ನೆತ್ತಿ ಮೇಲೆ ಸೂರು ಸಿಗುವವರೆಗೂ ನಿಲ್ಲೋದಿಲ್ಲ ಹೋರಾಟ!
ತುಮಕೂರು, ಡಿಸೆಂಬರ್.05: ನೆತ್ತಿಯ ಮೇಲೊಂದು ಸೂರು ಕಲ್ಪಿಸಿ ಎಂದು ಹೋರಾಟ ನಡೆಸುತ್ತಿರುವ ಗ್ರಾಮಸ್ಥರಿಗೆ ಇಂದಿಗೂ ನ್ಯಾಯ ಸಿಕ್ಕಿಲ್ಲ. ಬಾರಿ ಬಾರಿ ಸರ್ಕಾರಿ ಕಚೇರಿಗಳಿಗೆ ಅಲೆದರೂ ಅಧಿಕಾರಿಗಳು ತಲೆ ಕೆಡಿಸಿಕೊಳ್ಳುತ್ತಿಲ್ಲ. ಇದರಿಂದ ನೊಂದ ಗ್ರಾಮದ ಕೆಲವು ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿ ಎದುರಿನಲ್ಲಿ ಪ್ರತಿಭಟನೆಗೆ ಕುಳಿತಿದ್ದಾರೆ.
ಒಂದೆಡೆ ರಾಜ್ಯದಲ್ಲಿ 15 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಇನ್ನೊಂದೆಡೆ ತುಮಕೂರು ಜಿಲ್ಲಾಧಿಕಾರಿ ಕಚೇರಿ ಎದುರಿನಲ್ಲಿ ಜಿಲ್ಲೆಯ ಬ್ಯಾಲ್ಯಾ ಎಂಬ ಗ್ರಾಮದ ಗ್ರಾಮಸ್ಥರು ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ.
ತುಮಕೂರು-ದಾವಣಗೆರೆ ರೈಲು ಮಾರ್ಗ ವಿಳಂಬ
ಹೌದು, ಬ್ಯಾಲ್ಯಾ ಗ್ರಾಮದಲ್ಲೇ ಭೂಮಿ ನೀಡುವ ಬಗ್ಗೆ ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದರು. ಆದರೆ, ಸರ್ಕಾರ ಗ್ರಾಮದಿಂದ 3 ಕಿಲೋ ಮೀಟರ್ ದೂರದಲ್ಲಿ ಭೂಮಿಯನ್ನು ಗುರುತಿಸಿದೆ. ಈಗ ಅಲ್ಲಿಗೆ ಹೋಗಬೇಕೇ ಬೇಡವೇ ಎಂಬ ಬಗ್ಗೆ ಗ್ರಾಮಸ್ಥರು ಯೋಚಿಸುತ್ತಿದ್ದಾರೆ.
ಸರ್ಕಾರ ಗುರುತಿಸಿರುವ ಭೂಮಿಗೆ ಹೋಗುವ ಬಗ್ಗೆ ಭೂಮಿ ಮತ್ತು ವಸತಿ ಹಕ್ಕು ವಂಚಿತ ಹೋರಾಟ ಸಮಿತಿ ಮುಖಂಡರು ಡಿಸೆಂಬರ್.04ರಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಸ್.ಎಸ್.ದೊರೆಸ್ವಾಮಿಯವರನ್ನು ಭೇಟಿ ಮಾಡಿದರು. ಬೆಂಗಳೂರಿನಲ್ಲಿ ಈ ಬಗ್ಗೆ ಹಿರಿಯ ಹೋರಾಟಗಾರರ ಜೊತೆ ಸಮಿತಿ ಸದಸ್ಯರು ಚರ್ಚೆ ನಡೆಸಿದರು.
ಹಿರಿಯ ಸ್ವಾತಂತ್ರ ಹೋರಾಟಗಾರ ದೊರೆಸ್ವಾಮಿಯವರು ತಮಗೆ ಎದೆಗುಂದದಂತೆ ಸಲಹೆ ನೀಡಿದ್ದಾರೆ. ಆಡಳಿತ ಅಧಿಕಾರಿಗಳು ಜನರ ಅಭಿಪ್ರಾಯಗಳನ್ನು ಅರಿತು ಕ್ರಮ ತೆಗೆದುಕೊಳ್ಳಬೇಕು. ನೀವು ಪ್ರತಿಭಟನೆಯನ್ನು ಮುಂದವರಿಸಿ, ಉಪ ಚುನಾವಣೆ ಬಳಿಕ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳನ್ನು ಭೇಟಿ ಮಾಡೋಣ ಅಂತಾ ಸಲಹೆ ನೀಡಿರುವುದಾಗಿ ಸಮಿತಿ ಸದಸ್ಯ ಹಂದ್ರಾಳ್ ನಾಗಭೂಷಣ್ ತಿಳಿಸಿದ್ದಾರೆ.
ಈ ವೇಳೆ ರಾಜ್ಯ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಪದಾಧಿಕಾರಿಗಳಾದ ಸಿರಿಮನೆ ನಾಗರಾಜು, ಮರಿಯಪ್ಪ, ಕೆಆರ್ಎಸ್ ಪಕ್ಷದ ಮಲ್ಲಿಕಾರ್ಜುನ್ ಭಟ್ಟರಹಳ್ಳಿ, ತಿಮ್ಮಣ್ಣ, ಮಲ್ಲಿಕಾರ್ಜುನ್, ಹೋರಾಟಗಾರರಾದ ಜೆಸಿಬಿ ವೆಂಕಟೇಶ್, ಭರತ್ ಕುಮಾರ್ ಬೆಲ್ಲದಮಡು, ಯೋಗೀಶ್ ಮೆಳೆಕಲ್ಲಹಳ್ಳಿ, ಹಂದ್ರಾಳ್ ನಾಗಭೂಷಣ್, ಜಯಮ್ಮ,ಲಲಿತ, ರತ್ನಮ್ಮ ಉಪಸ್ಥಿತರಿದ್ದರು.