ಅರ್ಜಿ ಹಾಕದಿದ್ದರೂ ಕೈಸೇರಲಿದೆ ಪಿಂಚಣಿ; ಆರ್ ಅಶೋಕ್
ತುಮಕೂರು, ಸೆಪ್ಟೆಂಬರ್ 11: ವೃದ್ಧಾಪ್ಯ ವೇತನಕ್ಕಾಗಿ ಇನ್ನು ಕಚೇರಿಗಳಿಗೆ ಅಲೆಯುವಂತಿಲ್ಲ, 60 ವರ್ಷ ದಾಟಿದ ಕೂಡಲೇ ಅರ್ಜಿ ಹಾಕದಿದ್ದರೂ ವೃದ್ಧಾಪ್ಯ ವೇತನ ಸಿಗಲಿದೆ, ಅಂಥ ಸೌಲಭ್ಯವನ್ನು ಸರ್ಕಾರ ಜಾರಿಗೆ ತಂದಿದೆ ಎಂದು ಹೇಳಿದ್ದಾರೆ ಕಂದಾಯ ಸಚಿವ ಆರ್ ಅಶೋಕ್.
ತುಮಕೂರಿನ ಶಿರಾ ನಗರದಲ್ಲಿ ನೂತನ ಮಿನಿ ವಿಧಾನ ಸೌಧದ ಕಟ್ಟಡ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, "ಗ್ರಾಮೀಣ ಪ್ರದೇಶಗಳಲ್ಲಿ, ಸ್ವಾಮಿ ನಮ್ಮ ಚಪ್ಪಲಿ ಸವೆದರೂ ಕೆಲಸ ಮಾತ್ರ ಆಗಲಿಲ್ಲ ಎಂಬ ದೂರು ಪದೇ ಪದೇ ಬರುತ್ತಿದೆ. ಇದಕ್ಕೆ ಸರ್ಕಾರ ನೂತನ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಲ್ಲಿ ವೃದ್ಧರು ವೇತನ ಪಡೆಯಲು ಕಚೇರಿಗೆ ಅಲೆಯುವಂತಿಲ್ಲ, ಅರ್ಜಿ ಹಾಕದಿದ್ದರೂ ವೃದ್ದಾಪ್ಯ ವೇತನ ನೀಡುವ ಯೋಜನೆ ಇದಾಗಿದೆ" ಎಂದು ತಿಳಿಸಿದರು.
ಮನೆ ಬಾಗಿಲಿಗೆ ಪಿಂಚಣಿ; ಉಡುಪಿಯಲ್ಲಿ ಪಾಯೋಗಿಕವಾಗಿ ಜಾರಿ
ರಾಜ್ಯದ ಎಲ್ಲಾ ಜಿಲ್ಲೆಯಲ್ಲೂ ಜಾರಿಗೆ ಸೂಚನೆ
ಈ ಯೋಜನೆಯಡಿಯಲ್ಲಿ ಈಗಾಗಲೇ ಉಡುಪಿ, ಬಳ್ಳಾರಿ ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಸುಮಾರು 10 ಸಾವಿರ ಮಂದಿಗೆ ನೀಡಿದ್ದು, ಇದು ಯಶಸ್ವಿಯಾಗಿದೆ. ಇದನ್ನು ರಾಜ್ಯದ ಎಲ್ಲಾ ಜಿಲ್ಲೆಯಲ್ಲೂ ಜಾರಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ತಿಳಿಸಿದರು.
ಪಿಂಚಣಿ ತಲುಪದ ದೂರು
ವೃದ್ಧಾಪ್ಯ ವೇತನ ಸರಿಯಾಗಿ ತಲುಪುತ್ತಿಲ್ಲ ಎಂಬ ದೂರುಗಳು ನಿತ್ಯ ಕೇಳಿಬರುತ್ತಿವೆ. ಅಂಚೆ ಕಚೇರಿಯಿಂದ ನಿಗದಿತ ಸಮಯಕ್ಕೆ ಸರಿಯಾಗಿ ವೃದ್ಧರಿಗೆ ಪಿಂಚಣಿ ತಲುಪುತ್ತಿಲ್ಲ. ಪಿಂಚಣಿ ತಲುಪಿಸಲು ಅಂಚೆ ಅಧಿಕಾರಿಗಳು ಕಮಿಷನ್ ಹಣ ಪಡೆಯುತ್ತಿದ್ದ ಮತ್ತು ಮೂರು ನಾಲ್ಕು ತಿಂಗಳಿಗೆ ಒಂದೇ ಬಾರಿ ನೀಡುತ್ತಿದ್ದ ಸಂಗತಿಗಳು ಕಂಡುಬಂದಿವೆ. ಅದಕ್ಕಾಗಿ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.
