ತುಮಕೂರು : ಕೊರಟಗೆರೆಯಲ್ಲಿ ನಾಮಪತ್ರ ಸಲ್ಲಿಸಿದ ಡಾ.ಜಿ.ಪರಮೇಶ್ವರ
ತಮಕೂರು, ಏಪ್ರಿಲ್ 23 : ಕೆಪಿಸಿಸಿ ಅಧ್ಯಕ್ಷ, ವಿಧಾನಪರಿಷತ್ ಸದಸ್ಯ ಡಾ.ಜಿ.ಪರಮೇಶ್ವರ ಅವರು 2018ರ ವಿಧಾನಸಭೆ ಚುನಾವಣೆಗೆ ನಾಮಪತ್ರವನ್ನು ಸಲ್ಲಿಸಿದರು. ಕಳೆದ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬಂದರೂ ಪರಮೇಶ್ವರ ಅವರು ಸೋಲು ಅನುಭವಿಸಿದ್ದರು.
ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್
ಸೋಮವಾರ ತುಮಕೂರು ಜಿಲ್ಲೆಯ ಕೊರಟಗೆರೆ ಕ್ಷೇತ್ರದಿಂದ ಜಿ.ಪರಮೇಶ್ವರ ಅವರು ವಿಧಾನಸಭೆ ಚುನಾವಣೆಗೆ ನಾಮಪತ್ರವನ್ನು ಸಲ್ಲಿಸಿದರು. ತುಮಕೂರು ಸಂಸದ ಮುದ್ದಹನುಮೇಗೌಡ ಸೇರಿದಂತೆ ವಿವಿಧ ನಾಯಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕೊರಟಗೆರೆಯಲ್ಲಿ ಬಾಜಿ ಗೆಲ್ಲುತ್ತಾರಾ ಡಾ. ಪರಮೇಶ್ವರ್ ಜಿ?
2013ರ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿತ್ತು. ಆದರೆ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರು 54,074 ಮತಗಳನ್ನು ಪಡೆದು ಸೋಲು ಅನುಭವಿಸಿದ್ದರು. ಬಳಿಕ ಅವರನ್ನು ವಿಧಾನಪರಿಷತ್ ಸದಸ್ಯರಾಗಿ ಆಯ್ಕೆ ಮಾಡಲಾಯಿತು.
ಕೊರಟಗೆರೆಯಲ್ಲಿ ಪರಮೇಶ್ವರ ಗ್ರಾಮ ವಾಸ್ತವ್ಯ, ಪ್ರಚಾರ!
2018ರ ಚುನಾವಣೆಯಲ್ಲಿ ಕೊರಟಗೆರೆ ಕ್ಷೇತ್ರದಲ್ಲಿ ಜೆಡಿಎಸ್ನಿಂದ ಹಾಲಿ ಶಾಸಕ ಸುಧಾಕರ ಲಾಲ್, ಬಿಜೆಪಿಯಿಂದ ವೈ.ಹುಚ್ಚಯ್ಯ ಅವರು ಅಭ್ಯರ್ಥಿಗಳು. ಕ್ಷೇತ್ರದ ಜನರು ಯಾರಿಗೆ ಬೆಂಬಲ ನೀಡುತ್ತಾರೆ? ಎಂದು ಕಾದು ನೋಡಬೇಕು...
ತಂದೆ-ತಾಯಿ ಸಮಾಧಿಗೆ ಪೂಜೆ
ತುಮಕೂರು ಜಿಲ್ಲೆಯ ಕೊರಟಗೆರೆ ಕ್ಷೇತ್ರದಿಂದ ನಾಮಪತ್ರ ಸಲ್ಲಿಸುವ ಮುನ್ನ ಡಾ.ಜಿ.ಪರಮೇಶ್ವರ ಅವರು ತಂದೆ-ತಾಯಿಯ ಸಮಾಧಿ ಸ್ಥಳಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.
