ಸಿದ್ದಗಂಗಾ ಮಠದಿಂದ ನೆರೆ ಸಂತ್ರಸ್ತರಿಗೆ 50 ಲಕ್ಷ ಪರಿಹಾರ; ಸಿಎಂಗೆ ಚೆಕ್ ಹಸ್ತಾಂತರ
ತುಮಕೂರು, ಆಗಸ್ಟ್ 21: "ಶಿವಕುಮಾರ ಶ್ರೀಗಳ ಗದ್ದುಗೆ ದರ್ಶನಕ್ಕೆ ಬಂದಿದ್ದೇನೆ. ಅವರ ಆಶೀರ್ವಾದದಿಂದ ಮತ್ತೆ ಈ ರಾಜ್ಯದ ಮುಖ್ಯಮಂತ್ರಿ ಆಗುವ ಸೌಭಾಗ್ಯ ಸಿಕ್ಕಿದೆ. ಅವರು ನಾನು ಮುಖ್ಯಮಂತ್ರಿ ಆಗಿದ್ದನ್ನು ನೋಡಿದ್ದರೆ ಎಷ್ಟು ಸಂತಸ ಪಡುತ್ತಿದ್ದರೋ. ಅವರ ಸಂತಸ ನೋಡುವ ಸೌಭಾಗ್ಯ ನನಗೆ ಇಲ್ಲ" ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬುಧವಾರ ಹೇಳಿದರು.
ತುಮಕೂರಿನ ಕ್ಯಾತ್ಸಂದ್ರದಲ್ಲಿ ಇರುವ ಸಿದ್ದಗಂಗಾ ಮಠದಲ್ಲಿ ಮಾತನಾಡಿದ ಅವರು, ಅವರ ಆಶೀರ್ವಾದ ನನ್ನ ಮೇಲೆ ಇರುತ್ತದೆ. ಅವರ ಸ್ಮರಣೆ ಮಾಡುತ್ತಲೇ ನಿತ್ಯ ಕೆಲಸ ಶುರು ಮಾಡುತ್ತೇನೆ ಎಂದು ಹೇಳಿದರು.
ಸಂತ್ರಸ್ತರ ಪರಿಹಾರಕ್ಕೆ ಕೋಟಿ ಕೊಟ್ಟ ಅನರ್ಹ ಶಾಸಕ ಸುಧಾಕರ್
ಅತಿವೃಷ್ಟಿಯಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ನಮ್ಮೆಲ್ಲ ಸಚಿವರನ್ನು ವೀಕ್ಷಣೆ ಮಾಡಿ, ಪರಿಹಾರ ಕೆಲಸ ಮಾಡಲು ಕಳುಹಿಸಿದ್ದೇನೆ. ಇನ್ನಾದರೂ ಸಂಕಷ್ಟ ಕಾಲ ಹೋಗಿ, ರೈತರು ನೆಮ್ಮದಿಯಾಗಿರುವ ಕಾಲ ಬರಲಿ ಎಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೇಳಿದರು.
ಉಮೇಶ್ ಕತ್ತಿ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಭೇಟಿ ವಿಚಾರದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ, ಆ ವರದಿಯಲ್ಲಿ ಸತ್ಯಾಂಶ ಇಲ್ಲ. ನಿನ್ನೆ ಒಂದು ಗಂಟೆಗಳ ಕಾಲ ಕತ್ತಿ, ಬಸವರಾಜ ಬೊಮ್ಮಾಯಿ ಹಾಗೂ ನಾನು ಕುಳಿತು ಮಾತನಾಡಿದ್ದೇವೆ. ಅವರಿಗೆ ಅವಕಾಶ ಸಿಗಬೇಕು ಎನ್ನುವುದು ನನ್ನ ಮನಸಿನಲ್ಲಿದೆ. ಅದನ್ನು ಸರಿಪಡಿಸುವ ಕೆಲಸ ಮಾಡುತ್ತೇನೆ ಎಂದರು.
ಕರ್ನಾಟಕ ಪ್ರವಾಹ: ಸಂತ್ರಸ್ತರಿಗೆ ನೆರವು ನೀಡುವುದು ಹೇಗೆ?
ಲಕ್ಷ್ಮಣ ಸವದಿಗೆ ಸಚಿವ ಸ್ಥಾನ ವಿಚಾರದಲ್ಲಿ ಅಸಮಾಧಾನ ವ್ಯಕ್ತವಾಗಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ರೇಣುಕಾಚಾರ್ಯ ಅವರನ್ನು ಕರೆದು ಮಾತನಾಡಿಸುತ್ತೇನೆ ಎಂದು ಯಡಿಯೂರಪ್ಪ ಹೇಳಿದರು.
ಯಡಿಯೂರಪ್ಪ ಅವರಿಗೆ ಸಿದ್ದಲಿಂಗ ಸ್ವಾಮೀಜಿ 50 ಲಕ್ಷದ ಚೆಕ್ ವಿತರಿಸಿದರು. ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ಸಿದ್ದಗಂಗಾ ಮಠದಿಂದ ನೀಡಿದ ಪರಿಹಾರದ ಚೆಕ್ ಇದು.