ಶಾಸಕರು ದನ-ಕರುವಿನಂತೆ ಮಾರಾಟವಾಗುತ್ತಿದ್ದಾರೆ: ಜೆಡಿಎಸ್ ಶಾಸಕ ಸತ್ಯನಾರಾಯಣ
ಶಿರಾ, ಜುಲೈ 20: ಜನರ ಸೇವೆ ಮಾಡುವುದಕ್ಕೆ ನಾವು ಶಾಸಕರಾಗಿದ್ದೇವೆ ಎನ್ನುವುದನ್ನು ಮರೆತು 15 ಶಾಸಕರು ಹಣಕ್ಕೆ ಮಾರಾಟವಾಗಿದ್ದಾರೆ ಎಂದು ಜೆಡಿಎಸ್ ಶಾಸಕ ಬಿ. ಸತ್ಯನಾರಾಯಣ ಅಸಮಾಧಾನ ವ್ಯಕ್ತಪಡಿಸಿದರು.
ಶಿರಾದಲ್ಲಿ ಮಾತನಾಡಿದ ಅವರು, ಹಣ ಮತ್ತು ಅಧಿಕಾರದ ಆಸೆಗಾಗಿ ರಾಜ್ಯದಲ್ಲಿ ಶಾಸಕರು ದನ ಕರುಗಳ ರೀತಿಯಲ್ಲಿ ಮಾರಾಟವಾಗುತ್ತಿದ್ದಾರೆ. ಇದು ನಾಚಿಕೆಗೇಡಿನ ಸಂಗತಿ ಎಂದು ಹೇಳಿದರು.
ಜೆಡಿಎಸ್ ಶಾಸಕನ ಸೆಳೆಯಲು ಬಿಜೆಪಿ ಗಾಳ, ಯಾರದು?
ಜನರು ಸೈಕಲ್ನಲ್ಲಿ ಓಡಾಡುವುದಕ್ಕೇ ಕಷ್ಟಪಡುತ್ತಿದ್ದಾರೆ. ಇಂತಹ ಸಮಯದಲ್ಲಿ ಮಾರಾಟವಾದ ಶಾಸಕರನ್ನು ವಿಶೇಷ ಖಾಸಗಿ ವಿಮಾನದಲ್ಲಿ ಮುಂಬೈಗೆ ಕರೆದುಕೊಂಡು ಹೋಗುತ್ತಿದ್ದಾರೆ. ಮುಂಬೈನಲ್ಲಿ ಶಾಸಕರನ್ನು ಕೂಡಿ ಹಾಕಿ ಬಂಧನದಲ್ಲಿಟ್ಟಿದ್ದಾರೆ. ಇಂದು ಶಾಸಕರು ಭಯದ ವಾತಾವರಣದಲ್ಲಿದ್ದಾರೆ. ರಾಜ್ಯದಿಂದ ಹೋಗಿದ್ದ ಉನ್ನತ ಪೊಲೀಸ್ ಅಧಿಕಾರಿಗೂ ಶಾಸಕರನ್ನು ಭೇಟಿ ಮಾಡಲು ಸಾಧ್ಯವಾಗಿಲ್ಲ ಎಂದರೆ ಪ್ರಜಾಪ್ರಭುತ್ವ ವ್ಯವಸ್ಥೆ ಇನ್ನೂ ಜೀವಂತವಾಗಿದೆ ಎಂಬ ಬಗ್ಗೆ ಅನುಮಾನ ಮೂಡುತ್ತದೆ ಎಂದರು.
ಅತೃಪ್ತಿ ಇದೆಯಾದರೂ ಪಕ್ಷ ಬಿಡಲ್ಲ ಎಂದ ಜೆಡಿಎಸ್ ಶಾಸಕ
'ಬಿಜೆಪಿಯು ನನಗೂ ಆಮಿಷವೊಡ್ಡಿ ಖರೀದಿ ಮಾಡಲು ನೋಡಿತ್ತು. ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಎರಡು ದಿನಗಳ ಹಿಂದೆ ನನಗೆ ಕರೆ ಮಾಡಿ ನಿಮಗೆ ಪಕ್ಷದಲ್ಲಿ ಅನ್ಯಾಯವಾಗಿದೆ. ಪಕ್ಷ ಬಿಟ್ಟು ನಮ್ಮಲ್ಲಿಗೆ ಬಂದರೆ ಗೌರವಯುತವಾಗಿ ನಡೆಸಿಕೊಂಡು ಮಂತ್ರಿ ಸ್ಥಾನ ಕೊಡುತ್ತೇವೆ. ಚುನಾವಣೆಯಲ್ಲಿ ನಿಮಗೆ ಅಥವಾ ನಿಮ್ಮ ಮಗನಿಗೆ ಟಿಕೆಟ್ ಕೊಡುವುದರ ಜತೆಗೆ ಎಲ್ಲ ವೆಚ್ಚ ಭರಿಸುವುದಾಗಿ ಆಮಿಷ ತೋರಿಸಿದರು. ಆದರೆ, ನಾನು ಜೆಡಿಎಸ್ ಬಿಡುವ ಪ್ರಶ್ನೆಯೇ ಇಲ್ಲ ಎಂದೆ' ಎಂದು ಹೇಳಿದರು.