ಶಿರಾ ಉಪ ಚುನಾವಣಾ ಅಖಾಡಕ್ಕೆ ಬಿಗ್ ಬಾಸ್ ಸ್ಪರ್ಧಿ!
ತುಮಕೂರು, ಅಕ್ಟೋಬರ್ 04: ತುಮಕೂರು ಜಿಲ್ಲೆಯ ಶಿರಾ ಕ್ಷೇತ್ರದ ಉಪ ಚುನಾವಣೆ ಕಣ ರಂಗೇರಿದೆ. ಕನ್ನಡ ಬಿಗ್ ಬಾಸ್ ಸ್ಪರ್ಧಿಯೊಬ್ಬರು ಚುನಾವಣಾ ಕಣಕ್ಕೆ ಇಳಿಯಲು ತಯಾರಿ ನಡೆಸಿದ್ದಾರೆ. ನವೆಂಬರ್ 3ರಂದು ಚುನಾವಣೆ ನಡೆಯಲಿದೆ, ನ.10ರಂದು ಫಲಿತಾಂಶ ಪ್ರಕಟವಾಗಲಿದೆ.
6ನೇ ಬಿಗ್ ಬಾಸ್ ಸಂಚಿಕೆಯ ಸ್ಪರ್ಧಿಯಾಗಿದ್ದ ದಿವಾಕರ್ ಶಿರಾ ಉಪ ಚುನಾವಣೆ ಕಣಕ್ಕಿಳಿಯಲು ತೀರ್ಮಾನಿಸಿದ್ದಾರೆ. ಫಿಲ್ಮಿ ಬೀಟ್ ಕನ್ನಡದ ಜೊತೆ ಮಾತನಾಡಿದ ದಿವಾಕರ್ ಈ ವಿಚಾರವನ್ನು ಖಚಿತಪಡಿಸಿದ್ದಾರೆ.
ಶಿರಾ ಕ್ಷೇತ್ರದ ಟಿಕೆಟ್; ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟ
"ಕೆಲವು ಪಕ್ಷಗಳ ಜೊತೆಗೆ ಮಾತಾಡುತ್ತಿದ್ದೇನೆ. ನಾಲ್ಕು ಅಥವ ಐದು ದಿನದಲ್ಲಿ ಈ ಕುರಿತು ಅಧಿಕೃತವಾಗಿ ಘೋಷಣೆ ಮಾಡುತ್ತೇನೆ. ಯಾವುದೇ ಪಕ್ಷ ಟಿಕೆಟ್ ನೀಡದಿದ್ದರೆ ಪಕ್ಷೇತರವಾಗಿ ಕಣಕ್ಕಿಳಿಯುತ್ತೇನೆ, ಒಟ್ಟಿನಲ್ಲಿ ಉಪ ಚುನಾವಣೆಗೆ ನಿಲ್ಲುವುದು ಖಚಿತ" ಎಂದು ದಿವಾಕರ್ ಹೇಳಿದರು.
ಶಿರಾ, ಆರ್ಆರ್ ನಗರ ಉಪ ಚುನಾವಣೆಗೆ ದಿನಾಂಕ ಪ್ರಕಟ!
ಶಿರಾ ಕ್ಷೇತ್ರದ ಉಪ ಚುನಾವಣೆಗೆ ಕಾಂಗ್ರೆಸ್ ಈಗಾಗಲೇ ಮಾಜಿ ಸಚಿವ ಟಿ. ಬಿ. ಜಯಚಂದ್ರ ಅವರನ್ನು ಅಭ್ಯರ್ಥಿ ಎಂದು ಘೋಷಣೆ ಮಾಡಿದೆ. ಡಾ. ರಾಜೇಶ್ ಶನಿವಾರ ಬಿಜೆಪಿ ಸೇರಿದ್ದು, ಅವರು ಅಭ್ಯರ್ಥಿ ಎಂಬ ಸುದ್ದಿಗಳು ಹಬ್ಬಿವೆ. ಜೆಡಿಎಸ್ ಇನ್ನೂ ಅಭ್ಯರ್ಥಿ ಘೋಷಣೆ ಮಾಡಿಲ್ಲ.
