ಮೈತ್ರಿ ಸರಕಾರದಿಂದಲೇ ದೇವೇಗೌಡರು ಸೋಲಬೇಕಾಯಿತು ಎಂದ ಚನ್ನಿಗಪ್ಪ ಮಗ
ತುಮಕೂರು, ಮೇ 26: ನಮಗೆ ಈ ಮೈತ್ರಿ ಸರಕಾರ ಬೇಕಾಗಿಲ್ಲ. ನನ್ನ ಈ ಮಾತಿಂದ ಕುಮಾರಸ್ವಾಮಿ ಅವರಿಗೆ ಬೇಜಾರು ಮಾಡಿಕೊಂಡರೂ ಪರವಾಗಿಲ್ಲ. ದೇವೇಗೌಡರು ನನ್ನನ್ನು ಪಕ್ಷದಿಂದ ಹೊರಗೆ ಹಾಕಿದರೂ ಪರವಾಗಿಲ್ಲ ಎಂದು ತುಮಕೂರು ಗ್ರಾಮಾಂತರ ಕ್ಷೇತ್ರದ ಜೆಡಿಎಸ್ ಶಾಸಕ ಡಿ.ಸಿ.ಗೌರಿಶಂಕರ್ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.
ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ದೇವೇಗೌಡರು ಬಿಜೆಪಿಯ ಜಿ.ಎಸ್.ಬಸವರಾಜು ವಿರುದ್ಧ ಸೋಲನುಭವಿಸಿದ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ಮೈತ್ರಿ ಇಲ್ಲದೆ ದೇವೇಗೌಡರು ಸ್ಪರ್ಧೆ ಮಾಡಿದ್ದರೆ ಎರಡು ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತಿದ್ದರು ಎಂದು ಗೌರಿಶಂಕರ್ ಅಭಿಪ್ರಾಯ ಪಟ್ಟರು.
ನನ್ನ ಗೆಲುವಿಗೆ ದೇವೇಗೌಡ್ರು ವರವಾದ್ರು: ಬಸವರಾಜ್
ಈ ಮೈತ್ರಿ ಸಹವಾಸ ನಮಗೆ ಬೇಡ. ಅಲ್ಲಿ ಆಪರೇಷನ್, ಅವರು ಗೋವಾಗೆ ಹೋದರು, ದೆಹಲಿಗೆ ಹೋದರು, ಸರಕಾರ ಬಿದ್ದು ಹೋಯಿತು. ಇಂಥದ್ದೇ ಮಾತುಗಳಿಂದ ಇದರಿಂದ ಜನರು ಬೇಸತ್ತು ಹೋಗಿದ್ದಾರೆ. ಹಾಗಾಗಿ ಜೆಡಿಎಸ್ ಪಕ್ಷ ಸೋಲಬೇಕಾಯಿತು ಎಂದು ಅಸಮಾಧಾನ ಹೊರಹಾಕಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ಮಾಜಿ ಶಾಸಕ ಕೆ.ಎನ್.ರಾಜಣ್ಣ ವಿರುದ್ದ ಕಿಡಿಕಾರಿದ ಗೌರಿಶಂಕರ್, ನೀನೊಬ್ಬನೇ ಗಂಡಸಲ್ಲ. ತಾಕತ್ತು ಇದ್ದರೆ ಬಹಿರಂಗವಾಗಿ ಯುದ್ಧ ಮಾಡೋಣ ಬಾ ಎಂದು ಪಂಥಾಹ್ವಾನ ನೀಡಿದ್ದಾರೆ. ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿಗೆ ಮುನ್ನಡೆ ಬರಲು ಕೆ.ಎನ್.ರಾಜಣ್ಣ, ಸುರೇಶ್ ಗೌಡ, ಮುದ್ದಹನುಮೇಗೌಡ ಹಾಗೂ ಶಿವಣ್ಣ ಕಾರಣ ಎಂದು ಆರೋಪ ಮಾಡಿ, ರಾಜಣ್ಣ ವಿರುದ್ಧ ಗೌರಿಶಂಕರ್ ಗುಡುಗಿದರು.