ವೃದ್ಧಾಪ್ಯ ವೇತನ ಹೆಚ್ಚಳ ಮಾಡುವಂತೆ ಸರ್ಕಾರಕ್ಕೆ ಸುಪ್ರೀಂ ಆದೇಶ
ವೃದ್ಧಾಪ್ಯ ವೇತನ ನೇರ ಖಾತೆಗೆ
ಕೆಲವು ಕಡೆ ವೃದ್ಧಾಪ್ಯ ವೇತನದ ಹಣವನ್ನೇ ನುಂಗಿ ಹಾಕಿದ್ದಾರೆ ಎಂಬ ದೂರುಗಳು ಕೇಳಿ ಬರುತ್ತಿವೆ. ಹೀಗಾಗಿ ಅಂಚೆ ಕಚೇರಿ ಬದಲಿಗೆ ಇನ್ನು ಮುಂದೆ ಎಲ್ಲಾ ವೇತನಗಳ ಖಾತೆಯನ್ನು ಆಧಾರ್ ಗೆ ಲಿಂಕ್ ಮಾಡಿ ಬೋಗಸ್ ಖಾತೆಗಳನ್ನು ಪತ್ತೆ ಹಚ್ಚಿ ಅದನ್ನು ವಜಾ ಮಾಡಲಾಗುತ್ತದೆ. ನಿಜವಾದ ಫಲಾನುಭವಿಗೆ ವೃದ್ಧಾಪ್ಯ ವೇತನ ಹಣವನ್ನು ನೇರ ಅವರ ಬ್ಯಾಂಕ್ ಖಾತೆಗೆ ಹೋಗುವಂತೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಅಭಿವೃದ್ಧಿ ಕೆಲಸಗಳ ಚರ್ಚೆ
ಇದೇ ಸಂದರ್ಭ ಅಭಿವೃದ್ಧಿ ಕೆಲಸಗಳ ಕುರಿತೂ ಮಾತನಾಡಿ, "ಅರಣ್ಯ ಹಾಗೂ ಕಂದಾಯ ಇಲಾಖೆಗಳ ನಡುವೆ ಕೆಲ ಸಮಸ್ಯೆ ಬಗೆಹರಿದಿಲ್ಲ. ಸದ್ಯದಲ್ಲಿ ಹೊಸ ರೀತಿಯ ಕಾನೂನನ್ನು ಜಾರಿಗೆ ತಂದು ಎಲ್ಲಾ ಪ್ರಕರಣಗಳಿಗೆ ಮಂಗಳ ಹಾಡುವ ನೂತನ ಕಾರ್ಯವನ್ನು ಅರಣ್ಯ ಸಚಿವರು ಜಾರಿಗೊಳಿಸುವ ಪ್ರಯತ್ನ ನಡೆಸಿದ್ದಾರೆ" ಎಂದರು.
ರಾಜ್ಯದ ಎಲ್ಲಾ ಹಳ್ಳಿಗಳಲ್ಲೂ ಸ್ಮಶಾನ ನಿರ್ಮಾಣ ಮಾಡಲು ಸರ್ಕಾರಿ ಜಾಗಗಳನ್ನು ಗರುತಿಸಿ ರುದ್ರಭೂಮಿಗಾಗಿ ಮೊದಲು ಮೀಸಲಿಟ್ಟ ಗ್ರಾಮಗಳಲ್ಲಿ ಸರ್ಕಾರಿ ಶಾಲೆ, ಆಸ್ಪತ್ರೆ ಇನ್ನಿತರೆ ಸರ್ಕಾರಿ ವ್ಯವಸ್ಥೆಗಳಿಗೆ ಜಮೀನು ಮಂಜೂರು ಮಾಡಿ ಉಳಿಕೆ ಜಮೀನನ್ನು ಬಗರ್ ಹುಕುಂ ಅರ್ಜಿದಾರರಿಗೆ ಜಮೀನು ಮಂಜೂರು ಮಾಡುವಂತೆ ನಮ್ಮ ಸರಕಾರಿ ಯೋಜನೆ ರೂಪಿಸಿದೆ ಎಂದು ತಿಳಿಸಿದರು.ತುಮಕೂರು ಉಸ್ತುವಾರಿ ಸಚಿವ ಮಾಧುಸ್ವಾಮಿ, ಅರಣ್ಯ ಸಚಿವ ಆನಂದ್ ಸಿಂಗ್, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಹಾಜರಿದ್ದರು.