ನಂತರ ಕ್ಯಾಮೇನಹಳ್ಳಿ ಆಂಜನೇಯ ದೇವಾಲಯಕ್ಕೆ, ಕೊರಟಗೆರೆ ಗಣಪತಿ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆಯನ್ನು ಸಲ್ಲಿಸಿದರು. ನಂತರ ಮೆರವಣಿಗೆ ಮೂಲಕ ನೂರಾರು ಕಾರ್ಯಕರ್ತರ ಜೊತೆ ಆಗಮಿಸಿ ನಾಮಪತ್ರವನ್ನು ಸಲ್ಲಿಸಿದರು.
ಆರು ವರ್ಷಗಳಿಂದ ಅಧ್ಯಕ್ಷರು
ಡಾ.ಜಿ.ಪರಮೇಶ್ವರ ಅವರು 6 ವರ್ಷಗಳಿಂದ ಕೆಪಿಸಿಸಿ ಅಧ್ಯಕ್ಷರಾಗಿದ್ದಾರೆ. 2013ರ ವಿಧಾನಸಭೆ ಚುನಾವಣೆ, 2014ರ ಲೋಕಸಭೆ ಚುನಾವಣೆ, ಹಲವು ಉಪ ಚುನಾವಣೆ, ವಿಧಾನಪರಿಷತ್ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲ್ಲಲು ಕೆಲಸ ಮಾಡಿದ್ದಾರೆ.
ವಿಧಾನಪರಿಷತ್ ಸದಸ್ಯರಾದ ಅವರು ಸಿದ್ದರಾಮಯ್ಯ ಸಂಪುಟದಲ್ಲಿ ಗೃಹ ಸಚಿವರಾಗಿದ್ದರು. ಕೆಪಿಸಿಸಿ ಅಧ್ಯಕ್ಷರಾಗಿ ಮರು ಆಯ್ಕೆಯಾದ ಬಳಿಕ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಸೋತರೂ ಅನುದಾನ ತಂದರು
ಕೊರಟಗೆರೆ ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ ಡಾ.ಜಿ.ಪರಮೇಶ್ವರ ಅವರು ಸೋತಿದ್ದರು. ಆದರೆ, ಕ್ಷೇತ್ರವನ್ನು ಅವರು ಕಡೆಗಣಿಸಲಿಲ್ಲ. ವಿಧಾನ ಪರಿಷತ್ ಸದಸ್ಯರಾದರೂ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅನುದಾನ ತಂದಿದ್ದಾರೆ.
ಈ ಬಾರಿಯ ಚುನಾವಣೆಗೆ ಬಿರುಸಿನಿಂದ ಪರಮೇಶ್ವರ ಅವರು ಪ್ರಚಾರ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿ ಪ್ರಚಾರ ನಡೆಸುತ್ತಿದ್ದಾರೆ. ಗ್ರಾಮ ವಾಸ್ತವ್ಯ, ಮನೆ-ಮನೆ ಭೇಟಿ ಮೂಲಕ ಕ್ಷೇತ್ರದ ತುಂಬಾ ಸಂಚಾರ ನಡೆಸಿ ಚುನಾವಣೆಗಾಗಿ ಪ್ರಚಾರ ಮಾಡಿದ್ದಾರೆ.
ಈ ಬಾರಿಯ ಚುನಾವಣಾ ಕಣ
ಡಾ.ಜಿ.ಪರಮೇಶ್ವರ ಅವರು 2013ರ ಚುನಾವಣೆಯಲ್ಲಿ 54,074 ಮತಗಳನ್ನು ಪಡೆದು ಜೆಡಿಎಸ್ನ ಸುಧಾಕರಲಾಲ್ ವಿರುದ್ಧ ಸೋತಿದ್ದರು. ಈ ಬಾರಿಯೂ ಸುಧಾಕರಲಾಲ್ ಅವರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ. ಬಿಜೆಪಿಯಿಂದ ವೈ.ಹುಚ್ಚಯ್ಯ ಅವರು ಕಣದಲ್ಲಿದ್ದಾರೆ.