ಸಿದ್ದಗಂಗಾ ಮಠ ಸೇರಿ ಹಲವು ಸಂಸ್ಥೆಗಳಿಗೆ ಅಕ್ಕಿ-ಗೋದಿ ಸರಬರಾಜು ನಿಲ್ಲಿಸಿದ ಸರ್ಕಾರ
ಬೆಂಗಳೂರು, ಫೆಬ್ರವರಿ 04: ಸಾವಿರಾರು ಮಕ್ಕಳಿಗೆ ಅನ್ನದಾಸೋಹ ಮಾಡುವ ರಾಜ್ಯದ ಹೆಮ್ಮೆಯ ಧಾರ್ಮಿಕ, ಶೈಕ್ಷಣಿಕ ಹಾಗೂ ಸೇವಾ ಕೇಂದ್ರ ಸಿದ್ದಗಂಗಾ ಮಠಕ್ಕೆ ಅಕ್ಕಿ ಮತ್ತು ಗೋಧಿ ಪೂರೈಕೆಯನ್ನು ನಿಲ್ಲಿಸಲಾಗಿದೆ.
ಕೇಂದ್ರ ಸರ್ಕಾರದ ಅನ್ನಪೂರ್ಣ ಯೋಜನೆಯಡಿ ಸಿದ್ದಗಂಗಾ ಸೇರಿದಂತೆ ಹಲವು ಮಠಗಳಿಗೆ ಅಕ್ಕಿ-ಗೋಧಿ ಪೂರೈಕೆಯನ್ನು ನಿಲ್ಲಿಸಲಾಗಿದೆ. ಸಿದ್ದಗಂಗಾ ಮಠಕ್ಕೆ ಕಳೆದ ಮೂರು ತಿಂಗಳಿನಿಂದಲೂ ಸರ್ಕಾರದ ವತಿಯಿಂದ ಬರುತ್ತಿದ್ದ ಅಕ್ಕಿ-ಗೋಧಿ ಪೂರೈಕೆ ನಿಂತು ಹೋಗಿದೆ.
ಈ ಬಗ್ಗೆ ಮಾತನಾಡಿರುವ ಮಠದ ಸಿದ್ದಲಿಂಗ ಸ್ವಾಮೀಜಿ ಅವರು, 'ಮಠದಲ್ಲಿ ಇನ್ನೂ ಎರಡು ತಿಂಗಳಿಗೆ ಸಾಕಾಗುವಷ್ಟು ದವಸ ಇದೆ. ಎರಡು ತಿಂಗಳ ನಂತರ ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಕಷ್ಟವಾಗುತ್ತದೆ' ಎಂದಿದ್ದಾರೆ.
'ಶಿವಕುಮಾರ ಸ್ವಾಮೀಜಿ ಭಕ್ತರು ಭತ್ತ ನೀಡಿದ್ದಾರೆ'
'ಶಿವಕುಮಾರ ಸ್ವಾಮೀಜಿ ಅವರು ಲಿಂಗೈಕ್ಯರಾದಾಗ ಭಕ್ತಾದಿಗಳು ಭತ್ತವನ್ನು ಕಾಣಿಕೆ ನೀಡಿದ್ದರು. ಅದನ್ನೇ ಅಕ್ಕಿಯನ್ನಾಗಿ ಮಾಡಿಕೊಳ್ಳಲಾಗಿದ್ದು, ಇನ್ನೂ ಎರಡು ತಿಂಗಳು ದಾಸೋಹಕ್ಕೆ, ಮಕ್ಕಳ ಊಟಕ್ಕೆ ಸಮಸ್ಯೆ ಇಲ್ಲ' ಎಂದು ಅವರು ಹೇಳಿದ್ದಾರೆ.
ತುಮಕೂರು ಜಿಲ್ಲೆಯ 16 ಸಂಸ್ಥೆಗಳಿಗೆ ಧಾನ್ಯ ವಿತರಣೆ ಇಲ್ಲ
ಸಿದ್ದಗಂಗಾ ಮಠ ತುಮಕೂರು ಜಿಲ್ಲೆಯ 16 ಸಂಸ್ಥೆಗಳಿಗೆ ನೀಡಲಾಗುತ್ತಿದ್ದ ಆಹಾರ ಧಾನ್ಯಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಜಿಲ್ಲೆಯ ಆಹಾರ ನಾಗರೀಕ ಪೂರೈಕೆ ಜಂಟಿ ಉಪನಿರ್ದೇಶಕ ಶಿವಲಿಂಗಯ್ಯ ಹೇಳಿದ್ದಾರೆ.
454 ಸೇವಾ ಸಂಸ್ಥೆಗಳಿಗೆ ಧಾನ್ಯ ವಿತರಣೆ ಇಲ್ಲ
ತುಮಕೂರು ಮಾತ್ರವಲ್ಲದೆ ರಾಜ್ಯದ 454 ಸಂಘ-ಸಂಸ್ಥೆಗೆ ನೀಡಲಾಗುತ್ತಿದ್ದ ಧಾನ್ಯವನ್ನು ಸರ್ಕಾರ ಸ್ಥಗಿತಗೊಳಿಸಿದೆ. ಕೇಂದ್ರದಿಂದ ಅನುದಾನ ಬಾರದ ಕಾರಣ ಅಕ್ಕಿ-ಗೋಧಿ ಪೂರೈಕೆಯನ್ನು ರಾಜ್ಯ ಸರ್ಕಾರ ಸ್ಥಗಿತಗೊಳಿಸಿದೆ.
ಹಲವು ಸೇವಾ ಕೇಂದ್ರಗಳಿಗೆ ಧಾನ್ಯ ನೀಡಲಾಗುತ್ತಿತ್ತು
ಅಂಗವಿಕಲ ಕೇಂದ್ರಗಳು, ಬುದ್ದಿಮಾದ್ಯಮ ಕೇಂದ್ರಗಳು, ವೃದ್ಧಾಶ್ರಮ, ವಸತಿ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು, ಮಹಿಳಾ ಕಲ್ಯಾಣ ಸಂಸ್ಥೆಗಳು, ಭಿಕ್ಷುಕರ ಪುನರ್ವಸತಿ ಕೇಂದ್ರಗಳು ಇನ್ನೂ ಹಲವು ಸೇವಾ ಸಂಸ್ಥೆಗಳಿಗೆ ಕೇಂದ್ರದ ಅನ್ನ ದಾಸೋಯ (ಕಲ್ಯಾಣ ಸಂಸ್ಥೆ ಯೋಜನೆ) ಮೂಲಕ ಅಕ್ಕಿ-ಗೋಧಿ ವಿತರಣೆ ಮಾಡಲಾಗುತ್ತಿತ್ತು.