ತುಮಕೂರು ಕ್ಷೇತ್ರದಿಂದಲೇ ದೇವೇಗೌಡರು ಸ್ಪರ್ಧೆ: ಅಧಿಕೃತ ಘೋಷಣೆ
ಬೆಂಗಳೂರು, ಮಾರ್ಚ್ 23: ತುಮಕೂರು ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತೇನೆ ಎನ್ನುವ ಮೂಲಕ ಜೆಡಿಎಸ್ ವರಿಷ್ಠ ಎಚ್ಡಿ ದೇವೇಗೌಡರು ಹಲವು ಕುತೂಹಲಗಳಿಗೆ ತೆರೆ ಎಳೆದಿದ್ದಾರೆ.
ಜೆಡಿಎಸ್ ತುಮಕೂರು ಕ್ಷೇತ್ರ ತಮಗೇ ಬೇಕು ಎಂದು ಪಟ್ಟು ಹಿಡಿದಿತ್ತು ಆದರೆ ಕಾಂಗ್ರೆಸ್ಗೆ ಅದರಲ್ಲೂ ಉಪಮುಖ್ಯಮಂತ್ರಿ ಜಿ ಪರಮೇಶ್ವರ್ಗೆ ತುಮಕೂರು ಕ್ಷೇತ್ರವನ್ನು ಬಿಟ್ಟುಕೊಡಲು ಮನಸ್ಸಿರಲಿಲ್ಲ. ಬಳಿಕ ದೇವೇಗೌಡರೇ ಸ್ವತಃ ಸ್ಪರ್ಧಿಸುವುದಾದರೆ ಬಿಟ್ಟುಕೊಡುತ್ತೇನೆ ಎಂದು ಹೇಳಿದ್ದರು.
ಡಿಬೇಟ್ : ದೇವೇಗೌಡರು ಅವರು ಚುನಾವಣೆಯಲ್ಲಿ ಸ್ಪರ್ಧಿಸಬೇಕೆ?
ಆದರೂ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುವವರೆಗೂ ಗೊಂದಲವಿತ್ತು. ಅದಾದ ಬಳಿಕ ಈಗ ದೇವೇಗೌಡರೇ ಸ್ವತಃ ಹೇಳಿಕೆ ನೀಡಿದ್ದು, ತಾವು ತುಮಕೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದೇನೆ ಹಾಗೂ ಸೋಮವಾರ ನಾಮಪತ್ರ ಸಲ್ಲಿಸುವುದಾಗಿ ತಿಳಿಸಿದ್ದಾರೆ.
ತಮ್ಮ ಸ್ವಕ್ಷೇತ್ರ ಹಾಸನವನ್ನು ಮೊಮ್ಮಗ ಪ್ರಜ್ವಲ್ಗೆ ಬಿಟ್ಟುಕೊಡುತ್ತಿರುವುದಾಗಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಮೂರು ವರ್ಷಗಳ ಹಿಂದೆಯೇ ಹೇಳಿದ್ದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಇದೇ ಆಧಾರದ ಮೇಲೇ ಪ್ರಜ್ವಲ್ಗೆ ವಿಧಾನಸಭೆ ಟಿಕೆಟ್ ನಿರಾಕರಣೆ ಮಾಡಲಾಗಿತ್ತು. ಅಲ್ಲಿಂದಲೂ ದೇವೇಗೌಡರು ಮುಂದೆ ಎಲ್ಲಿ ಸ್ಪರ್ಧಿಸಬಹುದು ಎಂಬ ಕೌತುಕ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು.
ಅಂತಿಮವಾಗಿ ಆ ಕುತೂಹಲ, ಚರ್ಚೆಗಳೆಲ್ಲವೂ ಕೊನೆಗೊಂಡಿದೆ. ಇನ್ನೊಂದೆಡೆ ಬೆಂಗಳೂರು ಉತ್ತರದಿಂದ ಗೌಡರು ಸ್ಪರ್ಧೆ ಮಾಡಲಿದ್ದಾರೆ ಎಂಬ ಊಹಾಪೋಹಗಳಿಗೂ ತೆರೆಬಿದ್ದಿದೆ.
ನಾಮಪತ್ರ ಸಲ್ಲಿಸಲಿರುವ ಮುದ್ದಹನುಮೇಗೌಡ, ಆತಂಕದಲ್ಲಿ ದೇವೇಗೌಡ
ಇನ್ನು ಇದೇ ವೇಳೆ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ವಿಚಾರವಾಗಿ ಮಾತನಾಡಿದ ಎಚ್.ಡಿ ದೇವೇಗೌಡ, ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಎಲ್ಲ ಅಂತಿಮವಾಗಿದೆ. ಎಲ್ಲವೂ ಮುಗಿದಿದೆ, ಯಾವುದೂ ಬಾಕಿ ಇಲ್ಲ.
ಅದೇನೂ ದೊಡ್ಡ ವಿಷಯವೂ ಅಲ್ಲ, ತುಮಕೂರು, ಮಂಡ್ಯ, ಹಾಸನ, ಶಿವಮೊಗ್ಗ, ಉಡುಪಿ ಚಿಕ್ಕಮಗಳೂರು, ಉತ್ತರ ಕನ್ನಡ ಜಿಲ್ಲೆಗಳ ಅಭ್ಯರ್ಥಿಗಳ ಹೆಸರು ಅಂತಿಮವಾಗಿದೆ. ವಿಜಯಪುರ ಜಿಲ್ಲೆಯ ಅಭ್ಯರ್ಥಿ ಹೆಸರು ಅಂತಿಮಗೊಳಿಸುವುದು ಬಾಕಿ ಇದೆ ಎಂದು ತಿಳಿಸಿದ್ದಾರೆ.