ಆ್ಯಂಬುಲೆನ್ಸ್ ಇಲ್ಲದೆ ಮೊಪೆಡ್ ಮೇಲೆ ಸಾಗಿಸುವಾಗ ಅಸ್ವಸ್ಥ ಯುವತಿ ಸಾವು
ವೈದ್ಯಕೀಯ ಸೌಲಭ್ಯಗಳ ವಿಚಾರದಲ್ಲಿ ತನ್ನದೇ ಆದ ಹೆಗ್ಗಳಿಕೆ ಹೊಂದಿರುವ ಕರ್ನಾಟಕದ ಗ್ರಾಮೀಣ ಭಾಗದ ಜನರು ಆರೋಗ್ಯದ ವಿಚಾರಗಳಲ್ಲಿ ಎದುರಿಸುತ್ತಿರುವ ಕಷ್ಟವನ್ನು ಅನಾವರಣಗೊಳಿಸುವ ಪ್ರಸಂಗವಿದು.
ಮಧುಗಿರಿ, ಫೆಬ್ರವರಿ 20: ಸೂಕ್ತ ಆಸ್ಪತ್ರೆ ಸೌಲಭ್ಯ ಸಿಗದೇ ತೀವ್ರ ಅಸ್ಪಸ್ಥಳಾದ ಯುವತಿಯೊಬ್ಬಳು ಬೇರೊಂದು ಆಸ್ಪತ್ರೆಗೆ ಸಾಗಿಸುವ ಯಾವ ಸೂಕ್ತ ವ್ಯವಸ್ಥೆಯೂ ಸಿಗದೇ ತಂದೆಯ ಮಡಿಲಿನಲ್ಲೇ ಪ್ರಾಣಬಿಟ್ಟಿದ್ದಾಳೆ.
ಇದಾಗಿದ್ದು ದೂರದ ಒರಿಸ್ಸಾದಲ್ಲೋ, ಜಾರ್ಖಂಡ್ ನಲ್ಲೋ ಅಲ್ಲ. ನಮ್ಮಲ್ಲೇ ನಮ್ಮ ರಾಜ್ಯದ ಮಧುಗಿರಿ ತಾಲೂಕಿನಲ್ಲೇ. ಇದು ಮತ್ತೊಂದು ಆಘಾತಕಾರಿ ವಿಚಾರ. ವೈದ್ಯಕೀಯ ಸೌಲಭ್ಯಗಳ ವಿಚಾರದಲ್ಲಿ ಕರ್ನಾಟಕ ಹೆಸರು ವಾಸಿಯಾಗಿದ್ದರೂ ಗ್ರಾಮೀಣ ಪ್ರದೇಶಗಳಲ್ಲಿ ಕನಿಷ್ಠ ಸೌಲಭ್ಯಗಳೂ ಇಲ್ಲದಿರುವುದು ಈ ನಾಡಿನ ಹದಗೆಟ್ಟ ಗ್ರಾಮೀಣ ಸ್ಥಿತಿಗಳಿಗೆ ನಿದರ್ಶನವಾಗಿದೆ.
ಬಾಲಕಿಯ ಹೆಸರು ರತ್ನಮ್ಮ. ಆಕೆಯ ತಂದೆ ರಾಜಣ್ಣ ಹೇಳುವ ಪ್ರಕಾರ, ರತ್ನಮ್ಮ ಎಂಬ 20 ವರ್ಷದ ಬಾಲೆ ಕೆಲ ದಿನಗಳಿಂದ ಜ್ವರ ಹಾಗೂ ಕೆಮ್ಮಿನ ಬಾಧೆಯಿಂದ ಬಳಲುತ್ತಿದ್ದರು. ಕೆಮ್ಮು ಅಧಿಕವಾಗಿದ್ದರಿಂದಾಗಿ ಆಕೆಯನ್ನು ಶನಿವಾರ (ಫೆ. 18) ರಾತ್ರಿ ಕೊಡಿಗೇನ ಹಳ್ಳಿಯ ಸರ್ಕಾರಿ ಆಸ್ಪತ್ರೆಗೆ ರಾತ್ರಿ 10 ಗಂಟೆಗೆ ಕರೆದೊಯ್ಯಲಾಯಿತು. ಜತೆಯಲ್ಲಿ ಅವರ ತಂದೆ ಹಾಗೂ ಚಿಕ್ಕಪ್ಪ ಇದ್ದರು.
ಆದರೆ, ಆಸ್ಪತ್ರೆಯಲ್ಲಿ ಆ ವೇಳೆಗೆ ಯಾವ ವೈದ್ಯರೂ ಇರಲಿಲ್ಲ. ಹಾಗಾಗಿ, ರತ್ನಮ್ಮಳನ್ನು ಪುನಃ ಹಳ್ಳಿಗೆ ವಾಪಸ್ ಕರೆದುಕೊಂಡು ಹೋದ ಅವರು, ಅಲ್ಲಿ ಹಳ್ಳಿಯಲ್ಲಿ ಗೋಪಾಲ್ ರಾವ್ ಎಂಬ ಖಾಸಗಿ ವೈದ್ಯರ ಬಳಿ ತಪಾಸಣೆ ಮಾಡಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ, ಬೆಳಗಿನ ಝಾವದ ಹೊತ್ತಿಗೆ ರತ್ನಮ್ಮಳ ಕೆಮ್ಮು ಹಾಗೂ ಜ್ವರದ ಬಾಧೆ ಅಧಿಕವಾಗಿದ್ದು ಆಕೆ ತುಂಬಾ ಅಸ್ವಸ್ಥಳಾಗಿದ್ದಾಳೆ. ಉಸಿರಾಡಲೂ ಕಷ್ಟವಾಗಿದೆ.
ಹಾಗಾಗಿ, ಬೆಳಗಿನ ಜಾವ ಪುನಃ ಆಕೆಯನ್ನು ಗೋಪಾಲ್ ರಾವ್ ಮನೆಗೆ ಕರೆದುಕೊಂಡು ಬಂದಿದ್ದಾರೆ. ಆಗ, ಆಕೆಯನ್ನು ಪರೀಕ್ಷಿಸಿದ ವೈದ್ಯರು, ತಾವು ಕೊಟ್ಟ ಔಷಧಿ ಫಲಕಾರಿಯಾಗಿಲ್ಲವೆಂದೂ ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಬೇಕೆಂದೂ ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ಪುನಃ ಆಕೆಯನ್ನು ಕೊಡಿಗೇನಹಳ್ಳಿಯಲ್ಲಿರುವ ಸರ್ಕಾರಿ ಆಸ್ಪತ್ರೆಗೇ ಕರೆದು ತರಲಾಗಿದೆ. ಆದರೆ, ಆಗ ಬೆಳಗ್ಗೆ 6: 45. ಆಗಲೂ ಅಲ್ಲಿ ವೈದ್ಯರು ಇರಲಿಲ್ಲ ಎಂದು ಹೇಳುತ್ತಾರೆ ರಾಜಣ್ಣ. ಆಸ್ಪತ್ರೆಗೆ ದಾಖಲಿಸಿ ಎರಡು ಗಂಟೆ ಕಳೆದರೂ ವೈದ್ಯರು ಬಂದಿಲ್ಲ.
ಆಗ, ವೈದ್ಯರ ಮನೆಗೆ ಬಾಲಕಿಯ ಚಿಕ್ಕಪ್ಪ(ರಾಜಣ್ಣ ಅವರ ಸಹೋದರ) ಹೋಗಿ ಅವರಿಗೆ ವಿಷಯ ತಿಳಿಸಿ ಬೇಗನೇ ಬರುವಂತೆ ಕೋರಿದ್ದಾನೆ. ಆದರೆ, ವೈದ್ಯರು ತಾವು ಉಪಹಾರ ಮುಗಿಸಿಬರುವುದಾಗಿ ಹೇಳಿ ಕಳುಹಿಸಿದ್ದಾರೆ.
ವೈದ್ಯರು ಆಸ್ಪತ್ರೆಗೆ ಬಂದಾಗ ಬೆಳಗ್ಗೆ 9:30 ಆಗಿತ್ತು. ಅಷ್ಟರಲ್ಲಿ ತೀವ್ರ ನಿತ್ರಾಣಳಾಗಿದ್ದ ಯುವತಿ ಮಾತಾಡಲೂ ಆಗದಷ್ಟು, ತಮಗೇನಾಗುತ್ತಿದೆ ಎಂಬುದನ್ನು ಹೇಳಲೂ ಸಾಧ್ಯವಾಗದ ಪರಿಸ್ಥಿತಿಯಲ್ಲಿದ್ದಳು.
ಆಗ, ಆಕೆಯನ್ನು ಪರೀಕ್ಷಿಸಿದ ವೈದ್ಯರು, ಈಕೆಯನ್ನು ತಕ್ಷಣವೇ ಮಧುಗಿರಿ ಆಸ್ಪತ್ರೆಗೆ ದಾಖಲಿಸುವಂತೆ ಕೋರಿದ್ದಾರೆ. ಆದರೆ, 20 ಕಿ.ಮೀ. ದೂರದ ಮಧುಗಿರಿ ಆಸ್ಪತ್ರೆಗೆ ಸಾಗಿಸಲು ಆ ಆಸ್ಪತ್ರೆಯಲ್ಲಿ ಆ್ಯಂಬುಲೆನ್ಸ್ ಇರಲಿಲ್ಲ. ಬೇರೆ ವ್ಯವಸ್ಥೆಯನ್ನು ಕಲ್ಪಿಸಲೂ ಆಸ್ಪತ್ರೆ ಸಿಬ್ಬಂದಿ ಸಿದ್ಧವಿರಲಿಲ್ಲ. ಹಾಗಾಗಿ, ಆಕೆಯನ್ನು ದ್ವಿಚಕ್ರ ವಾಹನದಲ್ಲೇ ಕರೆದೊಯ್ಯಲು ಬಾಲಕಿಯ ಅಪ್ಪ ಹಾಗೂ ಚಿಕ್ಕಪ್ಪ ನಿರ್ಧರಿಸಿದ್ದಾರೆ. ಆದರೆ, ದ್ವಿಚಕ್ರ ವಾಹನ ಸಿದ್ಧಗೊಳಿಸುವಷ್ಟರಲ್ಲಿ ರತ್ನಮ್ಮಳ ಪ್ರಾಣ ಪಕ್ಷಿ ಹಾದು ಹೋಗಿದೆ.
ಸರಿಯಾದ ವೇಳೆಗೆ ಆಕೆಗೆ ಸೂಕ್ತವಾದ ಚಿಕಿತ್ಸೆ ಸಿಕ್ಕಿದ್ದರೆ, ರಾತ್ರಿಯೇ ಆಕೆಯನ್ನು ಮಧುಗಿರಿ ಆಸ್ಪತ್ರೆಗೆ ಸೇರಿಸುವಂಥ ಸೌಲಭ್ಯ, ನೆರವು ದೊರೆತಿದ್ದರೆ ನಮ್ಮ ಮಗಳು ಬದುಕುತ್ತಿದ್ದಳು ಎಂದು ಕಣ್ಣೀರು ಹಾಕುತ್ತಾರೆ ರಾಜಣ್ಣ.