ದೇವೇಗೌಡರ ದೋಸ್ತಿಗಾಗಿ ಮುದ್ದಹನುಮೇಗೌಡರನ್ನೇ ಕಚಕ್ ಮಾಡಿದರೆ ಪರಂ!
Recommended Video
ತುಮಕೂರು ಲೋಕಸಭಾ ಕ್ಷೇತ್ರವನ್ನು ದೇವೇಗೌಡರಿಗೆ ಬಿಟ್ಟು ಕೊಟ್ಟಾಗ, ಅಯ್ಯೋ ಪರಮೇಶ್ವರ್ ಗೆ ಹಾಗೂ ಅವರನ್ನು ನಂಬಿದ್ದ ಸಂಸದ ಮುದ್ದಹನುಮೇಗೌಡರಿಗೆ ಅನ್ಯಾಯ ಆಯಿತಲ್ಲಾ ಎಂದು ಅನುಕಂಪ ತೋರಿಸಿದವರೇ ಹೆಚ್ಚು. ಆದರೆ ಸೋಮವಾರದಂದು ಮಧುಗಿರಿಯಲ್ಲಿ ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರು ಪರಂ ಮೇಲೆ ನಡೆಸಿದ ವಾಗ್ದಾಳಿ ಹಾಗೂ ಈ ಹಿಂದಿನ ಘಟನೆಗಳು ಬೇರೆಯದನ್ನೇ ಧ್ವನಿಸುತ್ತಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಈ ಧ್ವನಿ ಅರ್ಥ ಆಗಬೇಕು ಅಂದರೆ ಹಲವು ವಿಚಾರಗಳನ್ನು ಒಂದು ಫ್ರೇಮಿನೊಳಗೆ ತಂದು ನಿಮ್ಮೆದುರು ಇಡಬೇಕು. ಈ ಬಾರಿ ಹಾಸನದಿಂದ ಪ್ರಜ್ವಲ್ ರೇವಣ್ಣ ಸ್ಪರ್ಧೆ ಮಾಡೋದು, ಮಂಡ್ಯದಿಂದ ನಿಖಿಲ್ ಕುಮಾರಸ್ವಾಮಿ ಕಣಕ್ಕೆ ಇಳಿಯುತ್ತಾರೆ ಅಂತಾದ ಮೇಲೆ ದೇವೇಗೌಡರು ಎಲ್ಲಿಂದ ಕಣಕ್ಕೆ ಇಳಿಯಬೇಕು ಪ್ರಶ್ನೆ ಇತ್ತು.
ತುಮಕೂರಿನಲ್ಲಿ ಇನ್ನೂ ಆರಿಲ್ಲ ದೇವೇಗೌಡರ ಮೇಲಿನ ಅಸಮಾಧಾನ?
ಆಗ ಹೊಳೆದ ಸೇಫೆಸ್ಟ್ ಕ್ಷೇತ್ರ ಅಂದರೆ ಮೈಸೂರು-ಕೊಡಗು. ಆದರೆ ಅಲ್ಲಿಗೆ ದೇವೇಗೌಡರ ಎಂಟ್ರಿ ಆಗಿಬಿಟ್ಟರೆ ಸಿದ್ದರಾಮಯ್ಯ ಪೂರ್ತಿಯಾಗಿ ಅಸ್ತಿತ್ವ ಕಳೆದುಕೊಂಡು ಬಿಡ್ತಾರೆ ಅನ್ನೋದು ಗೊತ್ತಿದ್ದರಿಂದಲೇ ಹೇಗೋ ಶ್ರಮ ಪಟ್ಟು ಸಿದ್ದು ಮೈಸೂರನ್ನು ಉಳಿಸಿಕೊಂಡರು. ಈ ಹಂತದಲ್ಲಿ ತಾವಾಗಿಯೇ ದೇವೇಗೌಡರನ್ನು ತುಮಕೂರಿಗೆ ಆಹ್ವಾನ ನೀಡಿದವರು ಇದೇ ಪರಮೇಶ್ವರ್.
ತುಮಕೂರು ದೇವೇಗೌಡರಿಗೆ ಸೇಫ್ ಕ್ಷೇತ್ರ
ಈ ಮಾತನ್ನು ಸ್ವತಃ ದೇವೇಗೌಡರು ಸಹ ಹೇಳಿದ್ದಾರೆ. ಜೆಡಿಎಸ್ ಪಾಲಿಗೆ ಇದ್ದುದರಲ್ಲಿ ಸೇಫ್ ಕ್ಷೇತ್ರ ತುಮಕೂರು. ಜತೆಗೆ ಹಾಲಿ ಕಾಂಗ್ರೆಸ್ ಸಂಸದರಿದ್ದಾರೆ. ಜೆಡಿಎಸ್ ಗೆ ನೆಲೆ ಇದೆ ಎಂಬ ಕಾರಣಕ್ಕೆ ದೊಡ್ಡ ಗೌಡರೂ ಒಪ್ಪಿದ್ದಾರೆ. ಆದರೆ ಪ್ರಶ್ನೆ ಬರುವುದು ಏನೆಂದರೆ, ತಮ್ಮ ಆಪ್ತ ಮುದ್ದಹನುಮೇಗೌಡರಿಗೆ ಟಿಕೆಟ್ ತಪ್ಪಿಸಿ, ದೇವೇಗೌಡರಿಗೆ ಪರಂ ಮಣೆ ಹಾಕಿದ್ದು ಏಕೆ?
