ಜ್ಯೋತಿಷ್ಯವು ವಿಜ್ಞಾನ ಎಂದ ಸಚಿವ ಜಯಚಂದ್ರ ಆಯುಷ್ಯ 105 ವರ್ಷ!
ತುಮಕೂರು, ಅಕ್ಟೋಬರ್ 3: ಜ್ಯೋತಿಷ್ಯವು ವಿಜ್ಞಾನ. ಆದ್ದರಿಂದ ಅದು ಮೌಢ್ಯ ನಿಷೇಧ ಮಸೂದೆಯೊಳಗೆ ಸೇರಿಸಿಲ್ಲ ಎಂದ ಕಾನೂನು ಸಚಿವ ಟಿ.ಬಿ.ಜಯಚಂದ್ರ ನೀಡಿದ ಹೇಳಿಕೆ ಇದೀಗ ಚರ್ಚೆಯನ್ನು ಹುಟ್ಟುಹಾಕಿದೆ.
ಮಾಧ್ಯಮದವರ ಜತೆ ಮಾತನಾಡಿದ ಅವರು, ಮೌಢ್ಯ ನಿಷೇಧ ಮಸೂದೆಯಲ್ಲಿ ಜ್ಯೋತಿಷ್ಯವನ್ನು ಸೇರಿಸಬೇಕು ಎಂಬ ಒತ್ತಡ ಇತ್ತು. ಆದರೆ ಜ್ಯೋತಿಷ್ಯವನ್ನು ಅದರೊಳಗೆ ಸೇರಿಸದಿರುವುದಕ್ಕೆ ನಿರ್ಧಾರ ಮಾಡಿದೆವು ಎಂದು ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಸಚಿವರು ಮತ್ತೂ ಆಶ್ಚರ್ಯಕರ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ. "ನಾನು ಮುಂದಿನ ಇನ್ನೂ ಎರಡು ವಿಧಾನಸಭಾ ಚುನಾವಣೆಗಳಲ್ಲಿ ಸ್ಪರ್ಧೆ ಮಾಡ್ತೀನಿ. ಜ್ಯೋತಿಷಿಗಳು ಹೇಳಿರುವ ಪ್ರಕಾರ 105 ವರ್ಷಗಳ ಕಾಲ ನಾನು ಬದುಕ್ತೀನಿ" ಎಂದು ಹೇಳಿದ್ದಾರೆ.
ಚಿಂತಕರಾದ ನರೇಂದ್ರ ನಾಯಕ್ ಅವರು ಸಚಿವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದು, ಎಲ್ಲ ಮೂರ್ಖರ ಥರ ಖಗೋಳ ಶಾಸ್ತ್ರಕ್ಕೂ ಜ್ಯೋತಿಷ್ಯಕ್ಕೂ ವ್ಯತ್ಯಾಸ ಗೊತ್ತಿಲ್ಲದವರ ಥರ ಮಾತನಾಡಬಾರದು. ಅದರಲ್ಲೂ ಸಚಿವರಾಗಿ ಹೆಚ್ಚು ವಿವೇಕಯುತವಾಗಿ ಮಾತನಾಡಬೇಕು ಎಂದಿದ್ದಾರೆ.
ಈ ಹಿಂದೆ ಖಗೋಳ ಶಾಸ್ತ್ರಜ್ಞರನ್ನು ಜ್ಯೋತಿಷಿ ಅಂತ ಗೊಂದಲ ಮಾಡಿಕೊಳ್ಳುತ್ತಿದ್ದರು. ಏಕೆಂದರೆ ಪಂಚಾಂಗದಲ್ಲೂ ಗ್ರಹಣದ ವಿಚಾರಗಳು ಇರುತ್ತಿದ್ದವು. ಆದ್ದರಿಂದ ಎಲ್ಲವೂ ವೈಜ್ಞಾನಿಕವೇ ಅಂದುಕೊಳ್ಳುತ್ತಿದ್ದರು ಎಂದು ನಾಯಕ್ ಹೇಳಿದ್ದಾರೆ.
ಮೂಢನಂಬಿಕೆ ವಿಚಾರಕ್ಕೆ ಬಂದರೆ ಕಾಂಗ್ರೆಸ್ ಪಕ್ಷ ಅಥವಾ ಬಿಜೆಪಿ ಎಂಬ ಯಾವ ವ್ಯತ್ಯಾಸವೂ ಇಲ್ಲ. ಎರಡು ತಂಡಗಳಿವೆ. ಇತ್ತಂಡಗಳ ಸದಸ್ಯರೂ ಜ್ಯೋತಿಷಿಗಳ ಬಳಿಯೇ ಹೋಗುತ್ತಾರೆ. ಆದ್ದರಿಂದ ಇಬ್ಬರ ಮಧ್ಯೆ ಯಾವ ವ್ಯತ್ಯಾಸವೂ ಇಲ್ಲ ಎಂದು ಕೂಡ ಅವರು ಹೇಳಿದ್ದಾರೆ.