ಶಿರಾ ಉಪ ಚುನಾವಣೆ; ಬಿಜೆಪಿ ಟಿಕೆಟ್ಗೆ 8ಕ್ಕೂ ಅಧಿಕ ಆಕಾಂಕ್ಷಿಗಳು
ಶಿರಾದಲ್ಲಿ ಸಂಚಾರ ನಡೆಸಿದ್ದೇನೆ
"ಶಿರಾ ಕ್ಷೇತ್ರದ ಪರಿಚಯ ನನಗೆ ಚೆನ್ನಾಗಿಯೇ ಇದೆ. ಸೇಲ್ಸ್ಮ್ಯಾನ್ ಆಗಿ ಇಡೀ ಕರ್ನಾಟಕವನ್ನೇ ಸುತ್ತು ಹಾಕಿದ್ದೀನಿ. ತುಮಕೂರು ಜಿಲ್ಲೆಯ ಶಿರಾದಲ್ಲಿ ಸಹ ಓಡಾಡಿದ್ದೇನೆ, ಜನರ ಜೊತೆ ಬೆರೆತಿದ್ದೇನೆ. ಕೋವಿಡ್ ಸಮಯದಲ್ಲಿ ಮಾಸ್ಕ್ ಹಂಚಿಕೆ ಮಾಡಲು ಶಿರಾಗೆ ಬಂದಿದ್ದೆ. ಉದ್ಯೋಗದ ಕಾರಣಕ್ಕೂ ಬಂದಿದ್ದೆ" ಎಂದು ದಿವಾಕರ್ ಹೇಳಿದರು.
ಗೆಳೆಯರು ಬೆಂಬಲ ನೀಡಿದ್ದಾರೆ
"ಉಪ ಚುನಾವಣೆ ಕಣಕ್ಕಿಳಿಯಲು ನನ್ನ ಗೆಳೆಯರು ಬೆಂಬಲ ನೀಡಿದ್ದಾರೆ. ಬಿಗ್ ಬಾಸ್ ಗೆಳೆಯರನ್ನು ಪ್ರಚಾರಕ್ಕೆ ಕರೆದುಕೊಂಡು ಬರುವ ಬಗ್ಗೆ ಈಗ ಹೇಳಲಾರೆ.ಅವರ ಬೆಂಬಲವಂತೂ ನನಗೆ ಇರುತ್ತದೆ. ಶಿರಾ ಕ್ಷೇತ್ರದಲ್ಲಿ ಸಂಚಾರ ಪ್ರಾರಂಭಿಸಿದ್ದೇನೆ. ತಾತ್ಕಾಲಿಕವಾಗಿ ವಾಸ್ತವ್ಯವನ್ನು ಶಿರಾಗೆ ಬದಲಾಯಿಸುತ್ತಿದ್ದೇನೆ. ಇಲ್ಲಿನ ಜನರೊಂದಿಗೆ ಬೆರೆಯುತ್ತೇನೆ" ಎಂದು ದಿವಾಕರ್ ಹೇಳಿದರು.
ಏಕೆ ಮತ ಹಾಕಬೇಕು?
"ದಿವಾಕರ್ ಬಿಗ್ ಬಾಸ್ ಸ್ಪರ್ಧಿ, ಸಿನಿಮಾ ಮಾಡಿದ್ದೇನೆ ಎಂಬ ಕಾರಣಕ್ಕೆ ಜನರು ಮತದಾನ ಮಾಡುವುದು ಬೇಡ. ಅವರಿಗಾಗಿ ನಾನು ಕೆಲಸ ಮಾಡುತ್ತೇನೆ ಎಂಬ ನಂಬಿಕೆಯಲ್ಲಿ ಮತ ಹಾಕಲಿ. ಸಾಮಾನ್ಯ ವ್ಯಕ್ತಿಯಾಗಿ ನನಗೆ ಸಾಮಾನ್ಯ ವ್ಯಕ್ತಿಯ ಕಷ್ಟ ಗೊತ್ತು, ಅವರಿಗೆ ಆಗುತ್ತಿರುವ ತೊಂದರೆಗಳು ಗೊತ್ತು. ಸಾಮಾನ್ಯರ ಹಕ್ಕನ್ನು ಅವರಿಗೆ ಕೊಡಿಸುವ ಉದ್ದೇಶದಿಂದ ನಾನು ಚುನಾವಣೆಗೆ ನಿಲ್ಲುತ್ತಿದ್ದೇನೆ" ಎಂದು ದಿವಾಕರ್ ಹೇಳಿದರು.
ಕಾಂಗ್ರೆಸ್-ಜೆಡಿಎಸ್ ಪೈಪೋಟಿ
ಜೆಡಿಎಸ್ನ ಬಿ. ಸತ್ಯನಾರಾಯಣ ಅವರ ಅಕಾಲಿಕ ನಿಧನದಿಂದಾಗಿ ಉಪ ಚುನಾವಣೆ ಎದುರಾಗಿದೆ. ಶಿರಾ ಕ್ಷೇತ್ರದ ಚುನಾವಣೆ ಎಂದರೆ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ಪೈಪೋಟಿ. ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾರಣ ಕ್ಷೇತ್ರದಲ್ಲಿ ಬಿಜೆಪಿ ಅದೃಷ್ಟ ಪರೀಕ್ಷೆಗೆ ಇಳಿದಿದೆ.