ಸಿದ್ದುವನ್ನು ಹದ ಹೊಡೆಯಲು ಹೀಗೊಂದು ಅಸ್ತ್ರ
ಏಕೆಂದರೆ, ಪರಮೇಶ್ವರ್ ಪರವಾಗಿ ಎಲ್ಲಿ ಅಗತ್ಯವೋ ಅಲ್ಲೆಲ್ಲ ಬ್ಯಾಟ್ ಬೀಸಿದ್ದಾರೆ ಮುದ್ದಹನುಮೇಗೌಡ. ಜತೆಗೆ ದೇವೇಗೌಡರಿಗೆ ಪರಂ ಆಪ್ತರಾಗಿದ್ದು ಸಹ ಇದೇ ಮುದ್ದಹನುಮೇಗೌಡರ ಮೂಲಕ. ಇಷ್ಟಾದರೂ ದೇವೇಗೌಡರ ಬಳಿ ತಾನು ಇನ್ನಷ್ಟು ಆಪ್ತ ಎನಿಸಿಕೊಂಡು ಸಿದ್ದುವನ್ನು ಹದ ಹೊಡೆಯಲು ತುಮಕೂರು ಕ್ಷೇತ್ರವನ್ನು ಹರಿವಾಣದಲ್ಲಿ ಇಟ್ಟು ಗೌಡರಿಗೆ ಕಾಣಿಕೆಯಾಗಿ ನೀಡಿದ್ದಾರೆ ಪರಂ ಎನ್ನುತ್ತಿವೆ ಪಕ್ಷದ ಆಂತರಿಕ ಮೂಲಗಳು.
ಮುಲಾಜಿಲ್ಲದೆ ಬಲಿ ನೀಡಿದ್ದಾರೆ
ಆದರೆ, ಕೆ.ಎನ್.ರಾಜಣ್ಣ ಆರಂಭದಿಂದಲೂ ಸಿದ್ದು ಗುಂಪಿನಲ್ಲಿ ಗುರುತಿಸಿಕೊಂಡವರು. ಯಾಕೆ ಬೇಕು ಪಕ್ಷ ವಿರೋಧಿ ಎಂಬ ಪಟ್ಟ ಎಂಬ ಕಾರಣಕ್ಕೆ ಲೋಕಸಭೆ ಚುನಾವಣೆಗೆ ಹಾಕಿದ್ದ ನಾಮಪತ್ರ ಹಿಂಪಡೆದರು. ಆದರೆ ಮುದ್ದಹನುಮೇಗೌಡರನ್ನು ಒಪ್ಪಿಸಿರುವುದು ಮಾತ್ರ ಡಿಸಿಎಂ ಪರಮೇಶ್ವರ್. ದೇವೇಗೌಡರ ಓಲೈಕೆಗಾಗಿಯೇ ಹೀಗೆ ಕಾಂಗ್ರೆಸ್- ಮುದ್ದಹನುಮೇಗೌಡರನ್ನು ಕಚಕ್ ಎಂದು ಮುಲಾಜಿಲ್ಲದೆ ಬಲಿ ನೀಡಿದ್ದಾರೆ ಎನ್ನುತ್ತಾರೆ ಕೈ ಕಾರ್ಯಕರ್ತರು.
ಅವಕಾಶ ಸಿಕ್ಕರೆ ತಪ್ಪಬಾರದು
ಲೋಕಸಭೆ ಚುನಾವಣೆ ನಂತರ ರಾಜ್ಯದಲ್ಲಿ ಆಟ ಬದಲಾಗಿ ಕಾಂಗ್ರೆಸ್ ಗೆ ಮುಖ್ಯಮಂತ್ರಿ ಪಟ್ಟ ಒಲಿಯುವ ಸ್ಥಿತಿ ಬಂದರೆ, ಆಗ ದೇವೇಗೌಡರು ಹೇಳಿದ ವ್ಯಕ್ತಿಯೇ ಮುಖ್ಯಮಂತ್ರಿ ಆಗುವಂತಾದರೆ ತಮಗೇ ಅವಕಾಶ ಸಿಗಬೇಕು. ಹೇಗಿದ್ದರೂ ಸಿದ್ದು ಮತ್ತವರ ಪಟಾಲಂ ಬಗ್ಗೆ ದೇವೇಗೌಡರು, ಕುಮಾರಸ್ವಾಮಿಗೆ ಅಸಮಾಧಾನ ಇದೆ. ಇನ್ನು ಹುದ್ದೆಯ ರೇಸಿನಲ್ಲಿ ಮಲ್ಲಿಕಾರ್ಜುನ ಖರ್ಗೆಯವರನ್ನು ತಂದರೆ ಗೌಡರ ಹಿಡಿತದಲ್ಲಿ ಇರುವುದಿಲ್ಲ. ಆದ್ದರಿಂದ ಈಗಲೇ ಪರಮೇಶ್ವರ್ ಅಖಾಡ ಸಿದ್ಧಪಡಿಸಿಕೊಂಡಿದ್ದಾರೆ ಎಂಬ ಮಾತು ಚಾಲ್ತಿಯಲ್ಲಿದೆ.