ಜೆಡಿಎಸ್ ಶಾಸಕನ ಜೊತೆ ಬಿಎಸ್ವೈ ಮಾತುಕತೆ; ಪಕ್ಷ ಬಿಡಲ್ಲ ಎಂದ ಶಾಸಕ!
ತುಮಕೂರು, ಸೆಪ್ಟೆಂಬರ್ 03; ಜೆಡಿಎಸ್ ಶಾಸಕರೊಬ್ಬರನ್ನು ಬಿಜೆಪಿಗೆ ಸೆಳೆಯುವ ಪ್ರಯತ್ನ ನಡೆದಿತ್ತು. ಬಿ. ಎಸ್. ಯಡಿಯೂರಪ್ಪ ಶಾಸಕರ ಜೊತೆ ಮಾತುಕತೆ ನಡೆಸಿದ್ದರು. ಆದರೆ ಯಾವುದೇ ಕಾರಣಕ್ಕೂ ಜೆಡಿಎಸ್ ಪಕ್ಷ ಬಿಡಲ್ಲ ಎಂದು ಶಾಸಕರು ಸ್ಪಷ್ಟನೆ ಕೊಟ್ಟಿದ್ದಾರೆ.
ಗುಬ್ಬಿ ಕ್ಷೇತ್ರದ ಜೆಡಿಎಸ್ ಶಾಸಕ, ಮಾಜಿ ಸಚಿವ ಎಸ್. ಆರ್. ಶ್ರೀನಿವಾಸ್ ಶುಕ್ರವಾರ ಈ ಕುರಿತು ಹೇಳಿಕೆ ನೀಡಿದ್ದಾರೆ, "ನನ್ನನ್ನು ಬಿಜೆಪಿಗೆ ಬರುವಂತೆ ನನ್ನ ಅಳಿಯನ ಮೂಲಕ ಒತ್ತಾಯಿಸಿದರು" ಎಂದು ಹೇಳಿದ್ದಾರೆ.
ಮೋಸಕ್ಕೆ ಬೇಸತ್ತು ಜೆಡಿಎಸ್ ಗೂಡು ಬಿಡುವರೇ ಗುಬ್ಬಿ ವಾಸಣ್ಣ !
"ನಾನು ಪ್ರಾಮಾಣಿಕವಾಗಿ ಪಕ್ಷಾಂತರ ಮಾಡಿದರೂ ಹಣ ತೆಗೆದುಕೊಂಡು ಹೋದ ಎಂದು ಜನರು ಅಂತಾರೆ. ಬೇಕಿದ್ದರೆ ನಿವೃತ್ತಿ ಘೋಷಣೆ ಮಾಡಿ ಮನೆಯಲ್ಲಿ ಇರುವೆ. ನಾನು ಬರಲ್ಲ ಎಂದಿದ್ದೆ. ನಾನು ಇಂಡಿಪೆಂಟೆಂಟ್ ಆಗಿ ಗೆದ್ದು ಬಳಿಕ ಜೆಡಿಎಸ್ ಪಕ್ಷಕ್ಕೆ ಬಂದವನು. ನನ್ನಿಂದ ಅವರಿಗೆ ಲಾಭ ಆಗಿದೆ ಬಿಟ್ಟರೆ ತೊಂದರೆ ಏನೂ ಆಗಿಲ್ಲ" ಎಂದು ಶಾಸಕರು ಹೇಳಿದರು.
ಬಾಗೇಪಲ್ಲಿ; 2023ರ ಚುನಾವಣೆ ಜೆಡಿಎಸ್ ಅಭ್ಯರ್ಥಿ ಘೋಷಣೆ!
ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಬೇಸರದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಶಾಸಕರು, "ನಾನು ಕಾಸು ಇಸ್ಕೊಂಡು ಬೇರೆ ಪಕ್ಷಕ್ಕೆ ಹೋಗಿಲ್ಲ. ನಾನಿನ್ನೂ ಜೆಡಿಎಸ್ ಪಕ್ಷದಲ್ಲೇ ಇದ್ದೇನೆ. ಇಲ್ಲಿ ಪ್ರಮಾಣಿಕವಾಗಿಯೇ ಇದ್ದೇನೆ. ನನ್ನ ಬಗ್ಗೆ ಬೇಸರಪಡೋ ಪ್ರಮೇಯನೇ ಇಲ್ಲ" ಎಂದು ತಿಳಿಸಿದರು.
ಜೆಡಿಎಸ್ ಇರುವುದು ಕಾರ್ಯಕರ್ತರಿಂದ, ನಾಯಕರಿಂದಲ್ಲ: ಮಾಜಿ ಪ್ರಧಾನಿ ದೇವೇಗೌಡ
ಬಿಜೆಪಿಗೆ ಸೆಳೆಯುವ ಕೆಲಸ ಮಾಡಿದರು
"ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ್ ಅವರು ನನ್ನ ಅಳಿಯನ ಮೂಲಕ ನನ್ನನ್ನು ಬಿಜೆಪಿಗೆ ಸೆಳೆಯುವ ಕೆಲಸ ಮಾಡಿದರು. ನನ್ನನ್ನು ಯಡಿಯೂರಪ್ಪ ಕರೆಸಿ ಮಾತನಾಡಿದರು. ರಾಜಕೀಯ ನಿವೃತ್ತಿ ಹೊಂದುತ್ತೇನೆಯೇ ವಿನಃ ಈ ಸಂದರ್ಭದಲ್ಲಿ ಯಾವುದೇ ಪಕ್ಷಕ್ಕೆ ಬರೋಲ್ಲ ಅಂದಿದ್ದೆ" ಎಂದು ಎಸ್. ಆರ್. ಶ್ರೀನಿವಾಸ್ ಹೇಳಿದರು.
