ಗ್ರಾ. ಪಂ ಚುನಾವಣೆ; ವೈರಲ್ ಆದ ಗಂಗಮ್ಮ ನೀಡಿದ ಭರವಸೆಗಳು!
ತುಮಕೂರು, ಡಿಸೆಂಬರ್ 20: ಕರ್ನಾಟಕದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಗೆ ದಿನಾಂಕ ನಿಗದಿಯಾಗಿದೆ. ಡಿಸೆಂಬರ್ 22 ಮತ್ತು 27ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದ್ದು, ಡಿಸೆಂಬರ್ 30ರಂದು ಫಲಿತಾಂಶ ಪ್ರಕಟವಾಗಲಿದೆ. ಗ್ರಾಮೀಣ ಮಟ್ಟದಲ್ಲಿ ಮತದಾರರನ್ನು ಸೆಳೆಯಲು ಅಭ್ಯರ್ಥಿಗಳು ವಿವಿಧ ರೀತಿಯಲ್ಲಿ ಪ್ರಯತ್ನ ನಡೆಸುತ್ತಿದ್ದಾರೆ.
ತುಮಕೂರು ಜಿಲ್ಲೆಯ ಗ್ರಾಮ ಪಂಚಾಯಿತಿ ಚುನಾವಣೆಗೆ ಗಂಗಮ್ಮ ಎಂಬ ಅಭ್ಯರ್ಥಿ ನೀಡಿರುವ ಭರವಸೆಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಅದರಲ್ಲೂ ಗಂಗಮ್ಮ ಗೆದ್ದರೆ ಮಾಡುವ ಕೆಲಸಗಳಿಗಿಂತ ಸೋತರೆ ಮಾಡುವ ಕೆಲಸಗಳೇ ಪಟ್ಟಿಯೇ ಚೆನ್ನಾಗಿದೆ.
ಪಂಚಾಯಿತಿ ಚುನಾವಣೆ; ಆಯೋಗದಿಂದ ವಿಶೇಷ ಕೋವಿಡ್ ಕಿಟ್
ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರ ಗಮನವನ್ನು ಗಂಗಮ್ಮ ಸೆಳೆದಿದ್ದಾರೆ. ಅವರು ಸಹ ತಮ್ಮ ಫೇಸ್ ಬುಕ್ ಪೋಸ್ಟ್ನಲ್ಲಿ "ಇದೊಂದು ವಿನೂತನ ಚುನಾವಣಾ ಪ್ರಚಾರ ಪತ್ರ. ಇಂತಹದ್ದನ್ನು ಇದುವರೆವಿಗೆ ನೋಡಿರಲಿಲ್ಲ" ಎಂದು ಪ್ರಣಾಳಿಕೆ ಪೋಟೋವನ್ನು ಶೇರ್ ಮಾಡಿದ್ದಾರೆ.
ಪಂಚಾಯಿತಿ ಚುನಾವಣೆ; ಪ್ರಭಾವ ತೋರಿಸಿದ ವರ್ತೂರು ಪ್ರಕಾಶ್
ಶನಿವಾರದಿಂದ ಸಾಮಾಜಿಕ ಜಾಲತಾಣದಲ್ಲಿ ಗಂಗಮ್ಮ ಪ್ರಣಾಳಿಕೆ ಹರಿದಾಡುತ್ತಿದೆ. ಗಂಗಮ್ಮ ಸೋಲಿಸುವುದಕ್ಕಿಂತ ಗೆಲ್ಲಿಸುವುದೇ ಉತ್ತಮ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಡಿಸೆಂಬರ್ 22ರಂದು ಗಂಗಮ್ಮ ಸ್ಪರ್ಧಿಸಿರುವ ಪಂಚಾಯಿತಿಯಲ್ಲಿ ಮತದಾನ ನಡೆಯಲಿದೆ.
ಕಾರವಾರದಲ್ಲಿದೆ ಅಭ್ಯರ್ಥಿ ಇಲ್ಲದ ಗ್ರಾಮ ಪಂಚಾಯತಿ!
