ದೇವೇಗೌಡರದು ರಾಕ್ಷಸ ಕುಟುಂಬ ಎಂದು ಹೊಗಳಿದ ಸಚಿವ ಎಸ್.ಆರ್.ಶ್ರೀನಿವಾಸ್
Recommended Video
ತುಮಕೂರು, ಮಾರ್ಚ್ 21: ಮಾಜಿ ಪ್ರಧಾನಿ ದೇವೇಗೌಡರದು ರಾಕ್ಷಸ ಕುಟುಂಬ. ಅವರು ಯಾವುದಕ್ಕೂ ಹೆದರುವುದಿಲ್ಲ. ಗೆಲ್ಲಲಿ, ಸೋಲಲಿ ಹೋರಾಟ ಮಾಡುತ್ತಾರೆ ಎಂದು ಹೇಳುವ ಮೂಲಕ ಗುಬ್ಬಿ ಶಾಸಕ- ಸಚಿವ ಎಸ್.ಆರ್.ಶ್ರೀನಿವಾಸ್ ಗುರುವಾರ ಹೊಗಳಿದ್ದಾರೆ. ಆ ಮೂಲಕ ತಮ್ಮ ವಿಲಕ್ಷಣ ಹೇಳಿಕೆಗಳಿಗೆ ಇನ್ನೊಂದು ಸೇರ್ಪಡೆ ಮಾಡಿಕೊಂಡಿದ್ದಾರೆ.
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಕ್ಕೆ ಹೆದರಿಕೊಂಡು ದೇವೇಗೌಡರು ತುಮಕೂರಿಗೆ ಬರುತ್ತಿದ್ದಾರೆ ಎಂಬ ಬಿಜೆಪಿ ಆರೋಪಕ್ಕೆ ಎಸ್.ಆರ್. ಶ್ರೀನಿವಾಸ್ ಹೀಗೆ ಉತ್ತರಿಸಿದ್ದಾರೆ. ಮಾರ್ಚ್ ಇಪ್ಪತ್ನಾಲ್ಕು- ಇಪ್ಪತ್ತೈದನೇ ತಾರೀಕು ಕಾಂಗ್ರೆಸ್-ಜೆಡಿಎಸ್ ನಾಯಕರ ಸಭೆ ನಡೆಯಲಿದೆ. ಆ ದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಕೂಡ ಅವರು ಹೇಳಿದ್ದಾರೆ.
ಹೊಗಳುವ ಭರದಲ್ಲಿ ದೇವೇಗೌಡರನ್ನು ಹುಚ್ಚುನಾಯಿಗೆ ಹೋಲಿಸಿದ ಗುಬ್ಬಿ ಶಾಸಕ
ಎಸ್.ಆರ್. ಶ್ರೀನಿವಾಸ್ ಅವರು ದೇವೇಗೌಡರನ್ನು ಹೊಗಳುವ ಭರದಲ್ಲಿ ಈ ರೀತಿ ವಿಚಿತ್ರ ಹೇಳಿಕೆ ನೀಡುತ್ತಿರುವುದು ಇದೇ ಮೊದಲಲ್ಲ. 2017ರ ಡಿಸೆಂಬರ್ ನಲ್ಲಿ ತುಮಕೂರು ಜಿಲ್ಲೆಯ ಕೊರಟಗೆರೆಯಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತ, ನಮ್ಮ ಹಿಂದಿನ ಪ್ರಧಾನಮಂತ್ರಿಗಳು ಆರಾಮವಾಗಿ ಮನೆಯಲ್ಲಿದ್ದು, ಎಲ್ಲ ಸೌಕರ್ಯ ಅನುಭವಿಸುತ್ತಿದ್ದಾರೆ. ಸರಕಾರ ಎಲ್ಲ ಸೌಲಭ್ಯ ಒದಗಿಸಿ ಬಿಳಿಯಾನೆಯ ಹಾಗೆ ಸಾಕುತ್ತಿದೆ.
ಆದರೆ, ಈ ಮನುಷ್ಯ (ಎಚ್.ಡಿ.ದೇವೇಗೌಡ) ಹುಚ್ಚು ನಾಯಿ ಸುತ್ತಿದ ಹಾಗೆ ಇಡೀ ರಾಜ್ಯದಲ್ಲಿ ಸುತ್ತಾಡುತ್ತಿದ್ದಾರಲ್ರೀ ಎಂದಿದ್ದರು ಎಸ್.ಆರ್.ಶ್ರೀನಿವಾಸ್. ಸ್ವತಃ ದೇವೇಗೌಡರ ಸಮ್ಮುಖದಲ್ಲೇ ಆ ಮಾತು ಆಡಿದ್ದರು. ಆಗಿನ ಅನುಭವದ ಆಧಾರದಲ್ಲಿ ಹೇಳುವುದಾದರೆ, ರಾಕ್ಷಸ ಕುಟುಂಬ ಎಂಬುದು ಕೂಡ ದೇವೇಗೌಡರ ಬಗ್ಗೆ ಹೊಗಳಿಕೆ ಅನ್ನೋದರಲ್ಲಿ ಅನುಮಾನ ಬೇಡ.