ಜನರಿಗೆ ಮುಖ ತೋರಿಸೋಕೆ ಆಗಲ್ಲ
"ನಾನು ಪ್ರಾಮಾಣಿಕವಾಗಿ ಪಕ್ಷಾಂತರ ಮಾಡಿದರೂ ಜನ ಹಣ ಇಸ್ಕೊಂಡು ಹೋದ ಅಂತಾರೆ. ಜನರಿಗೆ ಮುಖ ತೋರಿಸೋಕೆ ಆಗಲ್ಲ. ಅವನು ಇಷ್ಟು ಇಸ್ಕೊಂಡ, ಅಷ್ಟು ಇಸ್ಕೊಂಡ ಅಂತಾರೆ. ಅಂತಹ ಬದುಕು ಯಾಕೆ ಬೇಕು?. ಜನರಿಗೆ ಮುಖ ತೋರಿಸೋಕೆ ಆಗಲ್ಲ. ಬೇಕಿದ್ರೆ ನಿವೃತ್ತಿ ಘೋಷಿಸಿ ಮನೇಲಿ ಇರ್ತಿನಿ ನಾನು ಬರಲ್ಲ ಎಂದಿದ್ದೆ" ಎಂದು ಎಸ್. ಆರ್. ಶ್ರೀನಿವಾಸ್ ತಿಳಿಸಿದರು.
"ಪಕ್ಷ ಬಿಡುವ ವಿಚಾರ ಇಲ್ಲ ಎಂದು ಹಲವು ಬಾರಿ ತಿಳಿಸಿದ್ದೇನೆ. ಆದರೂ ಆಗಾಗ ಗೊಂದಲ ಸೃಷ್ಟಿಯಾಗುತ್ತದೆ. ಮತದಾರರ ಒಲವು ಮತ್ತು ಶಾಸಕನಾಗಿ ನಾನು ಕ್ಷೇತ್ರಕ್ಕೆ ಏನು ಮಾಡಿರುವೆ? ಎಂಬುದು ಚುನಾವಣೆಯಲ್ಲಿ ಪ್ರಶ್ನೆಯಾಗುತ್ತದೆ. ಅದರಂತೆ ಮತದಾರ ಪ್ರಭುಗಳು ಆಶೀರ್ವಾದ ಮಾಡುತ್ತಾರೆ. ಇನ್ನು ಎರಡು ವರ್ಷದಲ್ಲಿ ಚುನಾವಣೆ ಇದೆ. ನನ್ನ ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳ ಬಗ್ಗೆ ಯೋಜನೆ ಇದೆ. ಅವುಗಳನ್ನು ಮಾಡುವುದು ನನ್ನ ಗುರಿ" ಎಂದು ಶಾಸಕರು ತಿಳಿಸಿದರು.
ಅಧಿಕಾರಕ್ಕೆ ಯಾಕಿಷ್ಟು ಒದ್ದಾಡಬೇಕು?
"ಇವತ್ತು ಇರೋ ನಾಳೆ ಹೋಗೋ ಅಧಿಕಾರಕ್ಕೆ ಯಾಕಿಷ್ಟು ಒದ್ದಾಡಬೇಕು?. ಇಂತಹ ಸಂದರ್ಭದಲ್ಲಿ ನಾನು ನನ್ನ ಹೆಸರನ್ನು ಯಾಕೆ ಕೆಡಿಸಿಕೊಳ್ಳಬೇಕು. ನಾನಿನ್ನೂ ಜೆಡಿಎಸ್ ಪಕ್ಷದಲ್ಲಿ ಪ್ರಾಮಾಣಿಕವಾಗಿ ಇದ್ದೇನೆ. ಬೇಸರ ಪಡೋ ಪ್ರಮೇಯನೇ ಇಲ್ಲ" ಎಂದು ಎಸ್. ಆರ್. ಶ್ರೀನಿವಾಸ್ ಹೇಳಿದರು.
ಇದೇ ಮೊದಲ ಬಾರಿಯಲ್ಲ
"ಕುಮಾರಸ್ವಾಮಿ ಮತ್ತು ನಮ್ಮ ಪಕ್ಷಕ್ಕೆ ಶಕ್ತಿ ತುಂಬಿದ್ದೇನೆ. ಅಂದ ಮೇಲೆ ಅವರು ನನ್ನ ಮೇಲೆ ಏಕೆ ಬೇಸರ ವ್ಯಕ್ತಪಡಿಸುತ್ತಾರೆ. ನಾನು ಅವರ ಮೇಲೆ ವಿಶ್ವಾಶವಿಟ್ಟಿದ್ದೇನೆ. ಅವರು ನನ್ನ ಮೇಲೆ ನಂಬಿಕೆ ಇಟ್ಟಿದ್ದಾರೆ. ಇದರಲ್ಲಿ ಯಾವುದೇ ಗೊಂದಲ ಬೇಡ" ಎಂದು ಎಸ್. ಆರ್. ಶ್ರೀನಿವಾಸ್ ಹೇಳಿದರು.
ಎಸ್. ಆರ್. ಶ್ರೀನಿವಾಸ್ ಜೆಡಿಎಸ್ ತೊರೆಯಲಿದ್ದಾರೆ ಎಂಬ ಸುದ್ದಿಗಳು ಇದೇ ಮೊದಲ ಬಾರಿಗೆ ಹಬ್ಬಿದ್ದಲ್ಲ. ಹಲವು ಬಾರಿ ಇಂತಹ ಸುದ್ದಿ ಹೇಳಿ ಬಂದಿದ್ದು ಶಾಸಕರು ಸ್ಪಷ್ಟನೆಯನ್ನು ನೀಡಿದ್ದಾರೆ.