ಆಲೋಚಿಸುವಂತೆ ಮಾಡಿದೆ
ತುಮಕೂರು ತಾಲೂಕು ಹೆಬ್ಬೂರು ಹೋಬಳಿ ಕೇಂದ್ರದ ಕಲ್ಕೆರೆ ಕ್ಷೇತ್ರದಿಂದ ನಡೆಯಲಿರುವ ಚುನಾವಣೆಯಲ್ಲಿ ಗಂಗಮ್ಮ ಹೆಚ್. ಅಭ್ಯರ್ಥಿ. ಚಪ್ಪಲಿ ಗುರುತಿನ ಮೂಲಕ ಗಂಗಮ್ಮ ಕಣಕ್ಕಿಳಿದಿದ್ದಾರೆ. ತಮಗೆ ಏಕೆ ಮತ ಹಾಕಬೇಕು ಎಂದು ಗಂಗಮ್ಮ ಹೊರಡಿಸಿರುವ ಕರಪತ್ರ ವೈರಲ್ ಆಗಿದೆ. ಕಲ್ಕೆರೆ ಮಾತ್ರವಲ್ಲ ಇಡೀ ರಾಜ್ಯದ ಜನರು ಈ ಕುರಿತು ಆಲೋಚಿಸುವಂತೆ ಮಾಡಿದೆ.
ಚುನಾವಣಾ ಕರಪತ್ರ
ಕಲ್ಕೆರೆ ಕ್ಷೇತ್ರದಿಂದ ಕಣಕ್ಕಿಳಿದಿರುವ ಗಂಗಮ್ಮ ತಮ್ಮ ಗ್ರಾಮದ ಮತದಾರರ ಬಳಿ ಮಾತಯಾಚನೆ ಮಾಡಲು ಕರಪತ್ರವೊಂದನ್ನು ಹೊರಡಿಸಿದ್ದಾರೆ. ಅದರಲ್ಲಿ ಗೆದ್ದರೆ ಮಾಡುವ ಕೆಲಸಗಳು, ಸೋತರೆ ಮಾಡುವ ಕೆಲಸಗಳು ಎಂಬ ಎರಡು ಪಟ್ಟಿ ಇದೆ. ಗೆದ್ದರೆ ದೇವಾಲಯ ಮತ್ತು ಅರಳಿ ಕಟ್ಟೆ ಕಟ್ಟಿಸುವ ಭರವಸೆ ಇದೆ. ರಸ್ತೆ ಮಾಡಿಸುವುದು, ನೀರು ರಸ್ತೆಗೆ ಹೋಗದಂತೆ ಸಿ. ಸಿ. ಚರಂಡಿ ಮಾಡಿಸುವ ಭರವಸೆ ಕೊಡಲಾಗಿದೆ.
ಸೋತರೆ ಮಾಡಿಸುವ ಕೆಲಸಗಳು
ಒಂದು ವೇಳೆ ಗಂಗಮ್ಮ ಚುನಾವಣೆಯಲ್ಲಿ ಸೋತರೆ ಮಾಡುವ ಕೆಲಸಗಳ ಪಟ್ಟಿಯನ್ನು ನೀಡಿದ್ದಾರೆ. ಇದೇ ಈ ಪ್ರಣಾಳಿಕೆ ವೈರಲ್ ಆಗಲು ಕಾರಣ ಆಗಿರುವುದು. ಸೋತರೆ ಏನು ಮಾಡುವೆ ಎಂದು 4 ಅಂಶಗಳನ್ನು ಜನರ ಮುಂದೆ ಗಂಗಮ್ಮ ಇಟ್ಟಿದ್ದಾರೆ. ಅನರ್ಹವಾಗಿ ಪಡೆದಿರುವ ರೇಷನ್ ಕಾರ್ಡ್ ರದ್ದು, ಸುಳ್ಳು ಮಾಹಿತಿ ಕೊಟ್ಟು ಪಡೆಯುತ್ತಿರುವ ವಿವಿಧ ಯೋಜನೆಗೆ ಹಣ ಕಟ್ ಮಾಡಿಸುವುದು. ಹಳೇ ದಾಖಲೆಯಂತೆ ಸ್ಮಶಾನ ಮಾಡಿಸುವುದು ಇದರಲ್ಲಿ ಸೇರಿವೆ.
ಡಿ.30ರ ತನಕ ಕಾಯಬೇಕು
ಕಲ್ಕೆರೆಯಲ್ಲಿ ಗಂಗಮ್ಮ ಗೆಲ್ಲಲಿದ್ದಾರೆಯೇ?, ಅವರ ಕರಪತ್ರದ ಕೆಲಸ ಮಾಡಲಿದೆಯೇ? ಎಂಬುದನ್ನು ತಿಳಿಯಲು ಡಿಸೆಂಬರ್ 30ರ ತನಕ ಕಾಯಬೇಕಿದೆ. ಗ್ರಾಮೀಣ ಮಟ್ಟದ ಕರಪತ್ರವೊಂದು ಸದ್ಯ ರಾಜ್ಯಾದ್ಯಂತ ಚರ್ಚೆಗೆ ಕಾರಣವಾಗಿರುವುದಂತೂ ಸತ್ಯ.