ಎರಡು ಬಾರಿ ಸಿಎಂ ಆಗಿದ್ದ ಕುಮಾರಸ್ವಾಮಿಯನ್ನು 'ಪೆದ್ದ'ಎಂದು ಕರೆದ ಸಿದ್ದರಾಮಯ್ಯ
ತುಮಕೂರು, ಅ 7: ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಎಚ್.ಡಿ.ಕುಮಾರಸ್ವಾಮಿಯವರ ನಡುವಿನ ವಾಕ್ಸಮರ ಯಾಕೋ ಮುಗಿಯುವಂತೆ ಕಾಣುತ್ತಿಲ್ಲ. ಮಂಗಳವಾರ ಎಚ್ಡಿಕೆ ನೀಡಿದ್ದ ಹೇಳಿಕೆಗೆ, ಬುಧವಾರ, ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.
"ಶಿರಾ ಕ್ಷೇತ್ರದ ಸಂಭಾವ್ಯ ಅಭ್ಯರ್ಥಿ ರಾಜೇಶ್ ಗೌಡನನ್ನು ನಾನು ಬಿಜೆಪಿಗೆ ಕಳುಹಿಸಿದ್ದು ಎಂದು ಅವನು (ಕುಮಾರಸ್ವಾಮಿ) ಹೇಳುತ್ತಾನೆ. ಅವನಂತಹ ಪೆದ್ದ ಯಾರೂ ಇಲ್ಲ"ಎಂದು ಸಿದ್ದರಾಮಯ್ಯ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಪುತ್ರನ ಗೆಳೆಯನನ್ನು, ಸಿದ್ದರಾಮಯ್ಯ ಬಿಜೆಪಿಗೆ ಕಳುಹಿಸಿರುವ ಮರ್ಮ ಕಾಂಗ್ರೆಸ್ಸಿಗರೂ ಬಲ್ಲರು!
"ರಾಜೇಶ್ ನನ್ನ ಮಗ ಯತೀಂದ್ರನ ಸ್ನೇಹಿತನೇ ಹೊರತು ನನ್ನ ಸ್ನೇಹಿತನಲ್ಲ. ನನ್ನ ವಯಸ್ಸೇನು, ಅವನ ವಯಸ್ಸೇನು ಎನ್ನುವುದು ಕುಮಾರಸ್ವಾಮಿಗೆ ಗೊತ್ತಾಗುವುದು ಬೇಡವೇ"ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
"ರಾಜೇಶ್ ತಂದೆ ಮೂಡಲಗಿರಿಯಪ್ಪ ಹಿಂದೆ, ಜೆಡಿಎಸ್ ನಲ್ಲಿ ಇದ್ದವರು. ಆ ವಿಶ್ವಾಸದಿಂದ ಏನಾದರೂ ಕುಮಾರಸ್ವಾಮಿಯೇ ರಾಜೇಶ್ ಅನ್ನು ಬಿಜೆಪಿಗೆ ಕಳುಹಿಸಿರಬಹುದು"ಎಂದು ಸಿದ್ದರಾಮಯ್ಯ ಹೇಳುವ ಮೂಲಕ, ಬಾಲ್ ಅನ್ನು ಅವರ ಕೋರ್ಟಿಗೆ ಎಸೆದಿದ್ದಾರೆ.
"ಇನ್ನು ಮುಂದೆಯಾದರೂ ಕುಮಾರಸ್ವಾಮಿ ಜವಾಬ್ದಾರಿಯುತ ಹೇಳಿಕೆಯನ್ನು ನೀಡಲಿ"ಎಂದು ಹೇಳಿರುವ ಸಿದ್ದರಾಮಯ್ಯ, ಆರ್.ಆರ್.ನಗರ ಮತ್ತು ಶಿರಾ ಉಪಚುನಾವಣೆಯಲ್ಲಿ ಗೆಲುವು ನಮ್ಮದೇ ಎಂದಿದ್ದಾರೆ.
"ವೈಯಕ್ತಿಕ ನೆಲೆಯಲ್ಲಿ ಸ್ನೇಹ ವಿಶ್ವಾಸವೇ ಬೇರೆ, ಆದರೆ, ಉಪ ಚುನಾವಣೆ ಘೋಷಣೆಯಾದ ನಂತರ ಪುತ್ರನ ಸ್ನೇಹಿತನನ್ನು ದಾಳವಾಗಿ ಬಳಸಿಕೊಂಡು ಮತ್ತೊಂದು ಪಕ್ಷಕ್ಕೆ ಕಳುಹಿಸುವ ಜಾಯಮಾನ ನನ್ನದಲ್ಲ. ಪುತ್ರನ ಗೆಳೆಯನನ್ನು, ಸಿದ್ದರಾಮಯ್ಯ ಬಿಜೆಪಿಗೆ ಕಳುಹಿಸಿರುವ ಮರ್ಮವನ್ನು ಕಾಂಗ್ರೆಸ್ಸಿಗರೂ ಬಲ್ಲರು" ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿದ್ದರು.