ಒಂದು ವೇಳೆ ಗೌಡ್ರು ಸೋತ್ರೆ, ರಾಜೀನಾಮೆ ಪತ್ರ ರೆಡಿ ಇಟ್ಕೊಂಡ ಜೆಡಿಎಸ್ ಶಾಸಕ
ಗೌಡ್ರು ಸೋತ್ರೆ, ರಾಜೀನಾಮೆ ಪತ್ರ ರೆಡಿ ಇಟ್ಕೊಂಡ ಜೆಡಿಎಸ್ ಶಾಸಕ
ತುಮಕೂರು, ಏ 20: ರಾಜ್ಯದ ಮೊದಲ ಹಂತದ ಲೋಕಸಭಾ ಚುನಾವಣೆ ಮುಕ್ತಾಯಗೊಂಡಿದೆ. ಫಲಿತಾಂಶ ಹೊರಬೀಳಲು ಇನ್ನೂ ಹೆಚ್ಚುಕಮ್ಮಿ ಒಂದು ತಿಂಗಳು ಕಾಯಬೇಕಿದೆ.
ಈ ನಡುವೆ, ತುಮಕೂರು ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ದೇವೇಗೌಡ್ರು ಸೋತರೆ, ರಾಜೀನಾಮೆ ಪತ್ರದೊಂದಿಗೆ ಬರುತ್ತೇನೆ ಎಂದು ಅವರದ್ದೇ ಪಕ್ಷದ ಶಾಸಕರೊಬ್ಬರು ಸಾಮಾಜಿಕ ತಾಣದಲ್ಲಿ ಬರೆದುಕೊಂಡಿದ್ದಾರೆ.
ಮೋದಿ ಪ್ರಧಾನಿಯಾಗುತ್ತಾರಾ, ದೇವೀರಮ್ಮ ಭವಿಷ್ಯ
ಜಿಲ್ಲೆಯ ಗುಬ್ಬಿ ಕ್ಷೇತ್ರದ ಶಾಸಕ ಎಸ್ ಆರ್ ಶ್ರೀನಿವಾಸ್, ದೇವೇಗೌಡ್ರನ್ನು ಗೆಲ್ಲಿಸಿಕೊಂಡು ಬರುತ್ತೇವೆ, ಇಲ್ಲದಿದ್ದರೆ ರಾಜೀನಾಮೆ ಪತ್ರದೊಂದಿಗೆ ಬರುತ್ತೇನೆ ಎಂದು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.
ಮೈತ್ರಿಪಕ್ಷದ ಅಭ್ಯರ್ಥಿಯಾಗಿರುವ ದೇವೇಗೌಡರಿಗೆ, ಬಿಜೆಪಿಯ ಬಸವರಾಜು ಭಾರೀ ಪೈಪೋಟಿಯನ್ನು ನೀಡುತ್ತಿದ್ದಾರೆ. ಕ್ಷೇತ್ರದಲ್ಲಿಅತಿಹೆಚ್ಚು ಮತದಾನವಾಗಿರುವುದು ಮತ್ತು ಕಾಂಗ್ರೆಸ್ ಶಾಸಕ ಮುದ್ದಹನುಮೇಗೌಡರ ಮುನಿಸಿನಿಂದಾಗಿ, ಗೌಡ್ರ ಗೆಲುವು ಅಷ್ಟೇನೂ ಸುಲಭವಲ್ಲ ಎಂದು ಹೇಳಲಾಗುತ್ತಿದೆ.
ಫೇಸ್ ಬುಕ್ ಪೋಸ್ಟ್ ಕೆಳಗೆ, ದೇವೇಗೌಡರನ್ನು ಗೆಲ್ಲಿಸಿಕೊಂಡು ಬರುವಂತೆ, ಕುಮಾರಣ್ಣನಿಗೆ ವಾಗ್ದಾನ ನೀಡಿದ ಮಿನಿಸ್ಟರ್ ಗುಬ್ಬಿ ವಾಸಣ್ಣ ಎನ್ನುವ ಒಕ್ಕಣೆ ಬರೆಲಾಗಿದೆ.
ಸುಮಾರು 29 ಸಾವಿರ ಫಾಲೋವರ್ಸ್ ಈ ಫೇಸ್ ಬುಕ್ (@SRSrinivasVasu) ಖಾತೆ ಹೊಂದಿದ್ದು, ಮಾತು ಅಂದ್ರೆ ಮಾತು, ಅದೇ ವಾಸಣ್ಣನ ಗತ್ತು... ದೇವೇಗೌಡರ ಗೆಲುವು ನಿಶ್ಚಿತ, ಬನ್ನಿ ಒಟ್ಟಾಗಿ ಶ್ರಮಿಸೋಣ...ಸಂಭವಾಮಿ ಯುಗೇ ಯುಗೇ... ಎನ್ನುವ ಕಾಮೆಂಟೂ ಬಂದಿವೆ.