ಕುಮಾರಸ್ವಾಮಿ ವಿರುದ್ಧ ಬಾಂಬ್ ಸಿಡಿಸಿದ ಜೆಡಿಎಸ್ ಶಾಸಕ
ತುಮಕೂರು, ಸೆಪ್ಟೆಂಬರ್ 12: ಸಮ್ಮಿಶ್ರ ಸರ್ಕಾರದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗಿದ್ದ ಗುಬ್ಬಿ ಜೆಡಿಎಸ್ ಶಾಸಕ ಎಸ್ ಆರ್ ಶ್ರೀನಿವಾಸ್ ಅವರು ತಮ್ಮದೇ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ವಿರುದ್ಧ ಸ್ಫೋಟಕ ಆರೋಪ ಮಾಡಿದ್ದಾರೆ.
ಕುಮಾರಸ್ವಾಮಿ ಅವರಿಗೆ ಇ.ಡಿ ಬಂಧನಕ್ಕೆ ಒಳಗಾಗಿರುವ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರ ಮೇಲೆ ಪ್ರೀತಿ ಇಲ್ಲ. ಪ್ರೀತಿ ಇದ್ದಿದ್ದರೆ ಅವರು ಒಕ್ಕಲಿಗ ಸಮುದಾಯ ನಡೆಸಿದ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದರು ಎಂದು ಎಸ್ ಆರ್ ಶ್ರೀನಿವಾಸ್ ಹೇಳಿದ್ದಾರೆ.
ಡಿ.ಕೆ. ಶಿವಕುಮಾರ್ ಪರ ಪ್ರತಿಭಟನೆ : ಎಚ್ಡಿಕೆ ಗೈರಾಗಿದ್ದು ಏಕೆ?
ಡಿಕೆ ಶಿವಕುಮಾರ್ ಅವರ ಬಂಧನವನ್ನು ಖಂಡಿಸಿ ಬೆಂಗಳೂರಿನಲ್ಲಿ ಬುಧವಾರ ಬೃಹತ್ ಪ್ರತಿಭಟನೆ ನಡೆಸಲಾಗಿತ್ತು. ಈ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ನಾಯಕರು, ವಿವಿಧ ಸಂಘ ಸಂಸ್ಥೆಗಳು ಪಾಲ್ಗೊಂಡಿದ್ದರು. ಆದರೆ ಅದರಲ್ಲಿ ಕುಮಾರಸ್ವಾಮಿ ಅವರು ಪಾಲ್ಗೊಂಡಿರಲಿಲ್ಲ. ತಮಗೆ ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಆಮಂತ್ರಣ ನೀಡಿರಲಿಲ್ಲ ಎಂದು ಕುಮಾರಸ್ವಾಮಿ ಅವರು ಹೇಳಿಕೆ ನೀಡಿದ್ದರು.
ಪ್ರೀತಿ ಇದ್ದಿದ್ದರೆ ಎಚ್ಡಿಕೆ ಬರುತ್ತಿದ್ದರು
'ಕುಮಾರಸ್ವಾಮಿ ಅವರು ಪ್ರತಿಭಟನೆಗೆ ಬರಬೇಕು ಎಂದೇನೂ ಇಲ್ಲ. ನಮ್ಮ ಸಮುದಾಯದ ಮುಖಂಡನಿಗೆ ಅನ್ಯಾಯವಾದಾಗ ಪ್ರತಿಭಟಿಸುವುದು ನಮ್ಮ ಕರ್ತವ್ಯ. ನಮಗೆಲ್ಲರಿಗೂ ಡಿಕೆ ಶಿವಕುಮಾರ್ ಅವರ ಮೇಲೆ ಪ್ರೀತಿ ಇತ್ತು. ಹಾಗಾಗಿ ಹೋಗಿದ್ದೆವು. ಕುಮಾರಸ್ವಾಮಿ ಅವರಿಗೆ ಆ ಭಾವನೆ ಇರಲಿಲ್ಲ. ಆ ಭಾವನೆ ಇದ್ದಿದ್ದರೆ ಖಂಡಿತವಾಗಿಯೂ ಹೋರಾಟಕ್ಕೆ ಬರುತ್ತಿದ್ದರು. ಆಮಂತ್ರಣ ಕೊಟ್ಟು ಕರೆಯುವ ಕಾರ್ಯಕ್ರಮ ಇದಲ್ಲ. ಆಮಂತ್ರಣ ಇಲ್ಲದೆಯೇ 25,000 ಮಂದಿ ಭಾಗವಹಿಸಿದ್ದರು' ಎಂದು ಎಸ್ ಆರ್ ಶ್ರೀನಿವಾಸ್ ಟೀಕಿಸಿದರು.
ಇಂದು ಒಕ್ಕಲಿಗರು, ಅಂದು ಲಿಂಗಾಯತರು: ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರಾರು?
ಒಕ್ಕಲಿಗರಲ್ಲಿ ಸ್ವಪ್ರತಿಷ್ಠೆ ಹೆಚ್ಚಾಗಿದೆ
'ಒಕ್ಕಲಿಗರಲ್ಲಿ ಸ್ವಪ್ರತಿಷ್ಠೆ ಹೆಚ್ಚಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಕೂಡ ಒಕ್ಕಲಿಗರಲ್ಲಿ ಸ್ವಪ್ರತಿಷ್ಠೆ ಹೆಚ್ಚಿದೆ. ಇದು ಕೇವಲ ಕುಮಾರಸ್ವಾಮಿ ಅವರ ವಿಚಾರವಷ್ಟೇ ಅಲ್ಲ. ವೈಯಕ್ತಿಕ ಪ್ರತಿಷ್ಠೆಗಳ ಕಾರಣ ಸಮಾಜ ಕೆಡುತ್ತಿದೆ. ಸಮಾಜದ ವಿಷಯ ಬಂದಾಗ ಎಲ್ಲರೂ ಸ್ವಪ್ರತಿಷ್ಠೆ ಬಿಟ್ಟು ಒಂದಾಗಬೇಕು' ಎಂದು ಹೇಳಿದರು.
ತಪ್ಪು ಮಾಡಿದ್ದರೆ ಹಿಡಿದುಕೊಂಡು ಹೋಗಲಿ
'ಎಚ್ ಡಿ ಕುಮಾರಸ್ವಾಮಿ ಅವರು ಫೋನ್ ಕದ್ದಾಲಿಕೆ ಮಾಡಿದ್ದರೆ ಅವರನ್ನು ಹಿಡಿದುಕೊಂಡು ಹೋಗಲಿ. ಅವರು ಮಾಡಬಾರದ್ದನ್ನು ಮಾಡಿ ದುಡ್ಡು ಹೊಡೆದಿದ್ದರೆ ಅವರನ್ನು ಹಿಡಿದುಕೊಂಡು ಹೋಗುತ್ತಾರೆ. ಅದರಲ್ಲಿ ತಪ್ಪಿಲ್ಲ' ಎನ್ನುವ ಮೂಲಕ ಕುಮಾರಸ್ವಾಮಿ ಮತ್ತು ಪಕ್ಷವನ್ನು ಮುಜುಗರಕ್ಕೆ ಸಿಲುಕಿಸಿದ್ದಾರೆ.
ಡಿಕೆಶಿಗಾಗಿ ಒಕ್ಕಲಿಗರ ಪ್ರತಿಭಟನೆ, 'ಉಗ್ರಹೋರಾಟ'ದ ಹಿಂದೆ ಏನೆಲ್ಲಾ ಲೆಕ್ಕಾಚಾರ!
ನನ್ನ ಫೋನ್ ಟ್ಯಾಪ್ ಆಗುತ್ತಿತ್ತು
'ಕುಮಾರಸ್ವಾಮಿ ಅವರನ್ನು ಹಿಡಿಯಬಾರದು ಎಂದು ಕಾನೂನು ಇದೆಯೇ? ನನ್ನ ಫೋನ್ ಕದ್ದಾಲಿಕೆ ಆಗುತ್ತಿದ್ದದ್ದು ನಿಜ. ಸಮ್ಮಿಶ್ರ ಸರ್ಕಾರದಲ್ಲಿ ಭಾಗವಾಗಿದ್ದಾಗಲೂ ನನ್ನ ಫೋನ್ ಟ್ಯಾಪ್ ಆಗುತ್ತಿತ್ತು. ಅದು ಕುಮಾರಸ್ವಾಮಿ ಮಾಡಿದ್ದಾರೋ, ಅಧಿಕಾರಿಗಳು ಮಾಡಿದ್ದಾರೋ ಗೊತ್ತಿಲ್ಲ. ವಿಷಯ ತಿಳಿಯುತ್ತಿದ್ದಂತೆಯೇ ನನ್ನ ಫೋನ್ ನಂಬರ್ ಬದಲಾಯಿಸಿದೆ. ಕುಮಾರಸ್ವಾಮಿ ಅವರು ನನ್ನ ಮೇಲೆ ಕೂಡ ಅನುಮಾನಪಟ್ಟಿದ್ದರೋ ಏನೋ ಗೊತ್ತಿಲ್ಲ' ಎಂದು ಹೇಳಿದರು.