Breaking: ಶಾಸಕ ಗುಬ್ಬಿ ಶ್ರೀನಿವಾಸ್ ಆಪ್ತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ
ತುಮಕೂರು, ಜೂ. 16: ಜೆಡಿಎಸ್ ಮುಖಂಡ, ಗುಬ್ಬಿ ಪಟ್ಟಣ ಪಂಚಾಯಿತಿಯ ಮಾಜಿ ಅಧ್ಯಕ್ಷನನ್ನು ದುಷ್ಕರ್ಮಿಗಳು ಹಾಡ ಹಗಲೇ ಅಟ್ಟಾಡಿಸಿ ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ರಾಜಕೀಯ ಮುಖಂಡನ ಕೊಲೆಯಿಂದಾಗಿ ಗುಬ್ಬಿ ಪಟ್ಟಣದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ನರಸಿಂಹಮೂರ್ತಿ (54) ಕೊಲೆಯಾದ ವ್ಯಕ್ತಿ. ಬುಧವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ಸ್ಥಳೀಯ ಶಾಸಕ ಎಸ್. ಆರ್. ಶ್ರೀನಿವಾಸ್ ಅವರ ಬಲಗೈ ಬಂಟನಾಗಿ ಗುರುತಿಸಿಕೊಂಡಿದ್ದ ನರಸಿಂಹಮೂರ್ತಿ ದಲಿತ ಸಂಘರ್ಷ ಸಮಿತಿಯ ನಾಯಕನಾಗಿ ತಾಲೂಕಿನಲ್ಲಿ ಗುರುತಿಸಿಕೊಂಡಿದ್ದರು.
ಬುಧವಾರ ಮಧ್ಯಾಹ್ನ ಗುಬ್ಬಿ ಸರ್ಕಾರಿ ಆಸ್ಪತ್ರೆ ಸಮೀಪದ ಪೆಟ್ಟಿಗೆ ಅಂಗಡಿ ಬಳಿ ಸ್ನೇಹಿತರ ಜತೆ ಮಾತನಾಡುತ್ತಿರುವಾಗ ಐವರು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದಾರೆ. ಮಾರಣಾಂತಿಕ ದಾಳಿಯಿಂದ ತಪ್ಪಿಸಿಕೊಳ್ಳಲು ನರಸಿಂಹಮೂರ್ತಿ ಯತ್ನಿಸಿದ್ದು, ಐವರು ಏಕ ಕಾಲಕ್ಕೆ ದಾಳಿ ಮಾಡಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ಇದರಿಂದಾಗಿ ನರಸಿಂಹಮೂರ್ತಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಹತ್ಯೆ ಮಾಡಿರುವ ದುಷ್ಕರ್ಮಿಗಳ ಪೈಕಿ ಒಬ್ಬ ಬೈಕ್ ನಲ್ಲಿ ಬಂದಿದ್ದು, ಉಳಿದ ನಾಲ್ವರು ಕಾರಿನಲ್ಲಿ ಬಂದಿದ್ದಾರೆ. ಘಟನಾ ಸ್ಥಳಕ್ಕೆ ಎಎಸ್ಪಿ ಉದೇಶ್ ಸೇರಿದಂತೆ ಸ್ಥಳೀಯ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮೂವರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಭೂ ವ್ಯಾಜ್ಯ ವಿಚಾರವಾಗಿ ಹಳೇ ವೈಷಮ್ಯದಿಂದ ದಾಳಿ ಮಾಡಿ ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
Recommended Video
ಇತ್ತೀಚೆಗೆ ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿ ಗುಬ್ಬಿ ಶಾಸಕ ಎಸ್.ಆರ್. ಶ್ರೀನಿವಾಸ್ ಜೆಡಿಎಸ್ ನಿಂದ ಉಚ್ಛಾಟನೆಗೊಂಡಿದ್ದರು. ಇದರ ಬೆನ್ನಲ್ಲೇ ಶ್ರೀನಿವಾಸ್ ಅವರ ಬಲಗೈ ಬಂಟ ಹತ್ಯೆಯಾಗಿದ್ದಾನೆ. ಘಟನೆ ಕುರಿತು ಗುಬ್ಬಿ ಟೌನ್ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.