ನಾಡಗೀತೆ ವೇಳೆ ಚೂಯಿಂಗ್ ಗಮ್ ಜಗಿದ ಮಹಿಳಾ ಐಎಎಸ್ ಅಧಿಕಾರಿ ಅಮಾನತು
ತುಮಕೂರು, ಡಿಸೆಂಬರ್ 29: ನಾಡಗೀತೆಗೆ ಅಪಮಾನ ಮಾಡಿದ್ದಾರೆಂದು ಆರೋಪಿಸಿ ಐಎಎಸ್ ಪ್ರೊಬೆಷನರಿ ಅಧಿಕಾರಿ ಪ್ರೀತಿ ಗೆಲ್ಹೊಟ್ ಅವರನ್ನು ಅಮಾನತು ಮಾಡಲಾಗಿದೆ.
ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ರತ್ನಪ್ರಭಾ ಅವರು ಐಎಎಸ್ ಪ್ರೊಬೆಷನರಿ ಅಧಿಕಾರಿ ಪ್ರೀತಿ ಗೆಲ್ಹೊಟ್ ಅವರನ್ನು ಅಮಾನತು ಮಾಡಿ ಶುಕ್ರವಾರ ಆದೇಶ ಹೊರಡಿಸಿದರು.
ಗುರುವಾರ ಜಿಲ್ಲೆಯ ಶಿರಾ ತಾಲೂಕಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ್ದ ಕುವೆಂಪು ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮದ ವೇದಿಕೆ ಮೇಲೆ ನಾಡಗೀತೆ ಹಾಡುತ್ತಿದ್ದಾಗ ಪ್ರೀತಿ ಗೆಲ್ಹೊಟ್ ಚೂಯಿಂಗ್ ಗಮ್ ಜಗಿಯುತ್ತಿದ್ದರು. ಇದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳು ವ್ಯಕ್ತವಾಗಿದ್ದವು.
ಕಾರ್ಯಕ್ರಮದ ವೇದಿಕೆ ಮೇಲೆ ನಾಡಗೀತೆ ಹಾಡುತ್ತಿದ್ದಾಗ ಐಎಎಸ್ ಪ್ರೊಬೆಷನರಿ ಅಧಿಕಾರಿ ಚೂಯಿಂಗ್ ಗಮ್ ಜಗಿಯುತ್ತಿದ್ದ ದೃಶ್ಯ ಕ್ಯಾಮರಾಗಳಲ್ಲಿ ಸೆರೆಯಾಗಿ ಭಾರೀ ಸುದ್ದಿಯಾಗಿದೆ.
ನಿನ್ನೆ ವೇದಿಕೆ ಮೇಲೆ ಕಲಾವಿದರು ನಾಡಗೀತೆ ಹಾಡಲು ಆರಂಭಿಸಿದಾಗ 2015ನೇ ಸಾಲಿನ ಪ್ರೊಬೆಷನರ್ ಅಧಿಕಾರಿ ಪ್ರೀತಿ ಗೆಲ್ಹೊಟ್ ಎದ್ದು ನಿಂತರು. ಆದರೆ ಬಾಯಲ್ಲಿ ಚೂಯಿಂಗ್ ಗಮ್ ಜಗಿಯುತ್ತಿದ್ದ ದೃಶ್ಯ ಕ್ಯಾಮರಾಗಳಲ್ಲಿ ಸೆರೆಯಾಗಿದ್ದು, ಭಾರೀ ಟೀಕೆಗಳಿಗೆ ಚರ್ಚೆ ಗ್ರಾಸವಾಗಿತ್ತು.
ಅಷ್ಟೇ ಅಲ್ಲದೇ ಸುದ್ದಿ ವಾಹಿನಿಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಸಾರ್ವಜನಿಕರಿಂದ ಅಧಿಕಾರಿ ವಿರುದ್ಧ ಟೀಕೆಗಳು ಕೇಳಿಬಂದವು. ಪ್ರೀತಿ ಗೆಲ್ಹೊಟ್ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ.