ಶಿರಾ ಎಲೆಕ್ಷನ್; ನಾನು ಬಿಜೆಪಿ ಟಿಕೆಟ್ ಆಕಾಂಕ್ಷಿ ಎಂದ ಶ್ರೀನಿವಾಸ್
ತುಮಕೂರು, ಸೆಪ್ಟೆಂಬರ್ 9: ಶಾಸಕ ಬಿ. ಸತ್ಯನಾರಾಯಣ ಅವರ ನಿಧನದ ನಂತರ ತೆರವಾದ ಸ್ಥಾನಕ್ಕೆ, ಶಿರಾ ವಿಧಾನಸಭಾ ಚುನಾವಣೆಯಲ್ಲಿ ನಾನು ಕೂಡ ಬಿಜೆಪಿ ಟಿಕೆಟ್ ಆಕಾಂಕ್ಷಿ ಎಂದು ಹೇಳಿದ್ದಾರೆ ರಾಜ್ಯ ಗೊಲ್ಲ ಸಂಘದ ರಾಜ್ಯಾಧ್ಯಕ್ಷ ಹಾಗೂ ಹಿರಿಯೂರು ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್ ಅವರ ಪತಿ ಡಿ.ಟಿ. ಶ್ರೀನಿವಾಸ್.
Recommended Video
ಶಿರಾ ತಾಲೂಕಿನ ಮುದ್ದೇನಹಳ್ಳಿ ಗ್ರಾಮದ ತಮ್ಮ ಕುಲದೈವ ಚಿತ್ರಲಿಂಗೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿ, ಟಿಕೆಟ್ ಘೋಷಣೆಗೂ ಮುನ್ನವೇ ಅಧಿಕೃತವಾಗಿ ಚುನಾವಣಾ ಪ್ರಚಾರಕ್ಕೆ ಧುಮುಕಿದರು. ನಂತರ ಮಾತನಾಡಿದ ಅವರು, ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಲು ನಾನು ತಯಾರಿದ್ದು, ಎಲ್ಲ ಸಿದ್ಧತೆ ನಡೆಸಲಾಗಿದೆ ಎಂದರು.
ಹಿರಿಯೂರಿನಲ್ಲಿ ಈರುಳ್ಳಿ ಖರೀದಿ ಕೇಂದ್ರ ಆರಂಭಕ್ಕೆ ಡಿಸಿಎಂಗೆ ಮನವಿ
ಲೋಕಸಭಾ ಚುನಾವಣೆ ಮುನ್ನ ತುಮಕೂರಿನಲ್ಲಿ ನಮ್ಮ ಸಮಾಜದ ವತಿಯಿಂದ ಸಮಾವೇಶ ಮಾಡಿದ್ದೆ. ಅದರಲ್ಲಿ ಸಿಎಂ ಬಿಎಸ್ವೈ, ಬಸವರಾಜ್ ಭಾಗವಹಿಸಿದ್ದರು. ಅಂದು ಬಸವರಾಜ ಅವರಿಗೆ ನಮ್ಮ ಸಮಾಜ ಆಶೀರ್ವಾದ ಮಾಡಿ ಕೈಹಿಡಿದಿದೆ. ಹಾಗಾಗಿ ಅವರು ಸಂಸದರಾಗಿ ಆಯ್ಕೆಯಾಗಿದ್ದಾರೆ. ಹಿರಿಯೂರಿನಲ್ಲಿ ಶಾಸಕಿ ಪೂರ್ಣಿಮಾ ಗೆಲುವಿಗೆ ನಾನು ಕಾರಣೀಭೂತನಾಗಿದ್ದೇನೆ. ಅವರ ಗೆಲುವಿನ ನಂತರ ನನಗೆ ಎಂಎಲ್ಸಿ ಆಗಲು ಅವಕಾಶ ಕೊಡಿ ಅಂತ ಕೇಳಿದ್ದೆ. ಆದರೆ ಶಿರಾ ಕ್ಷೇತ್ರದ ಕುಂಚಟಿಗ ಸಮಾಜದ ಚಿದಾನಂದ ಗೌಡ ಅವರಿಗೆ ಬಿಜೆಪಿಯಿಂದ ಎಂಎಲ್ ಸಿ ಟಿಕೆಟ್ ನೀಡಿದೆ. ಹಿಂದುಳಿದ ವರ್ಗಗಳಿಗೆ ಶಕ್ತಿ ತುಂಬುವ ನಿಟ್ಟಿನಲ್ಲಿ ಶಿರಾ ಉಪ ಚುನಾವಣೆಯಲ್ಲಿ ನನಗೆ ಅವಕಾಶ ಮಾಡಿಕೊಟ್ಟರೆ ಹಿರಿಯೂರಿನಲ್ಲಿ ಬಿಜೆಪಿ ಬಾವುಟ ಹಾರಿಸಿದಂತೆ ಶಿರಾದಲ್ಲೂ ಗೆಲುವಿನ ಬಾವುಟ ಹಾರಿಸುತ್ತೇನೆ ಎಂದರು.
ಅಹಿಂದ ವರ್ಗದ ಅಭ್ಯರ್ಥಿ ಬೇಕು ಎಂಬುದು ಇಲ್ಲಿನ ಜನತೆ ಮಹದಾಸೆ. ಅವರ ಆಸೆ ಸಫಲಗೊಳ್ಳಬೇಕಾದರೆ ನನಗೆ ಟಿಕೆಟ್ ಘೋಷಣೆಯಾಗಬೇಕು. ಸಿಎಂ ಅವಕಾಶ ನೀಡುತ್ತಾರೆನ್ನುವ ನಂಬಿಕೆ ಇದೆ. ನಮ್ಮ ಮಾವ, ದಿ. ಕೃಷ್ಣಪ್ಪನವರ ಕೆಲಸ ಹಾಗೂ ನನ್ನ ಕ್ಷೇತ್ರದ ಜನರೊಂದಿಗೆ ನನ್ನ ಪತ್ನಿ ಪೂರ್ಣಿಮಾ ಅವರ ಒಡನಾಟ ಈ ಚುನಾವಣೆಯಲ್ಲಿ ಪ್ಲಸ್ ಪಾಯಿಂಟ್ ಆಗಲಿದೆ ಎಂದು ಹೇಳಿದರು.