ಶಿರಾ: ಬಿ.ವೈ.ವಿಜಯೇಂದ್ರ ಮುಂದೆ ಮಂಡಿಯೂರಿದ ಪ್ರಜ್ವಲ್ ರೇವಣ್ಣ ಕಾರ್ಯತಂತ್ರ
"ಶಿರಾದಲ್ಲಿ ಅಲೆಯಲ್ಲ, ಬಿಜೆಪಿ ಪರ ಸುನಾಮಿ ಎದ್ದಿದೆ" ಇದು ಶಿರಾ ಅಸೆಂಬ್ಲಿಯ ಉಪಚುನಾವಣೆಯ ಉಸ್ತುವಾರಿಯನ್ನು ವಹಿಸಿಕೊಂಡಿದ್ದ ಸಿಎಂ ಯಡಿಯೂರಪ್ಪನವರ ಪುತ್ರ ಬಿ.ವೈ.ವಿಜಯೇಂದ್ರ ಸಂಭ್ರಮದ ಮಾತಾಗಿತ್ತು.
ನೆಲೆಯೇ ಇಲ್ಲದ ಶಿರಾ ಕ್ಷೇತ್ರದಲ್ಲಿ ಬಿಜೆಪಿ ಅರಳಿದೆ. ಆ ಮೂಲಕ, ಕೆ.ಆರ್.ಪೇಟೆಯಲ್ಲಿ ಹೊರಬಿದ್ದ ಅಚ್ಚರಿಯ ಫಲಿತಾಂಶ ಇಲ್ಲೂ ಪುನರಾವರ್ತನೆಗೊಂಡಿದೆ. ಇದರೊಂದಿಗೆ, ಕರ್ನಾಟಕದಲ್ಲಿ ಬಿಜೆಪಿಗೆ ವಿಜಯೇಂದ್ರ ಮೂಲಕ, ಹೊಸ ಚುನಾವಣಾ ತಂತ್ರಗಾರ ಲಭಿಸಿದಂತಾಗಿದೆ.
ಹೆಣ್ಣಿನ ಕಣ್ಣೀರು, ಸಿಂಗಲ್ ಟೇಕ್ ವರ್ಕೌಟ್ ಆಗಿಲ್ಲ: ಮುನಿರತ್ನ ನಾಗಾಲೋಟ
ಶಿರಾ ಕ್ಷೇತ್ರದ ಗೆಲುವಿನ ಹಿಂದೆ ವಿಜಯೇಂದ್ರ ರೂಪಿಸಿದ್ದ ಕಾರ್ಯತಂತ್ರ ಕಾರಣವಾಗಿತ್ತು ಎನ್ನುವುದು ಸ್ಪಷ್ಟ. ಅದೇ ರೀತಿ, ಜೆಡಿಎಸ್ ವರಿಷ್ಠ ದೇವೇಗೌಡ್ರು ಈ ಕ್ಷೇತ್ರದ ಉಸ್ತುವಾರಿಯನ್ನು ಎಚ್.ಡಿ.ರೇವಣ್ಣ ಮತ್ತು ಅವರ ಪುತ್ರ ಪ್ರಜ್ವಲ್ ರೇವಣ್ಣಗೆ ವಹಿಸಿದ್ದರು.
ಇವಿಎಂ ದೂಷಿಸಬೇಡಿ ಎಂದ ಕಾಂಗ್ರಸ್ ಸಂದ ಕಾರ್ತಿ ಚಿದಂಬರಂ!
ವಿಜಯೇಂದ್ರ ರೀತಿಯಲ್ಲಿ ಪ್ರಜ್ವಲ್ ರೇವಣ್ಣ ಸಾಕಷ್ಟು ಶ್ರಮವಹಿಸಿ ಚುನಾವಣಾ ಪ್ರಚಾರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಆದರೂ, ಪ್ರಮುಖವಾಗಿ ಯುವ ಸಮುದಾಯವನ್ನೇ ಟಾರ್ಗೆಟ್ ಮಾಡಿದ್ದ ವಿಜಯೇಂದ್ರ ಅವರ ಕಾರ್ಯತಂತ್ರದ ಮುಂದೆ ಪ್ರಜ್ವಲ್ ಆಟ ನಡೆಯಲಿಲ್ಲ.
