ಉಪ ಚುನಾವಣೆ ನಂತರ ನಾನು ಸಚಿವನಾಗುತ್ತೇನೆ: ಎಂಟಿಬಿ ನಾಗರಾಜ್
ತುಮಕೂರು, ಅಕ್ಟೋಬರ್ 27: ಶಿರಾ ಹಾಗೂ ರಾಜರಾಜೇಶ್ವರಿ ನಗರ ಉಪ ಚುನಾವಣೆ ನಂತರ ಸಚಿವ ಸಂಪುಟ ವಿಸ್ತರಣೆಯಾಗಲಿದ್ದು, ನನಗೂ ಸಚಿವ ಸ್ಥಾನ ಸಿಗುವ ವಿಶ್ವಾಸವಿದೆ ಎಂದು ವಿಧಾನ ಪರಿಷತ್ ಸದಸ್ಯ ಎಂಟಿಬಿ ನಾಗರಾಜ್ ತಿಳಿಸಿದರು.
ತುಮಕೂರು ಜಿಲ್ಲೆಯ ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ ಪರ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡಿದ ಎಂಟಿಬಿ ನಾಗರಾಜ್, ಈ ಉಪ ಚುನಾವಣೆಯ ನಂತರ ಸಚಿವ ಸಂಪುಟ ವಿಸ್ತರಣೆಯಾಗಲಿದೆ. ನನಗೆ ಸಚಿವ ಸ್ಥಾನ ನೀಡುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಭರವಸೆ ಕೊಟ್ಟಿದ್ದಾರೆ ಎಂದರು.
ಕಾಂಗ್ರೆಸ್ಸಿನ ಸಿಎಂ ಅಭ್ಯರ್ಥಿ ಯಾರು: ಡಿಕೆಶಿ ವಿರುದ್ದ ಮುನಿರತ್ನ ಸಿಡಿಸಿದ ಹೊಸ ಬಾಂಬ್
ಸಿಎಂ ಯಡಿಯೂರಪ್ಪನವರು ಕೊಟ್ಟ ಭರವಸೆಯನ್ನು ಈಡೇರಿಸುವ ನಾಯಕರು. ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಬಂದವರು ಮಂತ್ರಿಯಾಗೇ ಆಗುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಸಿಎಂ ಬದಲಾವಣೆ ಮಾಡಲು ಮುಖ್ಯಮಂತ್ರಿಗಳ ಕುರ್ಚಿ ಖಾಲಿಯಿಲ್ಲ. ಆ ಕುರ್ಚಿಯ ಮೇಲೆ ಯಡಿಯೂರಪ್ಪನವರು ಕುಳಿತಿದ್ದಾರೆ. ಈ ಸಂದರ್ಭದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಯಡಿಯೂರಪ್ಪನವರೇ ಪೂರ್ಣಾವಧಿ ಮುಖ್ಯಮಂತ್ರಿಯಾಗಿರುತ್ತಾರೆ ಎಂದು ಹೇಳಿದ ಎಂಟಿಬಿ ನಾಗರಾಜ್, ಶಿರಾದಲ್ಲಿ 23 ಸಾವಿರ ಕುರುಬ ಸಮುದಾಯದ ಮತಗಳಿದ್ದು, ಎಲ್ಲ ಮತಗಳು ಬಿಜೆಪಿಗೆ ಬರಲಿವೆ. ಕಾಂಗ್ರೆಸ್, ಜೆಡಿಎಸ್ ಪಕ್ಷದಿಂದ ಎಲ್ಲರೂ ಶಾಸಕರಾಗಿದ್ದಾರೆ. ಬಿಜೆಪಿ ಮಾತ್ರ ಇನ್ನು ಖಾತೆ ತೆರೆದಿಲ್ಲ. ಹಾಗಾಗಿ ಕುರುಬರು ಬಿಜೆಪಿಗೆ ಮತ ಹಾಕುತ್ತಾರೆ ಎಂದರು.
ಸಿದ್ದರಾಮಯ್ಯನವರು ಬಂದು ಪ್ರಚಾರ ನಡೆಸಿರಬಹುದು, ಈಗಾಗಲೇ ಅವರು ಮುಖ್ಯಮಂತ್ರಿಯಾಗಿದ್ದವರು. ಅವರಿಗೆ ಈಗಾಗಲೇ ಒಂದು ಅವಕಾಶ ಸಿಕ್ಕಿದೆ. ಬೇರೆಯವರಿಗೆ ಅವಕಾಶ ಸಿಗಬೇಕಲ್ವ? 2ನೇ ಹಂತದ ನಾಯಕರನ್ನು ಬೆಳೆಸಬೇಕು. ನಾನು ಬೆಳೆಯಬೇಕು.
ಜೊತೆಗೆಯಲ್ಲಿದ್ದವರು ಬೆಳೆಯಬೇಕು ಎಂದು ಹೇಳಿದರು.
ನನಗೆ ಮುಖ್ಯಮಂತ್ರಿಯಾಗುವ ಕನಸಿಲ್ಲ. ಪ್ರಜಾ ಸೇವೆ ಮಾಡಬೇಕೆಂಬ ಇಚ್ಛಾಶಕ್ತಿಯಿಂದ ರಾಜಕೀಯಕ್ಕೆ ಬಂದಿದ್ದೇನೆ. ಅದನ್ನು ಮಾಡುತ್ತೇನೆ ಎಂದು ಎಂಟಿಬಿ ಹೇಳಿದರು.
ಸಿದ್ದರಾಮಯ್ಯನವರ ಮಾತನ್ನು ಈಗಾಗಲೇ ಕುರುಬರು 25 ವರ್ಷದಿಂದ ಕೇಳಿದ್ದಾರೆ. ಅವರು ಡಿಸಿಎಂ, ಸಿಎಂ ಎಲ್ಲವೂ ಆಗಿದ್ದಾರೆ. ಈಗ ನಮ್ಮಂತವರು ಬೆಳೆಯಬೇಕು. ಸಿದ್ದರಾಮಯ್ಯನವರು ನಮಗೆ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿದರು.