ಅದನ್ನು ಮಾಡುತ್ತೇವೆ' ಎಂದು ಕೆ.ಎನ್.ರಾಜಣ್ಣ ಹೇಳಿದರು.