ಬಿಜೆಪಿ, ಸಂಘ ಪರಿವಾರದ 4ಸಾವಿರಕ್ಕೂ ಹೆಚ್ಚು ಯುವಕರನ್ನು ಪ್ರಚಾರಕ್ಕೆ ಬಳಸಿಕೊಂಡಿತ್ತು
ಕೆಲವೊಂದು ಮೂಲಗಳ ಪ್ರಕಾರ ಬಿಜೆಪಿ, ಸಂಘ ಪರಿವಾರದ ನಾಲ್ಕು ಸಾವಿರಕ್ಕೂ ಹೆಚ್ಚು ಯುವಕರನ್ನು ಪ್ರಚಾರಕ್ಕೆ ಬಳಸಿಕೊಂಡಿತ್ತು. ಅತ್ಯಂತ ಶಿಸ್ತಿನಿಂದ ಹೋಬಳಿ ಮಟ್ಟದಲ್ಲಿ ಬಿಜೆಪಿ ಪ್ರಚಾರ ನಡೆಸಿದ್ದು, ಇದಲ್ಲದೇ, ಚುನಾವಣೆಯ ದಿನ ಹೋಬಳಿಯ ಮತದಾರ ಬಂದು ಮತ ಚಲಾವಣೆ ನಡೆಸುವ ಜವಾಬ್ದಾರಿಯನ್ನೂ ಈ ಯುವಕರಿಗೆ ವಹಿಸಲಾಗಿತ್ತು. ಜೆಡಿಎಸ್ ಮತ್ತು ಕಾಂಗ್ರೆಸ್ ಇಷ್ಟು ತಳಮಟ್ಟದ ಪ್ರಚಾರಕ್ಕೆ ಹೋಗಿರಲಿಲ್ಲ.
ಪ್ರಜ್ವಲ್ ರೇವಣ್ಣ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಸುತ್ತಾಡಿ ಪ್ರಚಾರ ನಡೆಸಿದ್ದರು
ಪ್ರಜ್ವಲ್ ರೇವಣ್ಣ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಸುತ್ತಾಡಿ ಪ್ರಚಾರ ನಡೆಸಿದ್ದರು. ಅವರಿಗೆ ರೇವಣ್ಣ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರಚಾರದಲ್ಲಿ ತಮ್ಮನ್ನೂ ತೊಡಗಿಸಿಕೊಂಡು ಸಾಥ್ ನೀಡಿದ್ದರು. ಒಂದೆರಡು ಬಾರಿ ನಿಖಿಲ್ ಕುಮಾರಸ್ವಾಮಿ ಕೂಡಾ ಬಂದು ಪ್ರಚಾರ ನಡೆಸಿದ್ದರು. ಆದರೆ, ಸರಿಯಾದ ಗೇಮ್ ಪ್ಲ್ಯಾನ್ ಇಟ್ಟುಕೊಂಡು ಜೆಡಿಎಸ್ ಪ್ರಚಾರಕ್ಕೆ ಇಳಿದಿತ್ತೇ ಎನ್ನುವುದಿಲ್ಲಿ ಪ್ರಶ್ನೆ.
ಇಬ್ಬರು ಸಹೋದರರ (ಪ್ರಜ್ವಲ್, ನಿಖಿಲ್) ನಡುವೆ ಹೊಂದಾಣಿಕೆಯ ಕೊರತೆ
ಆದರೆ, ಚುನಾವಣಾ ಪ್ರಚಾರದ ಕೊನೆಯ ಹಂತದಲ್ಲಿ ದೇವೇಗೌಡ್ರು, ಕುಮಾರಸ್ವಾಮಿ, ರೇವಣ್ಣ, ಪ್ರಜ್ವಲ್, ನಿಖಿಲ್ ವೇದಿಕೆಯಲ್ಲಿದ್ದಂತಹ ಸಂದರ್ಭದಲ್ಲಿ ನಡೆದ ಘಟನೆ, ಜೆಡಿಎಸ್ ಹಿನ್ನಡೆಗೆ ಒಂದು ಕಾರಣವಾಯಿತು ಕೂಡಾ ಎಂದು ಹೇಳಬಹುದು. ಇಬ್ಬರು ಸಹೋದರರ (ಪ್ರಜ್ವಲ್, ನಿಖಿಲ್) ನಡುವೆ ಹೊಂದಾಣಿಕೆಯ ಕೊರತೆ ಇದೆಯೇ ಎಂದು ಪ್ರಶ್ನಿಸುವಂತಾಯಿತು.
ವಿಜಯೇಂದ್ರ ಮುಂದೆ ಮಂಡಿಯೂರಿದ ಪ್ರಜ್ವಲ್ ರೇವಣ್ಣ ಕಾರ್ಯತಂತ್ರ
ಇನ್ನು, ಮತಗಳು ಜೆಡಿಎಸ್- ಕಾಂಗ್ರೆಸ್ ಜೊತೆ ಹಂಚಿಹೋಗಿದ್ದೂ, ಇಲ್ಲಿ ಬಿಜೆಪಿ ಗೆಲುವಿಗೆ ಪ್ರಮುಖ ಕಾರಣವಾಯಿತು. ಆಡಳಿತ ಪಕ್ಷವಾಗಿರುವ ಲಾಭವನ್ನು ಭರ್ಜರಿಯಾಗಿ ಪಡೆದುಕೊಂಡ ಬಿಜೆಪಿ, ಕ್ಷೇತ್ರದಲ್ಲಿ ಸುಮಾರು ಹನ್ನೆರಡು ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದೆ. ಆ ಮೂಲಕ, ಬಿ.ವೈ.ವಿಜಯೇಂದ್ರ ತನ್ನ ಪ್ರಬಾವವನ್ನು ಮತ್ತಷ್ಟು ಹೆಚ್ಚಿಸಿಕೊಂಡಿದ್ದಾರೆ.