ಬಿಎಸ್ವೈಗೆ ಅಭಯ ನೀಡಿದ್ದ ಸಚಿವ ಮಾಧುಸ್ವಾಮಿ ಒಂದೇ ದಿನದಲ್ಲಿ ಯೂಟರ್ನ್
ಬೆಂಗಳೂರು, ಜ 27: ರಾಜಕಾರಣಿಗಳು ತಮ್ಮ ಮಾತನ್ನು ದೋಸೆ ತಿರುವಿ ಹಾಕಿದಂತೆ, ಹೇಗೆ ತಿರುವಿ ಹಾಕುತ್ತಾರೆ ಎನ್ನುವುದಕ್ಕೆ, ಕಾನೂನು ಮತ್ತು ಸಂಸದೀಯ ವ್ಯವಹಾರ ಖಾತೆಯ ಸಚಿವ ಜೆ.ಸಿ.ಮಾಧುಸ್ವಾಮಿ, ಸೋಮವಾರ ನೀಡಿದ ಹೇಳಿಕೆ ತಾಜಾ ಉದಾಹರಣೆಯಾಗಬಲ್ಲದು.
ತುಮಕೂರಿನಲ್ಲಿ ಒಂದು ದಿನದ ಹಿಂದೆ, "ಪಕ್ಷಕ್ಕಾಗಿ ಯಾವ ತ್ಯಾಗಕ್ಕೂ ಸಿದ್ದ. ಬೇಕಿದ್ದಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲೂ ಹಿಂಜರಿಯುವುದಿಲ್ಲ" ಎನ್ನುವ ಹೇಳಿಕೆಯನ್ನು ಮಾಧುಸ್ವಾಮಿ ನೀಡಿದ್ದರು.
ಸಂಪುಟ ವಿಸ್ತರಣೆಯ ಗುಮ್ಮದಲ್ಲಿರುವ ಬಿಎಸ್ವೈಗೆ ಸಚಿವ ತೋರಿದ ಉದಾರತೆ
ಇಂದು ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಸಚಿವರು, "ಮಾಧ್ಯಮದವರು ಸಚಿವ ಸಂಪುಟ ವಿಸ್ತರಣೆಯ ವಿಚಾರವನ್ನೇ ಟಾರ್ಗೆಟ್ ಮಾಡಿಕೊಂಡು ಪ್ರಶ್ನೆಗಳ ಸುರಿಮಳೆಯನ್ನು ಸುರಿಸಿದರು. ಹಾಗಾಗಿ, ಬೇರೆ ದಾರಿಯಿಲ್ಲದೇ, ರಾಜೀನಾಮೆಯ ಮಾತನ್ನಾಡಿದೆ" ಎಂದು ಮಾಧುಸ್ವಾಮಿ ಹೇಳಿದರು.
"ನಾನು ಸಚಿವಸ್ಥಾನವನ್ನೂ ಬಿಟ್ಟುಕೊಡುವುದಿಲ್ಲ, ಶಾಸಕ ಸ್ಥಾನಕ್ಕೂ ರಾಜೀನಾಮೆಯನ್ನೂ ನೀಡುವುದಿಲ್ಲ. ನಮ್ಮ ವರಿಷ್ಠರು ಅಂತಹ ಯಾವುದೇ ಪ್ರಸ್ತಾವನೆಯನ್ನು ಹೊಂದಿಲ್ಲ" ಎಂದು ಸಚಿವರು, ಸ್ಪಷ್ಟ ಪಡಿಸಿದರು.
"ಪಕ್ಷ ಬಯಸಿದ್ದಲ್ಲಿ, ಸಚಿವ ಸ್ಥಾನ ತ್ಯಾಗ ಮಾಡಲು ನಾನು ಸಿದ್ದ" ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದ್ದಾರೆ. "ಸಂಪುಟ ವಿಸ್ತರಣೆಯ ವಿಚಾರದಲ್ಲಿ, ಪಕ್ಷ ಯಾವ ನಿರ್ದೇಶನ ಕೊಟ್ಟರೂ, ನಾನು ಅದನ್ನು ಪಾಲಿಸುತ್ತೇನೆ" ಎಂದು ಮಾಧುಸ್ವಾಮಿ ಹೇಳಿದ್ದರು.
ಅಲ್ಲದೇ, "ರಾಜ್ಯಕ್ಕೆ ಒಂದು ಸುಭದ್ರ ಸರಕಾರವನ್ನು ನೀಡಿ, ಉತ್ತಮ ಆಡಳಿತ ನೀಡುವುದು ನಮ್ಮ ಪಕ್ಷದ ಗುರಿ. ಇದಕ್ಕಾಗಿ, ನನ್ನಿಂದ ಏನಾದರೂ ತ್ಯಾಗ ಆಗಬೇಕಿದ್ದರೆ. ಅದಕ್ಕೆ ನಾನು ಯಾವುದೇ ಮುಲಾಜಿಲ್ಲದೆ ಒಪ್ಪಿಕೊಳ್ಳಲು ಸಿದ್ದನಿದ್ದೇನೆ" ಎಂದು ಮಾಧುಸ್ವಾಮಿ ಹೇಳಿದ್ದರು.