Breaking: ತುಮಕೂರು: ಕಾಲುವೆಯಲ್ಲಿ ಕೊಚ್ಚಿ ಹೋದ ವ್ಯಕ್ತಿ ಕುಟುಂಬಕ್ಕೆ ಪರಿಹಾರ
ತುಮಕೂರು, ಜುಲೈ 18: ಕಳೆದ ಮೂರು ದಿನಗಳ ಹಿಂದೆ ತುಮಕೂರು ನಗರದಲ್ಲಿ ಸುರಿದ ಭಾರಿ ಮಳೆಯ ಕಾರಣದಿಂದ ನೀರಿನಲ್ಲಿ ಕೊಚ್ಚಿ ಹೋಗಿದ್ದ ಅಮ್ಜದ್ ಖಾನ್ (42) ಎಂಬುವರ ಕುಟುಂಬಕ್ಕೆ ಗೃಹ ಸಚಿವ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಆರಗ ಜ್ಞಾನೇಂದ್ರ ಪರಿಹಾರ ಘೋಷಿಸಿದ್ದಾರೆ.
ಘಟನೆಯ ಬಗ್ಗೆ ವಿಷಾದ ವ್ಯಕ್ತಡಿಸಿರುವ ಗೃಹ ಸಚಿವರು, ಮೃತರ ಕುಟುಂಬಕ್ಕೆ ಐದು ಲಕ್ಷ ರೂಪಾಯಿಗಳ ಪರಿಹಾರ ನಿಧಿ ಬಿಡುಗಡೆ ಮಾಡಲು ನಿರ್ದೇಶಿಸಿದ್ದಾರೆ.
ರಾಜ್ಯದಲ್ಲಿ ಭಾರಿ ಮಳೆಯಿಂದಾಗಿ ಹಲವು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದೆ ರೀತಿ ಮೂರು ದಿನಗಳ ಹಿಂದೆ ತುಮಕುರಿನಲ್ಲಿ ಬಾರಿ ಮಳೆ ಸುರಿಯುತ್ತಿದ್ದ ಸಂದರ್ಭದಲ್ಲಿ ರಾಜಾ ಕಾಲುವೆಯ ಬಳಿ ಫೋಟೋ ತೆಗೆಯಲು ಹೋಗಿ ಆಟೋ ಚಾಲಕ ಅಮ್ಜದ್ ಖಾನ್ ಆಕಸ್ಮಿಕವಾಗಿ ರಾಜ ಕಾಲುವೆಗೆ ಬಿದ್ದು, ಕೊಚ್ಚಿಕೊಂಡು ಹೋಗಿದ್ದರು. ಭಾನುವಾರದಂದು ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾದ ಆರಗ ಜ್ಞಾನೇಂದ್ರ, ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಸ್ಥಳೀಯ ಶಾಸಕ ಜ್ಯೋತಿ ಗಣೇಶ್ ಸ್ಥಳಕ್ಕೆ ಭೇಟಿ ನೀಡಿ, ರಕ್ಷಣಾ ಕಾರ್ಯದ ಪರಿಶೀಲನೆ ನಡೆಸಿದ್ದರು.
ಮೂರು ದಿನಗಳ ಸತತ ಪ್ರಯತ್ನದ ನಂತರ, ಮೃತ ಅಮ್ಜದ್ ಖಾನ್ ಮೃತ ದೇಹ ಪತ್ತೆಯಾಗಿದೆ. ರಕ್ಷಣ ಕಾರ್ಯದಲ್ಲಿ ತೊಡಗಿಸಿ ಕೊಂಡಿದ್ದ ರಾಜ್ಯ, ರಾಷ್ಟ್ರೀಯ ವಿಪತ್ತು ದಳ, ಪೊಲೀಸ್ ಮತ್ತು ಅಗ್ನಶಾಮಕದಳದ ಸಿಬ್ಬಂದಿಗೆ ಸಚಿವರು, ಜಿಲ್ಲಾಧಿಕಾರಿ ವೈ. ಎಸ್. ಪಾಟೀಲ್ ಹಾಗೂ ಜಿಲ್ಲಾ ಪೊಲೀಸ್ ಮುಖ್ಯಸ್ಥ ರಾಹುಲ್ ಕುಮಾರ್ ಧನ್ಯವಾದ ತಿಳಿಸಿದ್ದಾರೆ.
ರಾಜ್ಯ ವಿಪತ್ತು ಪರಿಹಾರ ಪಡೆಯ ಸುಮಾರು 20 ಮಂದಿ ಸಿಬ್ಬಂದಿ ಕಾಲುವೆಯಲ್ಲಿ ಕೊಚ್ಚಿಕೊಂಡು ಹೋಗಿದ್ದ ವ್ಯಕ್ತಿಯ ಹುಡುಕಾಟದಲ್ಲಿ ತೊಡಗಿಸಿಕೊಂಡಿದ್ದರು.